ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಇಲ್ಲಿವೆ ಮುಖ್ಯಾಂಶಗಳು
ಕೊರೊನಾ ವೈರಸ್ ಸಂಕಷ್ಟ, ಭೀತಿಯ ನಡುವೆಯೇ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗಿತ್ತು. ಸುರಕ್ಷತಾ ಕ್ರಮಗಳ ಮಧ್ಯೆ ವಿದ್ಯಾರ್ಥಿಗಳು ಅಂಜಿಕೆಯಿಂದಲೇ ಪರೀಕ್ಷೆಗೆ ಕೂರುವಂತಾಗಿತ್ತು. ಆದರೆ ಈ ಭೀತಿಯನ್ನು ಮೆಟ್ಟಿನಿಂತು ವಿದ್ಯಾರ್ಥಿಗಳು ಸವಾಲು ಎದುರಿಸಿದ್ದಾರೆ. ಅದರ ಫಲಿತಾಂಶ ಆಗಸ್ಟ್ 10ರಂದು ಹೊರಬಿದ್ದಿದೆ.
Recommended Video
ಸರ್ಕಾರ ನಿಗದಿಪಡಿಸಿರುವ ವೆಬ್ಸೈಟ್ಗಳಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಆಗಸ್ಟ್ 11ರ ಮಂಗಳವಾರ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಜತೆಗೆ ಪ್ರಾವಿಷನಲ್ ಅಂಕಪಟ್ಟಿ ಕೂಡ ಲಭ್ಯವಾಗಲಿದೆ. ಒಟ್ಟಾರೆ ರಾಜ್ಯದಲ್ಲಿನ ಫಲಿತಾಂಶ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಕೆಲವು ವಿದ್ಯಾರ್ಥಿಗಳಿಗೆ ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ಅನೇಕ ವಿದ್ಯಾರ್ಥಿಗಳು ಗಣನೀಯ ಸಾಧನೆ ಪ್ರದರ್ಶಿಸಿದ್ದಾರೆ.
ಕರ್ನಾಟಕದ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದ ಕೆಲವು ಮುಖ್ಯಾಂಶಗಳು ಇಲ್ಲಿವೆ.
ಉತ್ತೀರ್ಣರಾದವರ ಸಂಖ್ಯೆ
ಪರೀಕ್ಷೆಗೆ ನೋಂದಾಯಿಸಿದ್ದ ವಿದ್ಯಾರ್ಥಿಗಳ ಸಂಖ್ಯೆ 8,48,203. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಸಂಖ್ಯೆ 8,11,050. ಒಟ್ಟು 34 ಕೇಂದ್ರಗಳಲ್ಲಿ ಪರೀಕ್ಷೆಯ ಮೌಲ್ಯಮಾಪನ ನಡೆಸಲಾಗಿತ್ತು. ಇದರಲ್ಲಿ 5,82,316 ಮಂದಿ ಉತ್ತೀರ್ಣರಾಗಿದ್ದಾರೆ. 2,28,734 ಮಂದಿ ಅನುತ್ತೀರ್ಣರಾಗಿದ್ದಾರೆ.
ಅನುದಾನರಹಿತ ಶಾಲೆಗಳಲ್ಲಿ ಪ್ರಗತಿ
ಸರ್ಕಾರಿ ಶಾಲೆಗಳಲ್ಲಿ ಶೇ 72.79ರಷ್ಟು ಫಲಿತಾಂಶ ಬಂದಿದೆ. ಅನುದಾನಿತ ಶಾಲೆಗಳ ಫಲಿತಾಂಶ ಶೇ 71.80ರಷ್ಟು ಬಂದಿದೆ. ಅನುದಾನರಹಿತ ಶಾಲೆಗಳಲ್ಲಿ ದಾಖಲೆಯ ಫಲಿತಾಂಶ ಬಂದಿದ್ದು ಶೇ 82.31ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದವರಲ್ಲಿ ಶೇ 66.41 ಬಾಲಕರು ಮಂದಿ ಮತ್ತು ಶೇ 77.74 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ಮುಂಚೂಣಿಯಲ್ಲಿರುವ ವಿದ್ಯಾರ್ಥಿಗಳು
6 ಮಂದಿ ವಿದ್ಯಾರ್ಥಿಗಳು 625ಕ್ಕೆ ಸಂಪೂರ್ಣ 625 ಅಂಕ ಗಳಿಸಿದ್ದಾರೆ. ಕಳೆದ ಬಾರಿ ಇಬ್ಬರು ವಿದ್ಯಾರ್ಥಿಗಳು 625 ಅಂಕ ಪಡೆದಿದ್ದರು. 11 ಮಂದಿ ವಿದ್ಯಾರ್ಥಿಗಳು 624/625 ಗಳಿಸಿದ್ದಾರೆ. ಕಳೆದ ಬಾರಿ 11 ಮಂದಿ ಇಷ್ಟು ಅಂಕ ಪಡೆದಿದ್ದರು. 43 ಮಂದಿ 625ಕ್ಕೆ 623 ಅಂಕ ಗಳಿಸಿದ್ದಾರೆ. ಕಳೆದ ಬಾರಿ 56 ಮಂದಿ 623 ಅಂಕ ಪಡೆದಿದ್ದರು.
ಯಾವ ಜಿಲ್ಲೆ ಮೊದಲು?
ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎರಡನೆಯ ಸ್ಥಾನದಲ್ಲಿದೆ. ಮಧುಗಿರಿ ತೃತೀಯ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆಗೆ ಕೊನೆ ಸ್ಥಾನ ಸಿಕ್ಕಿದೆ. ಮಂಡ್ಯ, ಚಿತ್ರದುರ್ಗ ಮತ್ತು ಕೋಲಾರ ಜಿಲ್ಲೆಗಳು ನಾಲ್ಕರಿಂದ ಆರರವರೆಗಿನ ಸ್ಥಾನ ಪಡೆದುಕೊಂಡಿದೆ. ಉಡುಪಿ ಜಿಲ್ಲೆ ಏಳನೇ ಸ್ಥಾನಕ್ಕೆ ಕುಸಿದಿದೆ.
ಅಧಿಕ ಅಂಕ ಪಡೆದವರ ಹೆಸರು
ಉತ್ತರ ಕನ್ನಡದ ಸರ್ಕಾರಿ ಮಾರಿಕಾಂಬ ಶಾಲೆಯ ಸನ್ನಿಧಿ, ಬೆಂಗಳೂರಿನ ನಾಗಸಂದ್ರದ ಸೆಂಎ ಮೇರಿಸ್ ಶಾಲೆಯ ಚಿರಾಯು, ಸದಾಶಿವನಗರದ ಪೂರ್ಣ ಪ್ರಜ್ಞ ಎಜುಕೇಷನ್ ಸೆಂಟರ್ ನ ನಿಖಿಲೇಶ್ ಎನ್ ಮರಳಿ, ಮಂಡ್ಯ ಜಿಲ್ಲೆಯ ಸತ್ಯಸಾಯಿ ಸರಸ್ವತಿ ಇಂಗ್ಲೀಷ್ ಶಾಲೆಯ ಧೀರಜ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲೆಯ ಕುಮಾರಸ್ವಾಮಿ ಇಂಗ್ಲೀಷ್ ಶಾಲೆಯ ಅನುಷ್ ಎ ಎಲ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.