ಶಿಕ್ಷಣದಲ್ಲಿ ಕೇಸರೀಕಣ: ಮೇ 31 ರಂದು ಬೃಹತ್ ಪ್ರತಿಭಟನೆಗೆ ಕರೆ
ಬೆಂಗಳೂರು, ಮೇ 23: ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಇಂದು ನಗರ ಕೆ.ಆರ್. ಸರ್ಕಲ್ನಲ್ಲಿರುವ ಅಲುಮ್ನಿ ಹಾಲ್ ನಲ್ಲಿ ರಾಜ್ಯ ಮಟ್ಟದ ಸಮಾಲೋಚನಾ ಸಭೆಯನ್ನು ನಡೆಯಿತು. ಪಠ್ಯಪುಸ್ತಕದಲ್ಲಿ ಕೇಸರೀಕರಣ ವಿರೋಧಿಸಿ ರಾಜ್ಯದಾದ್ಯಂತ ಮೇ 31ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.
"ರಾಜ್ಯ ಬಿಜೆಪಿಯ ಸರ್ಕಾರ ರಚಿಸಿರುವ ಪಠ್ಯ ಪುಸ್ತಕ ಪುನರ್ ಪರಿಷ್ಕರಣ ಸಮಿತಿ ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವಿಲ್ಲ. ಈ ಸಮಿತಿಯ ಏಳು ಜನರಲ್ಲಿ ಆರು ಜನ ಬ್ರಾಹ್ಮಣರು ಇರುವುದು ಹಾಗೂ ಹೊಸದಾಗಿ ಸೇರಿಸಿರುವ ಹತ್ತು ಪಠ್ಯಗಳಲ್ಲಿ ಒಂಬತ್ತು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಆಗಿರುವುದು ಸಾಮಾಜಿಕ ನ್ಯಾಯ ಸೂತ್ರಕ್ಕೆ ದೊಡ್ಡ ಅಪಾಯಕಾರಿ. ಈ ಶಿಕ್ಷಣದ ಕೋಮುವಾದೀಕಣದ ವಿರುದ್ದ ಎಂಬತ್ತರ ದಶಕದಲ್ಲಿ ನಡೆದ ಜನಚಳುವಳಿಗಳ ಸ್ವರೂಪದಲ್ಲಿ ಜನ ಬೀದಿಗಿಳಿಯಬೇಕು," ಎಂದು ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಕರೆ ನೀಡಿದರು.
ಸಮಾಲೋಚನಾ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಈಗಿವೆ
1. ಪಠ್ಯ ಪುಸ್ತಕ ಪುನರ್ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸಮಿತಿ ರಚಿಸಿರುವ ಪಠ್ಯ ಪುಸ್ತಕಗಳನ್ನು ಹಂಚದೆ ತಡೆಯಬೇಕು
2. ಮೊದಲು ಇದ್ದಂತಹ ಪಠ್ಯ ಪುಸ್ತಕಗಳನ್ನೇ ಈ ವರ್ಷದ (2022-23) ಶೈಕ್ಷಣಿಕ ವರ್ಷಕ್ಕೆ ಮುಂದುವರಿಸಬೇಕು
3. ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪುನರ್ ಪರಿಷ್ಕರಣ ಸಮಿತಿಯನ್ನ ಕೂಡಲೇ ವಿಸರ್ಜನೆ ಮಾಡಬೇಕು
4. ರಾಷ್ಟ್ರಕವಿ ಕುವೆಂಪುರನ್ನು ಅವಮಾನಿಸಿರುವ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಿಂದ ತೆಗೆಯಬೇಕು
