ರಾಜ್ಯದ ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯಗಳ ಪ್ರವೇಶ ಶುಲ್ಕ ಏರಿಕೆ
ಬೆಂಗಳೂರು, ಅಕ್ಟೋಬರ್ 13 : ರಾಜ್ಯದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳು, ಹುಲಿ ಮೀಸಲು ಕೇಂದ್ರಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸಲಾಗಿದೆ.
ಪ್ರವಾಸಿಗರ ಪ್ರವೇಶ ಶುಲ್ಕ ದರವನ್ನು ಅರಣ್ಯ ಇಲಾಖೆ ಹೆಚ್ಚಿಸಿದ್ದು, ಹುಲಿ ಮೀಸಲು ಕೇಂದ್ರಗಳ ಪ್ರವೇಶ ಶುಲ್ಕವನ್ನು ಒಬ್ಬರಿಗೆ 250 ರು, ನಿಗದಿಪಡಿಸಲಾಗಿದೆ. ಇನ್ನು ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯ ಮೃಗ ಅಭಯಾರಣ್ಯಗಳ ಪ್ರವೇಶ ಶುಲ್ಕವನ್ನು 150 ರು.ಗೆ ಏರಿಕೆ ಮಾಡಲಾಗಿದೆ. ಈ ಪರಿಸ್ಕೃತ ದರ ಮುಂದಿನ ತಿಂಗಳು ನವೆಂಬರ್ 1ರಿಂದ ಜಾರಿಗೆ ಬರಲಿದೆ.
ಸಫಾರಿ ಮತ್ತು ಗೈಡ್ ದರಗಳಲ್ಲಿ ಕೂಡ ಹೆಚ್ಚಿಸಲಾಗಿದ್ದು, ಇಲಾಖೆ ಬಸ್ಸುಗಳಲ್ಲಿ ಸಫಾರಿ ಶುಲ್ಕ ಪ್ರತಿ ವ್ಯಕ್ತಿಗೆ 300 ರು. ಜೀಪ್ ಗಳಲ್ಲಿ ಸಫಾರಿ ಮಾಡಲು ಒಬ್ಬರಿಗೆ 200 ರು. ನಿಗದಿ ಮಾಡಲಾಗಿದೆ.
ಬಂಡೀಪುರ, ಕಾಳಿ, ಭದ್ರಾ ಮತ್ತು ಬಿಆರ್ ಟಿ ಮೀಸಲು ಅರಣ್ಯ, ವೀರನಹೊಶಳ್ಳಿ, ನನಚಿ ಮತ್ತು ಅಂತರ್ ಸಂತೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳ ಪ್ರವೇಶ ಶುಲ್ಕವನ್ನು 200ರಿಂದ 250 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಕುದುರೆಮುಖ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿ ಅಭಯಾರಣ್ಯಗಳಾದ ಭೀಮಗಢ, ಬ್ರಹ್ಮಗಿರಿ, ಪುಷ್ಪಗಿರಿ, ಸೋಮೇಶ್ವರ, ತಲಕಾವೇರಿ ಅಭಯಾರಣ್ಯಗಳ ಪ್ರವೇಶ ದರವನ್ನು 150 ರು. ಮಾಡಲಾಗಿದೆ.
ಸಣ್ಣ ಅಭಯಾರಣ್ಯಗಳಾದ ನುಗು, ಕೊಡಚಾದ್ರಿ, ರಾಣೆಬೆನ್ನೂರು, ರಂಗಯಣ್ಣದುರ್ಗ ಮತ್ತು ರಾಮದೇವರಬೆಟ್ಟಗಳ ಪ್ರವೇಶ ಶುಲ್ಕ 25ರೂಪಾಯಿ. ರಂಗನತಿಟ್ಟು ಪಕ್ಷಿ ಅಭಯಾರಣ್ಯದ ಪ್ರವೇಶ ಶುಲ್ಕ 70 ರು., ದೋಣಿ ವಿಹಾರಕ್ಕೆ 70 ಮತ್ತು ಚಾರ್ಟರ್ಡ್ ದೋಣಿಗಳಿಗೆ ಪ್ರತಿ ವ್ಯಕ್ತಿಗೆ 1,500 ರು. ನಿಗದಿ ಮಾಡಲಾಗಿದೆ.