ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿ ಪ್ರತಿಭಟನೆ, ಶಿಕ್ಷಣ ಸಚಿವರ ಉಡಾಫೆ
ಬೆಂಗಳೂರು, ಜೂನ್ 18: ಪಠ್ಯಪುಸ್ತಕದ ಮರು ಪರಿಷ್ಕರಣೆ ವಿವಾದ ಹೆಚ್ಚುತ್ತಿದೆ. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸೇರಿದಂತೆ ಸಾಹಿತಿಗಳು, ವಿರೋಧ ಪಕ್ಷಗಳು ಒಂದಾಗಿ ಪ್ರತಿಭಟಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮಾತ್ರ ಪ್ರತಿಭಟಿಸುವವರು ಪ್ರತಿಭಟಿಸಲಿ ಎಂದು ಉಡಾಫೆಯಾಗಿ ಹೇಳಿದ್ದಾರೆ.
ರೋಹಿತ್ ಚಕ್ರತೀರ್ಥ ಸಮಿತಿ ಅಧ್ಯಕ್ಷತೆಯಲ್ಲಿ ನಡೆದ ಪಠ್ಯಪುಸ್ತಕ ಮರು ಪರಿಷ್ಕರಣೆ ವಿವಾದದ ಕೇಂದ್ರ ಬಿಂದುವಾಗಿದೆ. ರೋಹಿತ್ ಚಕ್ರತೀರ್ಥ, ಕುವೆಂಪು, ನಾಡಗೀತೆ, ಡಾ. ಬಿ. ಆರ್. ಅಂಬೇಡ್ಕರ್, ಬಸವಣ್ಣ ಸೇರಿದಂತೆ ಹಲವರನ್ನು ಅವಮಾನಿಸಿದ್ದಾರೆ ಎಂಬುದು ಆರೋಪ.
ರಾಜ್ಯಸಭೆ ಚುನಾವಣೆ: ಕುಪೇಂದ್ರರೆಡ್ಡಿ ಆಯ್ಕೆ ಸ್ವತಃ ದೇವೇಗೌಡ, ಕುಮಾರಸ್ವಾಮಿಗೂ ಬೇಕಿರಲಿಲ್ಲ..
ಪಠ್ಯಪುಸ್ತಕ ಪರಿಷ್ಕರಣೆಯನ್ನು ಹಿಂಪಡೆದು ಬರಗೂರು ರಾಮಚಂದ್ರಪ್ಪ ಪರಿಷ್ಕರಣೆಯ ಹಳೇಯ ಪುಸ್ತಕವನ್ನೇ ಮುಂದುವೆರೆಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದ ಬಳಿಕ ಶಿಕ್ಷಣ ಸಚಿವರನ್ನು ಪಠ್ಯಪುಸ್ತಕ ಮರುಪರಿಷ್ಕರಣೆಯ ವಿರುದ್ದ ಬೃಹತ್ ಪ್ರತಿಭಟನೆ ಬಗ್ಗೆ ಪ್ರಶ್ನಿಸಲಾಯಿತು.