5. ಶಿಕ್ಷಣ ಇಲಾಖೆಯಲ್ಲಿ ಗೊಂದಲ ಸೃಷ್ಟಿಸುತ್ತಿರುವ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆ ನೀಡಬೇಕು
ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಮಾತನಾಡಿ, "ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಪ್ರಜಾಪ್ರಭುತ್ವ ವಿರೋಧಿ ಚಿಂತನೆಗಳಿಂದ ಕೂಡಿದ ಪಠ್ಯವನ್ನು ಈ ನಾಡಿನ ಮಕ್ಕಳ ಮೇಲೆ ಹೇರಲು ಹೊರಟಿದೆ. ನೂತನ ಶಿಕ್ಷಣ ನೀತಿಯ ಗುರಿಯೇ ಶಿಕ್ಷಣದ ಕೋಮುವಾದೀಕರಣ ಆಗಿರುವುದರಿಂದ ಎನ್ಇಪಿ ಜಾರಿ ಅಂದರೆ ರಾಜ್ಯದ ವಿದ್ಯಾರ್ಥಿಗಳು ಓದುವ ಪಠ್ಯಪುಸ್ತಕಗಳಲ್ಲಿ ಬಿಜೆಪಿ, ಆರ್ಎಸ್ಎಸ್ ಕೋಮುವಾದಿ ವಿಚಾರಗಳನ್ನು ತುಂಬುವುದಾಗಿದೆ," ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪಾಠವನ್ನು 10ನೇ ತರಗತಿ ಪಠ್ಯದಿಂದ ಕೈ ಬಿಟ್ಟು ಸ್ವಾತಂತ್ರ್ಯ ಚಳುವಳಿಯಿಂದ ದೂರವಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೆ.ಬಿ. ಹೆಡಗೇವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದನ್ನು ದೇಶ ಸ್ವಾತಂತ್ರ್ಯ ಹೋರಾಟಗಾರನಿಗೆ ಬಿಜೆಪಿ ಮಾಡಿದ ದೊಡ್ಡ ಅವಮಾನವಾಗಿದೆ. ಇದನ್ನು ಗಮನಿಸಿದರೆ ಆರ್ಎಸ್ಎಸ್ ಬಿಜೆಪಿಯ ಸೈದ್ದಾಂತಿಕ ನಾಯಕ ವಿ.ಡಿ ಯ. ಸಾವರ್ಕರ್ ಸ್ವಾತಂತ್ಯ ಹೋರಾಟದ ವೇಳೆ ಬ್ರಿಟಿಷರಿಗೆ ಕ್ಷಮಾಪನ ಪತ್ರ ಬರೆದು ಭಾರತದ ಸ್ವಾತಂತ್ಯ ಹೋರಾಟಕ್ಕೆ ದ್ರೋಹ ಬಗೆದಿದ್ದರು. ಈಗ ಈ ಸಾವರ್ಕರ್ ಸಂತತಿಯ ಬಿಜೆಪಿ ಸರ್ಕಾರ ಬ್ರಿಟಿಷರ ವಿರುದ್ಧ ರಾಜಿರಹಿತವಾಗಿ ಹೋರಾಡಿ 23 ವರ್ಷಕ್ಕೆ ನೇಣುಗಂಬಕ್ಕೇರಿದ ಅಪ್ಪಟ ದೇಶಪ್ರೇಮಿ ಭಗತ್ ಸಿಂಗ್ ಪಠ್ಯವನ್ನು ತೆಗೆದು ಹಾಕಿ ಮತ್ತೊಮ್ಮೆ ಬಿಜೆಪಿ ಬ್ರಿಟಿಷರ ಗುಲಾಮರು ಎಂದು ತೋರ್ಪಡಿಸಿದೆ ಎಂದು ಶ್ರೀಪಾದ್ ಭಟ್ ಕಿಡಿಕಾರಿದರು.
ಸಾಹಿತಿ ಕೆ. ಶರೀಫ ಮಾತನಾಡಿ, ಈ ಪಠ್ಯದಲ್ಲಿ ಹಲವಾರು ಮಹಿಳಾ ವಿರೋಧಿ ವಿಚಾರಗಳಿವೆ ಇವು ಮನುವಾದಿ ಚಿಂತನೆಗಳನ್ನು ಪೋಷಿಸುತ್ತವೆ ಎಂದು ದೂರಿದರು.
