ಪಟಾಕಿ ಸುಡದಿರಲು ಧಾರವಾಡ ಮಕ್ಕಳಿಗೆ ಕಿವಿಮಾತು
ಹುಬ್ಬಳ್ಳಿ, ನವೆಂಬರ್,04 : ದೀಪಾವಳಿ ಹಬ್ಬದಲ್ಲಿ ಸಣ್ಣಪುಟ್ಟ ಅವಘಡಗಳು ಸಂಭವಿಸುವುದು ಸರ್ವೇ ಸಾಮಾನ್ಯ. ಅಪಾಯಗಳಿಂದ ದೂರವಿರಲು ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಎಚ್ಚರಿಸುವ ಸಲುವಾಗಿ ಕೆಲವು ಪರಿಸರ ಪರ ಸಂಘಟನೆಗಳು ಧಾರವಾಡದಲ್ಲಿ ಬುಧವಾರ ಪರಿಸರಸ್ನೇಹಿ ಜಾಥಾ ಹಮ್ಮಿಕೊಂಡಿತು.
ಪರಿಸರಸ್ನೇಹಿ ಜಾಥಾ ಕಾರ್ಯಕ್ರಮವು 'ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಹಾಗೂ ಧಾರವಾಡದ ಕೆ.ಇ. ಬೋರ್ಡ್ ಶಾಲೆಯ ಸಂಯುಕ್ತಾಶ್ರಯದಲ್ಲಿ ಜರುಗಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಮಾಹಿತಿ ನೀಡಲಾಯಿತು.[ಮಾಲಿನ್ಯರಹಿತ ದೀಪಾವಳಿಗೆ ಐದು ಸಲಹೆಗಳು]
ಈ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪರಿಸರ ಅಧಿಕಾರಿ ವಿಜಯ ಕುಮಾರ ಕಡಕಭಾವಿ ಮಾತನಾಡಿ, 'ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿ ಹಬ್ಬವಾಗಿ ಆಚರಿಸಬೇಕು. ಪಟಾಕಿ ಸಿಡಿಸುವುದರಿಂದ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳಾಗುತ್ತವೆ.
ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಉಂಟಾಗಿ ಹಲವಾರು ವಿಷಾನಿಲಗಳ ಹೊರ ಸೂಸುವಿಕೆಯಿಂದ ವಾತಾವರಣ ಕಲುಷಿತಗೊಳ್ಳುತ್ತದೆ. ಹಾಗಾಗಿ ಯಾವುದೇ ಮಾಲಿನ್ಯಕ್ಕೆ ನಾವು ಆಸ್ಪದ ಕೊಡಬಾರದು. ನಮ್ಮ ಪರಿಸರವನ್ನು ನಾವು ಸಂರಕ್ಷಿಸಬೇಕು ಎಂದು ಕಿವಿಮಾತು ಹೇಳಿದರು.['ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧ ಇಲ್ಲ"]
ನಂತರ ಶಂಕರ ಕುಂಬಿ ಮಾತನಾಡಿ, ಪಟಾಕಿ ಸಿಡಿಸುವ ಬದಲು ಗಿಡ, ಮರಗಳನ್ನು ನೆಟ್ಟು ಪರಿಸರವನ್ನು ಕಾಪಾಡುವುದರ ಮೂಲಕ ವಿಶೇಷವಾಗಿ ಆಚರಿಸಬೇಕು, ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಮಾಡಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಭಾಗವಹಿಸಿದ ಶಾಲಾ ಮಕ್ಕಳಿಗೆ ಪಟಾಕಿ ಸಿಡಿಸದೆ ಇರುವ ಕುರಿತು ಪ್ರಮಾಣ ವಚನ ಬೋಧಿಸಲಾಯಿತು.