"ಪ್ರತಿಭಟನೆ ಮಾಡುವವರು ಮಾಡಲಿ" ಎಂದು ಉಡಾಫೆಯ ಉತ್ತರವನ್ನು ಸಚಿವರು ನೀಡಿದ್ದಾರೆ. ಅಂದರೆ ಪಠ್ಯಪುಸ್ತಕ ಮರುಪರಿಷ್ಕರಣೆ ಮುಗಿದಿದೆ ಕೆಲವೊಂದು ಸಣ್ಣ ಪುಟ್ಟ ತಿದ್ದುಪಡಿಯನ್ನು ಗಮನಿಸಿ ಪಠ್ಯಪುಸ್ತರವನ್ನು ಮುದ್ರಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವರು ಪ್ರತಿಭಟನೆ ಬಗ್ಗೆ ಕ್ಯಾರೇ ಎನ್ನುವುದಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
ಮುದ್ರಣಕ್ಕೆ ಪೇಪರ್ ಸಮಸ್ಯೆ
ಶಿಕ್ಷಣ ಸಚಿವವರ ಮಾತಿನ ವರಸೆ ಬದಲಾದಂತೆ ಕಾಣಿಸುತ್ತಿದೆ. ಶಾಲೆಗಳು ಪ್ರಾರಂಭವಾಗುವ ಮುನ್ನ ಶಾಲೆಗಳು ಪ್ರಾರಂಭವಾಗುವ ಸಮಯಕ್ಕೆ ಪಠ್ಯಪುಸ್ತಕ ಪೂರೈಕೆಯನ್ನು ಮಾಡುತ್ತೇವೆ ಎಂದು ಹೇಳಿದ್ದರು. ಶಾಲೆಗಳು ಪ್ರಾರಂಭವಾದ ಬಳಿಕ ಪಠ್ಯಪುಸ್ತಕದ ವಿವಾದ ವಿಪರೀತವಾಗಿದೆ. ಶಾಲೆಗಳಲ್ಲಿ ಕಲಿಕಾ ಚೇತರಿಕೆ ನಡೆಯುತ್ತಿದೆ. ಜೂನ್ 15ರೊಳಗೆ ಪಠ್ಯ ಪುಸ್ತಕ ಪೂರೈಕೆಯಾಗಲಿದೆ ಎಂದು ತಿಳಿಸಿದ್ದರು. ಆದರೆ ಇದೀಗ ರಷ್ಯಾ ಮತ್ತು ಉಕ್ರೇನ್ನಲ್ಲಿ ಯುದ್ದ ನಡೆಯುತ್ತಿರುವುದರ ಪರಿಣಾಮದಿಂದಾಗಿ ಪೇಪರ್ ಕೊರತೆ ಉಂಟಾಗುತ್ತಿದೆ ಎಂದು ಹೊಸ ವರಸೆಯನ್ನು ತೆಗೆದಿದ್ದಾರೆ.
ಜುಲೈ 15ರೊಳಗೆ ಪಠ್ಯಪುಸ್ತಕ ಎಂದ ಸಚಿವರು
ಶಿಕ್ಷಣ ಸಚಿವರು ಮಾತನಾಡುತ್ತಾ, "ಪ್ರತಿ ವರ್ಷವೂ ಆಗಸ್ಟ್ , ನವೆಂಬರ್ವರೆಗೂ ಪಠ್ಯಪುಸ್ತಕ ಸಮಸ್ಯೆ ಎದುರಾಗಲಿದೆ" ಎಂಬ ತಮ್ಮ ಇಲಾಖೆಯ ನ್ಯೂನ್ಯತೆಯನ್ನು ತಾವೇ ಒಪ್ಪಿಕೊಂಡಿದ್ದಾರೆ. ರಷ್ಯಾ ಮತ್ತು ಉಕ್ರೇೆನ್ ಯುದ್ದದ ಪರಿಣಾಮ ಪೇಪರ್ ಕೊರತೆಯ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ಪ್ರಿಂಟ್ ಮಾಡಲು ವಿಪರೀತ ತೊಂದರೆಯಾಗಿದೆ. ಇದರಿಂದಾಗಿ ಈ ಸಲವು ಮೊದಲ ಸೆಮಿಸ್ಟರ್ ಅವಧಿ ಮುಗಿದರೂ ಪಠ್ಯಪುಸ್ತಕ ಪೂರ್ಣ ಪ್ರಮಾಣದಲ್ಲಿ ಸಿಗುವುದು ಅನುಮಾನವಾಗಿದೆ. ಆದರೂ ಶಿಕ್ಷಣ ಸಚಿವರು ಮತ್ತೊಂದು ದಿನಾಂಕವನ್ನು ಹೇಳಿದ್ದಾರೆ. ಜುಲೈ 15ರೊಳಗೆ ಪಠ್ಯಪುಸ್ತಕವನ್ನು ಪೂರೈಕೆಯಾಗಲಿದೆ ಎಂದಿದ್ದಾರೆ.
