ಎಸ್ಎಸ್ಎಲ್ಸಿ ರಿಸಲ್ಟ್ ಔಟ್, ಸಂತಸದ ನಡುವೆ ಸೂತಕದ ಸುದ್ದಿ
ಬೆಂಗಳೂರು, ಏಪ್ರಿಲ್ 30: ಕರ್ನಾಟಕದ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ಮಂಗಳವಾರ(ಏಪ್ರಿಲ್ 30)ದಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಹಾಸನ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದರೆ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಶೈಕ್ಷಣಿಕ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ. ಯಾದಗಿರಿ ಕೊನೆಯ ಸ್ಥಾನ ಗಳಿಸಿದೆ. ಪಾಸಾದವರು ಸಂತಸದಲ್ಲಿದ್ದರೆ, ಫೇಲಾದವರು, ಫೇಲಾಗುವ ಭಯದಿಂದ ಅನಾಹುತ ಮಾಡಿಕೊಂಡವರ ಮನೆಯಲ್ಲಿ ಸೂತಕ ಆವರಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗಂಗವಾರ ಎಂಬ ಗ್ರಾಮದ ನಿವಾಸಿ 16 ವರ್ಷ ವಯಸ್ಸಿನ ನಂದನ್ ಎಂಬ ವಿದ್ಯಾರ್ಥಿಯು ಫಲಿತಾಂಶದ ಭೀತಿಯಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಫಲಿತಾಂಶ ಬರುವ ಮುನ್ನವೇ ನಂದನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ, ಎಸ್ಎಸ್ಎಲ್ಸಿಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಪಾಸಾಗಿದ್ದು, ಸಂತಸ ಪಡುವ ಸಂದರ್ಭದಲ್ಲಿ ಹೆಣವಾಗಿ ಮಲಗಿದ್ದಾನೆ.
SSLC ಫಲಿತಾಂಶ:ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ? ಚಿತ್ರ ಮಾಹಿತಿ
ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿ ಎಂದೇ ಗುರುತಿಸಿಕೊಂಡಿದ್ದ ನಂದನ್ ಸನ್ರೈಸ್ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಇಂದು ಪ್ರಕಟವಾದ ಫಲಿತಾಂಶದಲ್ಲಿ ನಂದನ್ ಗೆ 625ಕ್ಕೆ 530 ಅಂಕ ಸಿಕ್ಕಿದೆ. ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ಠಾಣೆ ಪಿಎಸ್ಐ ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
****
ಚಿತ್ರದುರ್ಗ: ಚಿತ್ರದುರ್ಗದ ತುರುವನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಿದ್ದೇಶ್(45) ಎಂಬುವರು ಮೃತಪಟ್ಟಿದ್ದಾರೆ. ತಮ್ಮ ಮಗಳು ಎಸ್ಎಸ್ಎಲ್ಸಿ ಪಾಸಾಗಿದ್ದನ್ನು ಸಂಭ್ರಮಿಸಲು ಸಿಹಿ ತರಲು ಬಯಸಿದರು. ಬೈಕ್ ಏರಿ ಕಡಬನಕಟ್ಟೆಗೆ ಹೊರಟ್ಟಿದ್ದರು. ಆದರೆ, ಟೆಂಪೋಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಮೃತರಾಗಿದ್ದಾರೆ. ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಗ್ರಾಮದ ಸಿದ್ದೇಶ್ ನಿವಾಸದಲ್ಲಿ ಸಂಭ್ರಮದ ಸಂದರ್ಭದಲ್ಲಿ ಸೂತಕ ಆವರಿಸಿದೆ.