ಗ್ರಾಮೀಣ ಪ್ರದೇಶಕ್ಕೆ ರಾಜ್ಯ ಸರಕಾರದಿಂದ ಉಚಿತ ವೈ-ಫೈ ಸೇವೆ
ಬೆಂಗಳೂರು, ಜುಲೈ 5: ಹಲವು ಭಾಗ್ಯಗಳ ನಂತರ ಇದೀಗ ಇಂಟರ್ನೆಟ್ ಕ್ಷೇತ್ರಕ್ಕೂ ಸಿದ್ದರಾಮಯ್ಯ ಭಾಗ್ಯಗಳ ಸರಣಿ ಕಾಲಿಟ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ವೈ-ಫೈ ಸೇವೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಂಪುಟ ಸಭೆಯ ಬಳಿಯ ಮಾತನಾಡಿದ ಸಚಿವ ಟಿಬಿ ಜಯಚಂದ್ರ, "ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉಚಿತ ವೈ-ಫೈ ಸೇವೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ಮೂರು ವರ್ಷಗಳ ಅವಧಿಗೆ ಬಿಎಸ್ಎನ್ಎಲ್ ಜತೆ ಸರಕಾರ ಒಪ್ಪಂದ ಮಾಡಿಕೊಳ್ಳಲಿದೆ," ಎಂದು ತಿಳಿಸಿದ್ದಾರೆ.
ಇದೇ ವೇಳೆ ವೈ-ಫೈ ಸೇವೆ ನೀಡಲು 79.50 ಕೋಟಿ ಹಣ ಬಿಡುಗಡೆಗೂ ಸಂಪುಟ ಸಭೆ ಒಪ್ಪಿಗೆ ನೀಡಿದೆ. 2017-2020ರವರೆಗೆ ಮೂರು ವರ್ಷಗಳ ಅವಧಿಗೆ ಬಿಎಸ್ಎನ್ಎಲ್ ಉಚಿತ ವೈ-ಫೈ ಸೇವೆ ನೀಡಲಿದೆ.
7 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
ಇನ್ನು ರಾಜ್ಯದ ವಿವಿಧ ಭಾಗಗಳಲ್ಲಿ 7 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕೂ ಸಂಪುಟ ಸಭೆ ಒಪ್ಪಿಗೆ ನೀಡಿದೆ. ತಲಾ 35 ಕೋಟಿ ವೆಚ್ಚದಲ್ಲಿ ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುತ್ತದೆ.