ಪ್ರವಾಸಿಗರ ಜೀವ ರಕ್ಷಣೆಗೆ 45 ಲಕ್ಷ ರೂ. ಅನುದಾನ
ವಿಧಾನ ಪರಿಷತ್ನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಸಂದೇಶ್ ನಾಗರಾಜ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕಳೆದ ಮೂರು ವರ್ಷಗಳಲ್ಲಿ ನೂರಾರು ಪ್ರವಾಸಿಗರು ಈ ಸ್ಥಳಗಳಲ್ಲಿ ತಮ್ಮ ಜೀವವನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಈ ಪ್ರವಾಸಿ ತಾಣಗಳಲ್ಲಿ ಬ್ಯಾರಿಕೇಡ್ ನಿರ್ಮಾಣ, ವೀಕ್ಷಣಾ ಗೋಪುರ ನಿರ್ಮಾಣ, ಸರ್ಚ್ ಲೈಟ್, ಜೀವರಕ್ಷಕ ಜಾಕೇಟ್ ಮುಂತಾದವುಗಳನ್ನು ಸರಬರಾಜು ಮಾಡುವ ಉದ್ದೇಶದಿಂದ ಈ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.[ಹೈಟೆಕ್ ಆಗಿದೆ ವಿಧಾನ ಪರಿಷತ್ ಸಭಾಂಗಣ]
ಕನ್ನಡ ಭಾಷೆಯ ಎಚ್ಚರಿಕೆಯ ಫಲಕಗಳನ್ನು ಹಾಕಿರುವುದರಿಂದ ಪ್ರವಾಸಿಗರಿಗೆ ಅದು ಅರ್ಥವಾಗುವುದಿಲ್ಲವೆಂದು ಸಂದೇಶ್ ನಾಗರಾಜ್ ಅವರು ಅಭಿಪ್ರಾಯಪಟ್ಟಾಗ ಸಚಿವರು ಸದರಿ ಪ್ರವಾಸಿ ತಾಣಗಳಲ್ಲಿ ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿಯೂ ದೊಡ್ಡದಾಗಿ ಎಚ್ಚರಿಕೆ ಫಲಕಗಳನ್ನು ಹಾಕಲು ಮೈಸೂರು ಮತ್ತು ಮಂಡ್ಯ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗಳಿಗೆ ಪತ್ರ ಬರೆಯಲಾಗಿದೆ ಹಾಗೂ ಈ ಪ್ರವಾಸಿ ತಾಣಗಳಲ್ಲಿ ಪೊಲೀಸ್ ಚೌಕಿ ಸ್ಥಾಪಿಸುವ ಜೊತೆಗೆ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಸಹ ಕಲ್ಪಿಸುವಂತೆ ಪೊಲೀಸ್ ಇಲಾಖೆಯನ್ನು ಕೋರಲಾಗುವುದೆಂದು ಸಚಿವರು ಭರವಸೆ ನೀಡಿದರು.
ಪ್ರವಾಸೋದ್ಯಮ ಬೆಳೆಯಬೇಕಾದರೆ ಪ್ರವಾಸಿಗರ ಜೀವ ರಕ್ಷಣೆಯ ಜವಾಬ್ದಾರಿ, ಮೂಲಭೂತ ಸೌಕರ್ಯ ಹಾಗೂ ಮಾನವ ಸಂಪನ್ಮೂಲದ ಅವಶ್ಯಕೆ ಇರುವುದರಿಂದ ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಿಗೆ ಈ ಮೂರು ಸೌಲಭ್ಯಗಳನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಉತ್ತರಿಸಿದರು.