ಶೀಘ್ರದಲ್ಲೇ ಕಾಗದ ರಹಿತ ಇ ವಿಧಾನ ಸೌಧ : ಶಂಕರಮೂರ್ತಿ
ಬೆಂಗಳೂರು, ಫೆಬ್ರವರಿ 02: ಇ- ವಿಧಾನ ಹೆಸರಿನಲ್ಲಿ ವಿಧಾನಸೌಧದ ಉಭಯ ಸದನಗಳ ಕಲಾಪಗಳು ಕಾಗದ ರಹಿತವಾಗಿ ನಿರ್ವಹಿಸಲಿದೆ ಎಂದು ವಿಧಾನ ಪರಿಷತ್ತು ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರು ಇಂದು ಹೇಳಿದರು.
ಆಡಳಿತದಲ್ಲಿನ ಪಾರದರ್ಶಕತೆಗೆ ಕಾಗದರಹಿತ ಕಚೇರಿ ವ್ಯವಸ್ಥೆ ನೆರವಾಗಲಿದ್ದು, ಕೆಲಸಗಳು ಸರಳೀಕರಣಗೊಳ್ಳಲಿದೆ. ಸಾರ್ವಜನಿಕ ಕೆಲಸಕಾರ್ಯಗಳು ಸುಗಮವಾಗಿ, ತ್ವರಿತವಾಗಿ ಆಗಲಿವೆ. ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದರು.
ಇತ್ತೀಚೆಗೆ ಉದಯಪುರದಲ್ಲಿ ನಡೆದ 18ನೇ ಅಖಿಲ ಭಾರತ ವಿಪ್ ಗಳ ಸಮಾವೇಶದಲ್ಲಿ ಇ ಸಂಸತ್ತು ಹಾಗೂ ಶಾಸಕಾಂಗ ವ್ಯವಸ್ಥೆ ಜಾರಿ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಿತು. ಹಿಮಾಚಲ ಪ್ರದೇಶ ಶಾಸಕಾಂಗ ವ್ಯವಸ್ಥೆಯನ್ನು 2015ರಲ್ಲಿ ಅಧ್ಯಯನ ಮಾಡಲಾಗಿತ್ತು. ಈ ವ್ಯವಸ್ಥೆ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಯಿತು.
ರಾಜ್ಯ ಸರ್ಕಾರದ ಅಧೀನದಲ್ಲಿರುವ ಇ-ಆಡಳಿತ ಕೇಂದ್ರದ ಕೆಸ್ವಾನ್ (ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್ವರ್ಕ್) ಇ-ಆಫೀಸ್ ವ್ಯವಸ್ಥೆಯನ್ನು ಕಚೇರಿಗಳಿಗೆ ಒದಗಿಸುತ್ತದೆ.
ದಕ್ಷಿಣ ಕನ್ನಡ, ಉಡುಪಿ, ಗದಗ, ಕೊಪ್ಪಳ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗಳು, ವಿಜಯಪುರ, ರಾಯಚೂರು, ಬೀದರ್ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಹಾಗೂ ಸಹಾಯಕ ಆಯುಕ್ತರ ಕಚೇರಿಗಳು ಕಾಗದ ರಹಿತ ಕಚೇರಿಗಳೆನಿಸಿವೆ.
ಗೋವಾ ಅಸೆಂಬ್ಲಿಯಲ್ಲಿ ಈಗಾಗಲೇ ಇ ಟ್ಯಾಬ್ಲೆಟ್ ಹಾಗೂ ಲ್ಯಾಪ್ ಟ್ಯಾಪ್ ಸದ್ಬಳಕೆಯಾಗುತ್ತಿದ್ದು, ಸಂಪೂರ್ಣ ಕಾಗದ ರಹಿತ ಕಲಾಪ ಸಾಧಿಸುವತ್ತ ದಾಪುಗಾಲಿಟ್ಟಿದೆ.