ಶಿಕ್ಷಕರ ಪರದಾಟ ವಿದ್ಯಾರ್ಥಿಗಳ ಗೋಳಾಟ
ಶಿಕ್ಷಣವನ್ನು ಕಲಿಯ ಸಮಯದಲ್ಲಿ ಕಲಿಕಾ ಸಾಮಗ್ರಿಗಳು ಬಹು ಮುಖ್ಯ ಅದರಂತೆಯೇ ಪಠ್ಯಪುಸ್ತಕಗಳು ಅತಿ ಅವಶ್ಯಕವಾಗಿ ಬೇಕೆಬೇಕು. ಮಕ್ಕಳು ಪಠವನ್ನು ಕಲಿಯಲು ಮನೆಯಲ್ಲಿ ವ್ಯಾಸಂಗ ಮಾಡಲು ಪಠ್ಯಪುಸ್ತಕದ ಅವಶ್ಯಕತೆ ಇದ್ದೇ ಇದೆ. ಆದರೆ ಸರ್ಕಾರ ಮಾತ್ರ ಕೆಲವು ಕತೆಗಳನ್ನು ಹೇಳುತ್ತ ನೆಪವನ್ನು ಹುಡುಕುತ್ತ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡುತ್ತಿದೆ. ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವನ್ನೇ ತಲುಪಿಸದೇ ಪಾಠವನ್ನು ಮಾಡುವಂತೆ ಶಿಕ್ಷಕರಿಗೆ ಹೇಳಿದರೇ ಪಾಠ ಮಾಡುವುದಾದರು ಹೇಗೆ..? ವಿದ್ಯಾರ್ಥಿಗಳು ಪಾಠವನ್ನು ಕಲಿಯುವುದಾದರೂ ಹೇಗೆ?. ಶಿಕ್ಷಣ ಮಕ್ಕಳ ಹಕ್ಕು ಎಂದು ಹೇಳುವ ಸಂವಿಧಾನದ ಆಶಯಕ್ಕೆ ದಕ್ಕೆ ತಂದರೆ ಮಕ್ಕಳ ವಿದ್ಯಾಭ್ಯಾಸವೂ ಅಂತಃಪತನಕ್ಕೆ ಇಳಿಯಲಿದೆ.
ವಿದ್ಯಾರ್ಥಿಗಳಿಗೆ ಹಳೇಯ ಪುಸ್ತಕವೇ ಗತಿ
ಇನ್ನು ಖಾಸಗಿ, ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮರುಪರಿಷ್ಕರಣೆಯ ಬಹುತೇಕ ಪಠ್ಯಪುಸ್ತಕ ಪೂರೈಕೆಯೇ ಆಗಿಲ್ಲ. ಇದರಿಂದ ಶಿಕ್ಷಕರು ಕರ್ನಾಟಕ ಟೆಕ್ಸ್ಟ್ ಬುಕ್ ಸೊಸೈಟಿಯಲ್ಲಿ ಪುಸ್ತಕವನ್ನು ಡೌನ್ ಲೋಡ್ ಮಾಡಿಕೊಂಡು ಪಾಠವನ್ನು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಶಾಲೆಗಳಲ್ಲಿ ಹಳೇಯ ಪುಸ್ತಕವನ್ನೇ ಬುಕ್ ಬ್ಯಾಂಕ್ ಮಾಡಿಕೊಂಡು (ಹಳೇಯ ವಿದ್ಯಾರ್ಥಿಗಳಿಂದ ಪುಸ್ತಕ ಸಂಗ್ರಹಣೆ) ಹೊಸ ವಿದ್ಯಾರ್ಥಿಗಳಿಗೆ ನೀಡಿ ಪರಿಷ್ಕರಣೆಗೆ ಒಳಪಡದ ಪಠ್ಯವನ್ನು ಬೋಧಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಇವೆಲ್ಲದರ ನಡವೆ ಮತ್ತೆ ಮತ್ತೆ ಪಠ್ಯಪುಸ್ತಕದ ಗೊಂದಲಕ್ಕೆ ಕೊನೆ ಯಾವಾಗ?, ಪಠ್ಯಪುಸ್ತಕ ಪೂರೈಕೆ ಯಾವಾಗ ಅನ್ನೋ ಪ್ರಶ್ನೆಗಳಿಗೆ ಮಾತ್ರ ಸ್ಪಷ್ಟವಾದ ಉತ್ತರ ಸಿಗುತ್ತಿಲ್ಲ.