ರೆಸಾರ್ಟ್ ರಾಜಕೀಯದ ಕೇಂದ್ರಬಿಂದು ಕರ್ನಾಟಕ
ಬೆಂಗಳೂರು, ಜುಲೈ 31 : ಮೋಡಗಳಿದ್ದರೂ ಮಳೆಯಿಲ್ಲ, ಆಗಾಗ ಬಿಸಿಲಿದ್ದರೂ ಧಗೆಯಿಲ್ಲ. ಸೊಳ್ಳೆಗಳು ಕಚ್ಚಿ ಡೆಂಗ್ಯೂ, ಚಿಕೂನ್ಗುನ್ಯಾ ಅಥವಾ ಟೈಫೈಡ್ ಬರದಂತೆ ವ್ಯವಸ್ಥೆ ಮಾಡಿಕೊಂಡರೆ ಸದ್ಯಕ್ಕೆ ಭಾರತದಲ್ಲಿ ಬೆಂಗಳೂರಿಗಿಂತ ಪ್ರಶಸ್ತ ಜಾಗವೇ ಇಲ್ಲ.
ಗುಜರಾತ್ ನಲ್ಲಿ ರಾಜ್ಯಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರಕ್ಕೆ ಹೆದರಿ ಬೆಂಗಳೂರಿನ ಈಗಲ್ಟನ್ ಗೋಲ್ಫ್ ರೆಸಾರ್ಟಿಗೆ ಆಗಮಿಸಿರುವ ಕಾಂಗ್ರೆಸ್ಸಿನ 44 ಶಾಸಕರು ಇಂತಹ ಹವಾನಿಯಂತ್ರಿತ ಸೂಪರ್ ವಾತಾವರಣದಲ್ಲಿ ಸಖತ್ ಮಜಾ ಉಡಾಯಿಸುತ್ತಿದ್ದಾರೆ.
NTR ಮುನ್ನುಡಿ ಬರೆದಿದ್ದ ರೆಸಾರ್ಟ್ ರಾಜಕಾರಣ: ಅಂದಿನಿಂದ ಇಂದಿನವರೆಗೆ!
ಗುಜರಾತಿನಲ್ಲಿ ಬಾರೀ ಮಳೆಯಾಗಿ ಪ್ರವಾಹ ಉಂಟಾಗಿ ಜನರು ಸಂಕಷ್ಟದಲ್ಲಿರುವಾಗ ಜನರೇ ಆರಿಸಿರುವ ಇವರು ಹೆಂಡತಿ ಮಕ್ಕಳೊಂದು ಮೋಜು ಮಸ್ತಿ ಮಾಡುವುದು ಎಷ್ಟು ಸರಿ ಎಂದು ಟೀಕಾಪ್ರಹಾರ ಎದುರಿಸುತ್ತಿದ್ದರೆ, ಇವರಿಗೆ ಭರ್ಜರಿ ಅತಿಥಿ ಸತ್ಕಾರ ಮಾಡುತ್ತಿರುವ ಸಹೋದರದ್ವಯರಾದ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಅವರು ಕೂಡ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಇದೇನೇ ಇರಲಿ, ಕರ್ನಾಟಕಕ್ಕೆ ರೆಸಾರ್ಟ್ ರಾಜಕೀಯ ಹೊಸದೇನಲ್ಲ. 2004ರಲ್ಲಿ ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದಾಗ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಬಹುಮತ ಸಾಬೀತುಪಡಿಸಬೇಕಾದ ಸಂದರ್ಭದಲ್ಲಿ, ಕುಮಾರಸ್ವಾಮಿ ನಡೆಸಿದ್ದ ರೆಸಾರ್ಟ್ ರಾಜಕೀಯವನ್ನು ಯಾರೂ ಮರೆತಿರುವುದಿಲ್ಲ.
ಕಾಂಗ್ರೆಸ್ ರೆಸಾರ್ಟ್ ರಾಜಕಾರಣ: ತರಾಟೆಗೆ ತೆಗೆದುಕೊಂಡ ಟ್ವಿಟ್ಟಿಗರು!
