ಕರ್ನಾಟಕದಲ್ಲಿ ಕೊವಿಡ್-19 ತಪಾಸಣೆ ವೇಗ 3 ಪಟ್ಟು ಹೆಚ್ಚಳ: ಇಲ್ಲಿದೆ ಕಾರಣ
ಬೆಂಗಳೂರು, ಅಕ್ಟೋಬರ್.06: ಕೊರೊನಾವೈರಸ್ ಸೋಂಕಿನ ಹರಡುವಿಕೆ ಪತ್ತೆ ಮಾಡುವುದಕ್ಕೆ ವೈದ್ಯಕೀಯ ತಪಾಸಣೆ ಮತ್ತು ಮಾದರಿಗಳ ಪರೀಕ್ಷೆ ವೇಗವನ್ನು ಹೆಚ್ಚಿಸಲೇಬೇಕಾದ ಅನಿವಾರ್ಯತೆಯು ಸರ್ಕಾರಗಳಿಗೆ ಎದುರಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆ ಇರಿಸಿದೆ.
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನ ತಪಾಸಣೆಯ ವೇಗವು ಮೂರು ಪಟ್ಟು ಹೆಚ್ಚಿಸುವುದಕ್ಕೆ ಸರ್ಕಾರವು ಯೋಜನೆ ರೂಪಿಸಿದೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ(PPP) ಮಾದರಿಯಲ್ಲಿ ಕೊವಿಡ್-19 ಸೋಂಕು ತಪಾಸಣಾ ಪ್ರಯೋಗಾಲಯಗಳನ್ನು ಸ್ಥಾಪಿಸುವುದಕ್ಕೆ ಮುಂದಾಗಿದೆ.
ಭಾರತದಲ್ಲಿ 24 ಗಂಟೆಯಲ್ಲಿ 61,267 ಹೊಸ ಕೋವಿಡ್ ಪ್ರಕರಣ
ಕೊವಿಡ್-19 ಸೋಂಕಿನ ಮಾದರಿ ಪರೀಕ್ಷೆಗಾಗಿ ಆರ್ ಟಿ-ಪಿಸಿಆರ್ ಪ್ರಯೋಗಾಲಗಳನ್ನು ತೆರೆಯಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನಿರ್ದೇಶನದ ಮೇರೆಗೆ ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಈ ಕಾರ್ಯವನ್ನು ತ್ವರಿತಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ವೈಟ್ ಫೀಲ್ಡ್ ನಲ್ಲಿ ಕೊವಿಡ್-19 ಪರೀಕ್ಷೆಗೆ ಪ್ರಯೋಗಾಲಯ
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಇರೋ-ಫೈನಾನ್ಸ್ ಕ್ಲಿನಿಕಲ್ ಜೆನೆಟಿಕ್ಸ್ ಇಂಡಿಯಾದಲ್ಲಿ ಕೊರೊನಾವೈರಸ್ ಸೋಂಕು ತಪಸಣಾ ಪ್ರಯೋಗಾಲಯಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಚಾಲನೆ ನೀಡಿದರು. ಪ್ರತಿನಿತ್ಯ ಈ ಲ್ಯಾಬ್ ನಲ್ಲಿ 5,000 ಜನರನ್ನು ಕೊವಿಡ್-19 ಸೋಂಕು ತಪಾಸಣೆಗೊಳಪಡಿಸುವ ಗುರಿಯನ್ನು ಹೊಂದಲಾಗಿದೆ. ಕಳೆದ ಆರು ತಿಂಗಳಿನಲ್ಲಿ ರಾಜ್ಯಾದ್ಯಂತ 144 ಕೊವಿಡ್-19 ತಪಾಸಣಾ ಲ್ಯಾಬ್ ಗಳನ್ನು ತೆರೆಯಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಗುತ್ತಿಗೆ ಆಧಾರದಲ್ಲಿ ಪ್ರಯೋಗಾಲಯ ತೆರೆಯಲು ಒಪ್ಪಂದ
ಕೊರೊನಾವೈರಸ್ ಸೋಂಕು ತಪಾಸಣೆ ನಡೆಸುವುದಕ್ಕೆ ರಾಜ್ಯಾದ್ಯಂತ ಆರ್ ಟಿ-ಪಿಸಿಆರ್ ಪ್ರಯೋಗಾಲಯಗಳನ್ನು ತೆರೆಯಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗಳಿಂದ ಗುತ್ತಿಗೆ ಕರೆಯಲಾಗುತ್ತದೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಲ್ಯಾಬ್ ತೆರೆಯಲು ಗುತ್ತಿಗೆ ನೀಡಲಾಗುತ್ತದೆ ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಕೊವಿಡ್-19 ಸೋಂಕು ತಪಾಸಣೆಯಲ್ಲಿ ಮೈಲಿಗಲ್ಲು
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಈಗಾಗಲೇ ಹೆಚ್ಚಿಸಲಾಗಿದ್ದು, ಹೊಸ ಮೈಲಿಗಲ್ಲು ಸ್ಥಾಪಿಸಿದೆ. ರಾಜ್ಯಾದ್ಯಂತ ಈವರೆಗೂ 50 ಲಕ್ಷಕ್ಕಿಂತ ಹೆಚ್ಚು ಜನರನ್ನು ಕೊವಿಡ್-19 ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ. ಪ್ರತಿನಿತ್ಯ 1.5 ಲಕ್ಷ ಜನರಿಗೆ ಕೊರೊನಾವೈರಸ್ ಸೋಂಕಿನ ಪರೀಕ್ಷೆ ನಡೆಸಲಾಗುತ್ತಿದ್ದು, ಈ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸುವ ಗುರುಯನ್ನು ಹಾಕಿಕೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಒಂದೇ ದಿನ 67303 ಜನರಿಗೆ ಕೊರೊನಾವೈರಸ್ ಪರೀಕ್ಷೆ
ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಸಾರ್ವಜನಿಕರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸುವುದು ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆ ರಾಜ್ಯದಲ್ಲಿ 24 ಗಂಟೆಗಳಲ್ಲೇ 25770 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 41533 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 67303 ಜನರನ್ನು ಕೊವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 53,27,463 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.
ರಾಜ್ಯದಲ್ಲಿ ಕೊರೊನಾವೈರಸ್ ಪ್ರಕರಣ ಸಂಖ್ಯೆ
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 647712ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 7051 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ. ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 84 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 9370ಕ್ಕೆ ಏರಿಕೆಯಾಗಿದೆ. ಕೊರೊನಾವೈರಸ್ ಒಟ್ಟು 647712 ಸೋಂಕಿತ ಪ್ರಕರಣಗಳ ಪೈಕಿ 522846 ಸೋಂಕಿತರು ಗುಣಮುಖರಾಗಿದ್ದಾರೆ. 115477 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳಲ್ಲಿ 7064 ಕೊವಿಡ್-19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.
Recommended Video