ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಹಲವು ಮಠಾಧೀಶರಿಂದ ಸಂತಾಪ ಸೂಚನೆ
ಚಿಕ್ಕಮಗಳೂರು, ಸೆಪ್ಟೆಂಬರ್ 25: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ಅವರು ಶುಕ್ರವಾರ(ಸೆ.25) ಮಧ್ಯಾಹ್ನ ಮೃತರಾದರು.
ಬಹು ಭಾಷಾ ಗಾಯಕರಾಗಿದ್ದ 74 ವರ್ಷದ ಎಸ್.ಪಿ. ಬಾಲಸುಬ್ರಮಣ್ಯಂ ಶುಕ್ರವಾರ ಮಧ್ಯಾಹ್ನ 1.04ಕ್ಕೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿಯೂ ಬಾಲಸುಬ್ರಮಣ್ಯಂ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಆದರೆ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ.
ಎಸ್ಪಿ ಬಾಲಸುಬ್ರಮಣ್ಯಂ ಕುರಿತ ಆಸಕ್ತಿಕರ ಸಂಗತಿಗಳು
ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ನಾಡಿನ ಹಲವು ಸಿನಿಮಾ, ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ರಾಜ್ಯದ ಧರ್ಮ ಗುರುಗಳು ಸಹ ಎಸ್ಪಿಬಿ ಅವರ ನಿಧನಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.
ಬಾಳೆಹೊನ್ನೂರಿನ ರಂಭಾಪುರಿ ಮಠಾಧೀಶರಿಂದ ಸಂತಾಪ ಸೂಚನೆ
ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀಗಳು ಹಿರಿಯ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ವಿಡಿಯೋ ಮೂಲಕ ಸಂತಾಪ ಸೂಚಿಸಿದ್ದಾರೆ. ""ಎಸ್ಪಿಬಿ ಹಾಡಿದ ಗೀತೆಗಳು ಜನರ ಮನಸ್ಸಲ್ಲಿ ಹಚ್ಚ ಹಸಿರಾಗಿವೆ. ಎಲ್ಲ ವರ್ಗದವರ, ಸಮುದಾಯದ ಜನರಿಗೆ ಪ್ರೀತಿ ಪಾತ್ರರಾಗಿದ್ದರು'' ಎಂದಿದ್ದಾರೆ.
ಶ್ರೇಷ್ಠ ಗಾಯಕರನ್ನು ಕಳೆದುಕೊಂಡು ಈ ನಾಡು ಬಡವಾಗಿದ್ದು, ಅಗಲಿದ ಅವರ ಪವಿತ್ರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀಗಳು ನುಡಿನಮನ ಸಲ್ಲಿಸಿದರು.
ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಪೇಜಾವರ ಮಠಾಧೀಶರಿಂದ ಸಂತಾಪ
ಎಸ್.ಪಿ ಬಾಲಸುಬ್ರಮಣ್ಯಂ ಸಂಗೀತ ಲೋಕದ ಮೇರು ದಿಗ್ಗಜರಾಗಿದ್ದರು, ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಜಗತ್ತಿನ ಮನ ಗೆದ್ದಿದ್ದರು. ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ್ದಾರೆ ಎಂಬ ಸುದ್ದಿ ಕೇಳಿ ಅತೀವ ದುಃಖವಾಯಿತು ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಎಸ್.ಪಿ ಬಾಲಸುಬ್ರಮಣ್ಯಂ ಅವರ ಆತ್ಮಕ್ಕೆ ಭಗವಂತ ಸದ್ಗತಿ ದೊರಕಿಸಲಿ, ಅವರು ಮತ್ತೆ ಹುಟ್ಟಿ ಬಂದು ತಮ್ಮ ಸಿರಿಕಂಠದ ಮೂಲಕ ನಾಡಿನ ಜನರನ್ನು ರಂಜಿಸಲಿ ಎಂದು ತಿಳಿಸಿದರು.
ಚಿತ್ರದುರ್ಗ ಮುರುಘಾ ಶರಣರ ಸಂತಾಪ
ಅಗಲಿದ ಗಾನ ಗಾರುಡಿಗ ಎಸ್.ಪಿ ಬಾಲಸುಬ್ರಮಣ್ಯಂ ಅವರಿಗೆ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಸಂತಾಪ ಸೂಚಿಸಿದ್ದಾರೆ. ಮುರುಘಾ ಮಠಕ್ಕೂ, ಎಸ್.ಪಿ ಬಾಲಸುಬ್ರಮಣ್ಯಂ ಅವರ ನಡುವಿನ ನಂಟನ್ನು ಶ್ರೀಗಳು ನೆನಪಿಸಿಕೊಂಡಿದ್ದಾರೆ.
ಮೊತ್ತ ಮೊದಲ ಬಾರಿಗೆ ಬಾಲಸುಬ್ರಮಣ್ಯಂ ಹಾಡಿದ್ದ ವಚನಗಳ ಧ್ವನಿಸುರುಳಿ ಬಿಡುಗಡೆಯನ್ನು, ಚಿತ್ರದುರ್ಗ ಮುರುಘಾ ಮಠದ ಕಾರ್ಯಕ್ರಮದಲ್ಲಿ ಕ್ಯಾಸೆಟ್ ಬಿಡುಗಡೆಯ ನೆನಪನ್ನು ನೆನಪಿಸಿಕೊಂಡರು.
Recommended Video
35 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ನೀಡಿದ್ದರು
ಓಲ್ಡ್ ಮಿಡಲ್ ಸ್ಕೂಲ್ ಆವರಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಎಸ್.ಪಿ ಬಾಲಸುಬ್ರಮಣ್ಯಂ ಭಾಗಿಯಾಗಿದ್ದರು. ಹಿಮೋಫೀಲಿಯಾ ಸೋಂಕಿತ ಮಕ್ಕಳ ನೆರವಿಗೆ ಎಸ್ಪಿಬಿ ಧಾವಿಸಿದ್ದನ್ನು ಶ್ರೀಗಳು ಸ್ಮರಿಸಿಕೊಂಡರು.
ಮುರುಘಾ ಮಠದಿಂದ ಆಯೋಜಿಸಲಾಗಿದ್ದ ಹಿಮೋಫೀಲಿಯಾ ಸೊಂಕಿತರ ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ, ಉಚಿತವಾಗಿ ಕಾರ್ಯಕ್ರಮ ನಡೆಸಿಕೊಟ್ಟು 35 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ನೀಡಿದ್ದನ್ನು ನೆನಪಿಸಿಕೊಂಡರು. ಎಸ್.ಪಿ ಬಾಲಸುಬ್ರಮಣ್ಯಂ ಅವರ ಮಾನವೀಯ ಮೌಲ್ಯಗಳನ್ನು ಮುರುಘಾ ಶರಣರು ಕೊಂಡಾಡಿದರು.