ಕರ್ನಾಟಕದ ರಾಜಕಾರಣಿಗಳು ಮಾತ್ರವಲ್ಲ, ಕರ್ನಾಟಕದಲ್ಲಿಯೇ ಇತರ ಪಕ್ಷಗಳು ಕೂಡ ರೆಸಾರ್ಟ್ ರಾಜಕೀಯ ಮಾಡಿವೆ. ಇದು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿಯೂ ತಾಂಡವವಾಡುತ್ತಿದೆ. ಕುರುಡು ಕಾಂಚಾಣದ ನರ್ತನದ ಮುಂದೆ ಮೌಲ್ಯಾಧಾರಿತ ರಾಜಕಾರಣ ಸತ್ತುಹೋಗುತ್ತಿದೆ.
ಶಾಸಕರನ್ನು ಬೆಂಗಳೂರಿಗೆ ಕರೆತಂದಿದ್ದ ಎನ್ಟಿಆರ್
1984ರಲ್ಲಿ ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ಆಂಧ್ರಪ್ರದೇಶದ ಅಂದಿನ ಪ್ರಖರ ರಾಜಕಾರಣಿ ಎನ್ ಟಿ ರಾಮರಾವ್ ಅವರು ತಮ್ಮ ಶಾಸಕರನ್ನು ಬೆಂಗಳೂರಿಗೆ ಕರೆತಂದು ಒಂದು ತಿಂಗಳವರೆಗೆ ರೆಸಾರ್ಟಿನಲ್ಲಿ ಇರಿಸಿದ್ದರು. ಅಂದಿನ ರಾಜ್ಯಪಾಲರು ರಾಯರಿಗೆ ಬಹುಮತ ಸಾಬೀತುಪಡಿಸಲು ಹೇಳಿದ್ದ ಸಮಯವದು. ಆಗ ಅವರ ಸ್ನೇಹಿತರಾಗಿದ್ದ ರಾಮಕೃಷ್ಣ ಹೆಗಡೆ ಅವರೇ ದಾಸಪ್ರಕಾಶ ಪ್ಯಾರಡೈಸ್ ನಲ್ಲಿ ಭರ್ಜರಿ ಆತಿಥ್ಯವನ್ನು ನೀಡಿದ್ದರು.
ವಿಲಾಸರಾವ್ ಮಾಡಿದ್ದು ಅದನ್ನೇ
ನಂತರ 2002ರಲ್ಲಿ ಮಹಾರಾಷ್ಟ್ರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದಾಗ, ಕುದುರೆ ವ್ಯಾಪಾರ ನಡೆಯುತ್ತದೆಂದು ಕಾಂಗ್ರೆಸ್ ನಾಯಕ ವಿಲಾಸರಾವ್ ದೇಶಮುಖ್ ಅವರು ತಮ್ಮ ಶಾಸಕರನ್ನು ಬೆಂಗಳೂರಿಗೆ ಕರೆತಂದು ರೆಸಾರ್ಟಿನಲ್ಲಿ ಝೇಂಡಾ ಊರಿದ್ದರು. ಆಗ ಎನ್ಸಿಪಿ ಸಹಾಯದಿಂದ, ಬಿಜೆಪಿ ಮತ್ತು ಶಿವಸೇನೆಯ ಮೈತ್ರಿಕೂಡವನ್ನು ಸೋಲಿಸಿ ಅಧಿಕಾರದ ಗದ್ದುಗೆಯೇರಿದ್ದರು.
ಜನಾರ್ದನ ರೆಡ್ಡಿ ಕೃಪಾಕಟಾಕ್ಷದಿಂದ
2004ರಲ್ಲಿ ಕರ್ನಾಟಕದಲ್ಲಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ 90 ಸೀಟು, ಕಾಂಗ್ರೆಸ್ 65 ಮತ್ತು ಜೆಡಿಎಸ್ 58 ಸೀಟುಗಳನ್ನು ಗಳಿಸಿದ್ದವು. ಆಗ ಜನಾರ್ದನ ರೆಡ್ಡಿ ಕೃಪಾಕಟಾಕ್ಷದಿಂದ ಬಿಜೆಪಿ ಕುದುರೆ ವ್ಯಾಪಾರಕ್ಕಿಳಿಯಬಹುದು ಎಂಬ ಹೆದರಿಕೆಯಿಂದ ಕುಮಾರಸ್ವಾಮಿಯವರು ತಮ್ಮ ಶಾಸಕರನ್ನು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟಿನಲ್ಲಿ ಬೀಡುಬಿಡಿಸಿದ್ದರು.
