ಕರ್ನಾಟಕದ ಸಾವಿರ ಮದ್ರಸಾಗಳಲ್ಲಿ ಸಮೀಕ್ಷೆ ಆರಂಭ
ಬೆಂಗಳೂರು, ಫೆಬ್ರವರಿ, 02: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ(ಐಇಬಿಐ)ದ ಕರ್ನಾಟಕದ ಘಟಕ ರಾಜ್ಯದಲ್ಲಿನ ಮದ್ರಸಾಗಳ ಸಮೀಕ್ಷೆಯನ್ನು ನಡೆಸಲಿದೆ. ಸಮೀಕ್ಷೆಯನ್ನು ಫೆಬ್ರವರಿ 1 ರಿಂದಲೇ ಆರಂಭ ಮಾಡಲಾಗಿದೆ.
ಮದ್ರಸಾಗಳ ಶಿಕ್ಷಣ ಪದ್ಧತಿ ಹೇಗಿದೆ? ಮಕ್ಕಳನ್ನುಯ ಮುಖ್ಯವಾಹಿನಿಗೆ ತರುವಂಥ ಶಿಕ್ಷಣ ನೀಡಲಾಗುತ್ತಿದೆಯೇ? ಎಂಬ ಅಂಶಗಳನ್ನು ಸಮೀಕ್ಷೆ ಲೆಕ್ಕ ಹಾಕಲಿದೆ. [ಮದ್ರಸಾ ಎಂದರೇನು?]
ಭಾನುವಾರ ನಡೆದ ಐಇಬಿಐದ ಸಭೆಯಲ್ಲಿ ಮುಸ್ಲಿಂ ಧರ್ಮ ಗುರುಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದು ಆರಂಭಿಕ ಹಂತವಾಗಿ ಪ್ರಾಥಮಿಕ ಮಾಹಿತಿ ಕಲೆ ಹಾಕಲಿದ್ದಾರೆ.[ಮಹಾರಾಷ್ಟ್ರದ ಮದರಸಾಗಳ ಮಾನ್ಯತೆ ರದ್ದಾಗಿದ್ದು ಯಾಕೆ?]
ಸಮೀಕ್ಷೆ ಕರ್ನಾಟಕದ ಸಾವಿರಕ್ಕೂ ಅಧಿಕ ಮದ್ರಸಾಗಳಲ್ಲಿ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಶಿಕ್ಷಕರ ಸಮಿತಿ ರಚನೆ ಮಾಡಿ ಅವರಿಂದಲೂ ಸಹಾಯ ಪಡೆಯಲಿದ್ದೇವೆ ಎಂದು ಐಇಬಿಐದ ರಾಜ್ಯ ಘಟಕದ ಮಾಧ್ಯಮ ಸಂಪರ್ಕ ಅಧಿಕಾರಿ ಅಬ್ದುಲ್ ವಜೀದ್ ತಿಳಿಸಿದರು.
ಆನ್ ಲೈನ್ ಮೂಲಕ ಇಸ್ಲಾಮಿಕ್ ಶಿಕ್ಷಣ ನೀಡುವ ಚಿಂತನೆಯೂ ಇದೆ. ಕರ್ನಾಟಕದಲ್ಲಿರುವ 10 ಸಾವಿರಕ್ಕೂ ಅಧಿಕ ಮದ್ರಸಾಗಳಿಗೆ ಏಕರೂಪದ ಶಿಕ್ಷಣ ಪದ್ಧತಿ ಜಾರಿ ಮಾಡಲಾಗುವುದು. ಬೆಂಗಳೂರು, ದಾವಣಗೆರೆ, ವಿಜಯಪುರ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಮದ್ರಸಾಗಳಲ್ಲಿ ಏಕರೂಪದ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.