ದಲಿತ ಮುಖಂಡ ಮಾವಳ್ಳಿ ಶಂಕರ್ ಸಭೆಯನ್ನುದ್ದೇಶಿಸಿ ಮಾತನಾಡಿ, ದೇಶದ ಸಂವಿಧಾನ ವಿರೋಧಿ ಶಿಕ್ಷಣ ನೀತಿಗಳ ವಿರುದ್ದ ಐಕ್ಯ ಹೋರಾಟ ನಡೆಸಬೇಕಾಗಿದೆ. ದಕ್ಷಿಣ ಭಾರತದ ಜಲಿಯನ್ ವಾಲಾಬಾಗ್ ಎಂದು ಕರೆಯಲ್ಪಡುವ ರಾಜ್ಯದ ಗೌರಿಬಿದನೂರು ತಾಲ್ಲೂಕಿನಲ್ಲಿರುವ ವಿದುರಾಶ್ವತ್ಥ ಸ್ವಾತಂತ್ರ್ಯ ಹೋರಾಟಗಾರರ ಹುತಾತ್ಮ ಸ್ಮಾರಕದ ಪೋಟೋ ಗ್ಯಾಲರಿಯ ಮೇಲೆ ಬಜರಂಗದಳ, ಆರ್ಎಸ್ಎಸ್ ಕೋಮುವಾದಿ ಶಕ್ತಿಗಳು ದಾಳಿ ಮಾಡಿ ಸ್ವಾತಂತ್ರ್ಯದ ಚರಿತ್ರೆಯನ್ನು ನಾಶಗೊಳಿಸುವ ದೇಶದ್ರೋಹದ ಕೃತ್ಯಕ್ಕೆ ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇ 31 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಇನ್ನೂ ಬಿಜೆಪಿ ಸರ್ಕಾರದ ಶಿಕ್ಷಣದ ಕೋಮುವಾದೀಕರಣ ನೀತಿಗಳನ್ನು ಸರ್ಕಾರ ನಿಲ್ಲಿಸಬೇಕೆಂದು ಆಗ್ರಹಿಸಿ ಇದೇ ತಿಂಗಳು ಮೇ.31 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತಿರ್ಮಾನಿಸಲಾಗಿದೆ. ಇದರ ಭಾಗವಾಗಿ ಮೇ.25 ರಂದು ನಾಡಿನ ಸಾಹಿತಿಗಳು , ಚಿಂತಕರ ದುಂಡುಮೇಜಿನ ಸಭೆ ಗಾಂಧಿ ಭವನದಲ್ಲಿ ನಡೆಸಿ ಹೋರಾಟದ ರೂಪುರೇಷಗಳ ಚರ್ಚಿಸಲು ತೀರ್ಮಾನಿಸಲಾಗಿದೆ. ಶಿಕ್ಷಣದ ಕೇಸರೀಕರಣ ವಿರೋಧಿಸಿ ಹಲವು ವಿಚಾರವಾದಿಗಳ ಲೇಖನಗಳನ್ನು ಒಳಗೊಂಡ ಒಂದು ಲಕ್ಷ ಕಿರುಹೊತ್ತಿಗೆ ಪುಸ್ತಕ ಪ್ರಕಟಿಸಿ ರಾಜ್ಯಾದ್ಯಂತ ವಿಧ್ಯಾರ್ಥಿ ಯುವಜನರ ನಡುವೆ ಜಾಗೃತಿ ಮೂಡಿಸಲು ಪ್ರಚಾರಾಂದೋಲನ ಕೈಗೊಳ್ಳುವುದಾಗಿ ತಿರ್ಮಾನ ಕೈಗೊಳ್ಳಲಾಗಿದೆ.