ಗೋವಾದಲ್ಲಿ ಬೃಹನ್ನಾಟಕ
2008ರಲ್ಲಿ ಕೂಡ ಬಿಜೆಪಿಗೆ ಬಹುಮತ ಸಾಬೀತುಪಡಿಸಲು ಕೆಲ ಮತಗಳ ಅಗತ್ಯವಿದ್ದಾಗ, ರೆಡ್ಡಿಯ ಮೂಲಕ ಪಕ್ಷೇತರ ಶಾಸಕರಿಗೆ ಗಾಳ ಹಾಕುತ್ತಿದ್ದಾಗ, ಕುಮಾರಸ್ವಾಮಿಯವರು ಪಕ್ಷೇತರರನ್ನು ಹೈಜಾಕ್ ಮಾಡಿಕೊಂಡು ರಹಸ್ಯವಾಗಿ ಗೋವಾಗೆ ತೆರಳಿದ್ದರು. ಆಗ ರೆಡ್ಡಿ ಮತ್ತು ಸ್ವಾಮಿ ನಡುವೆ ಬೃಹನ್ನಾಟಕವೇ ನಡೆದಿತ್ತು. ಕಡೆಗೆ, ಆಪರೇಷನ್ ಕಮಲದ ಮೂಲಕ ಪಕ್ಷೇತರರನ್ನು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು.
ಜನಾರ್ದನ ರೆಡ್ಡಿ ವರ್ಸಸ್ ಯಡಿಯೂರಪ್ಪ
2009ರಲ್ಲಿ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ನಡುವೆ ಅಸಮಾಧಾನ ಭುಗಿಲೆದ್ದಿತ್ತು. ಶೋಭಾ ಅವರನ್ನು ಕಿತ್ತೊಗೆಯಬೇಕೆಂದು ರೆಡ್ಡಿ ಬ್ರದರ್ಸ್ ತಿರುಗಿಬಿದ್ದಿದ್ದರು. ಆಗ ಅಕ್ರಮ ಗಣಿಗಾರಿಕೆಯಲ್ಲಿ ಸಿಲುಕಿದ್ದ ರೆಡ್ಡಿಗಳ ವಿರುದ್ಧ ಭಿನ್ನಮತದ ಬಾವುಟ ಹಾರಿಸುವ ಜವಾಬ್ದಾರಿಯನ್ನು ರೇಣುಕಾಚಾರ್ಯ ಅವರಿಗೆ ನೀಡಲಾಗಿತ್ತು. ಆಗ ಭಿನ್ನಮತೀಯರನ್ನು ಬೆಂಗಳೂರಿನ ಹೊರವಲಯದಲ್ಲಿರುವ ಸಿಲ್ವರ್ ಓಕ್ ರೆಸಾರ್ಟಿಗೆ ಕರೆದುಕೊಂಡು ಹೋಗಿ ರೇಣುಕಾಚಾರ್ಯ ಸಭೆ ನಡೆಸಿದ್ದರು.
ಗುಜರಾತಿನಲ್ಲೂ ಆಪರೇಷನ್ ಕಮಲ
ಈಗ ಇದೇ ತಂತ್ರಗಾರಿಕೆಯನ್ನು ಬಿಜೆಪಿ ಗುಜರಾತಿನಲ್ಲೂ ನಡೆಸಿದೆ. ಮೂರು ರಾಜ್ಯಸಭಾ ಸ್ಥಾನಗಳಿಗೆ ಆಗಸ್ಟ್ 8ರಂದು ಚುನಾವಣೆ ನಡೆಯಲಿದೆ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಮತಗಳಿಗಾಗಿ ಬಿಜೆಪಿಯವರು ಆಪರೇಷನ್ ಕಮಲ ಮಾಡಬಹುದೆಂಬ ಹೆದರಿಕೆಯಿಂದ ಕಾಂಗ್ರೆಸ್ಸಿನವರು ಬೆಂಗಳೂರಿನ ರೆಸಾರ್ಟಿಗೆ ಬಂದು ಠಿಕಾಣಿ ಹೂಡಿದ್ದಾರೆ.