ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನಾದ್ರೂ ಸರಿಯಾಗಿ ನಡೆಸಿ ಶಿಕ್ಷಣ ಸಚಿವರೇ!
ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಮಂಡಳಿಯ ಆವಾಂತರ ಒಂದಲ್ಲಾ, ಎರಡಲ್ಲಾ.. ಸಿಲ್ಲಬಸ್ ನಲ್ಲಿ ಇಲ್ಲದ ಪ್ರಶ್ನೆಯನ್ನು ಕೇಳಿ ವ್ಯಾಪಕ ಟೀಕೆಗೊಳಗಾಗಿದ್ದು, ಪ್ರಶ್ನೆಪತ್ರಿಕೆ ಲೀಕ್, ಕೆಮೆಸ್ಟ್ರಿ ಮರುಪರೀಕ್ಷೆ ದಿನಾಂಕ ಘೋಷಣೆಯ ವಿಚಾರದಲ್ಲಿನ ಗೊಂದಲ.. ಹೀಗೆ ಪಿಯುಸಿ ಪರೀಕ್ಷೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮಂಡಳಿ ವಿಫಲವಾಗಿತ್ತು.
ಮಕ್ಕಳ ಶಿಕ್ಷಣ ಭವಿಷ್ಯದ ನಿರ್ಣಾಯಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದೇ ಬುಧವಾರ, ಮಾರ್ಚ್ 30ರಿಂದ ಆರಂಭಗೊಂಡು ಏಪ್ರಿಲ್ 13ರ ವರೆಗೆ ನಡೆಯಲಿದೆ (ವೇಳಾಪಟ್ಟಿಯ ಪ್ರಕಾರ). ಸುಮಾರು 8.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪಿಯುಸಿ ಪರೀಕ್ಷೆಯಲ್ಲಾದ ಅವಮಾನದಿಂದ ಎಚ್ಚೆತ್ತುಗೊಂಡಿರುವ ಶಿಕ್ಷಣ ಇಲಾಖೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವುದು ಒಳ್ಳೆಯ ಲಕ್ಷಣವೇ. ಆದರೆ?
ಶಿಕ್ಷಣ ಸಚಿವರು ಮತ್ತು ಇಲಾಖೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ, ಅದನ್ನು ಕಾರ್ಯರೂಪಕ್ಕೆ ತರಬೇಕಾದವರು ಕೆಳಮಟ್ಟದ ಅಧಿಕಾರಿಗಳು. ಪಿಯುಸಿ ವಿಚಾರದಲ್ಲಿ ಸರಕಾರದ ಮಾನಭಂಗವಾಗಲು ಇಂತಹ ಕೆಲವು ಅಧಿಕಾರಿಗಳೇ ಕಾರಣ ಎನ್ನುವುದು ಕಟುಸತ್ಯ.
ಒಂದು ಪರೀಕ್ಷೆ ಬರೆದು ಅದು ಸೋರಿಕೆಯಾಗಿದೆಯೆಂದು ಮತ್ತೆ ಪರೀಕ್ಷೆ ಬರೆಯುವಂತಾದಾಗ ಮಕ್ಕಳ ಮನಸ್ಥಿತಿ ಹೇಗಿರಬೇಡ? ವಿದ್ಯುತ್ ಸಮಸ್ಯೆಯ ನಡುವೆಯೂ ಕಷ್ಟಪಟ್ಟು ಓದುವ ಮಕ್ಕಳು ಮತ್ತು ಓದಿಸುವ ಪೋಷಕರ ಬವಣೆ ಇಂತಹ ಧನಪಿಶಾಚಿ ಅಧಿಕಾರಿಗಳಿಗೆ ಎಲ್ಲಿಂದ ಅರ್ಥವಾಗುತ್ತೆ? (ಅಧ್ಯಾಪಕರ ಜವಾಬ್ದಾರಿ ನೆನಪಿಸಿದ ಕಿಮ್ಮನೆ)
ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನಾದರೂ ಸರಕಾರ ಸರಿಯಾಗಿ ನಿಭಾಯಿಸಲಿ, ದುಷ್ಟ ಅಧಿಕಾರಿಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಿ ಎನ್ನುವುದು ಶಿಕ್ಷಣ ಸಚಿವರಲ್ಲಿ ಮನವಿ. ಈ ಬಾರಿ ಸರಕಾರ ತೆಗೆದುಕೊಂಡಿರುವ ಕಟ್ಟುನಿಟ್ಟಿನ ಕ್ರಮಗಳು ಯಾವುವು, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಕಿಮ್ಮನೆ ರತ್ನಾಕರ
ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಲ್ಲಿ ಮಾಧ್ಯಮದವರ ಪ್ರಶ್ನೆಗೆ, 'ಮಕ್ಕಳು, ಪೋಷಕರಿಗೆ ಇಲ್ಲದ ಚಿಂತೆ ನಿಮಗ್ಯಾಕ್ರೀ, ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ' ಎನ್ನುವ ಮಾತು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಂದ ಬಂದಿದ್ದು ವಿಷಾದನೀಯ.
ಪಿಯುಸಿ ಪತ್ರಿಕೆ ಜಿಲ್ಲಾ ಖಜಾನೆಯಿಂದಲೇ ಸೋರಿಕೆಯಾಗಿದ್ದು
ಪಿಯುಸಿ ಪ್ರಶ್ನೆಪತ್ರಿಕೆ ಮಂಗಳೂರು, ಬಳ್ಳಾರಿ ಮತ್ತು ಕೋಲಾರದ ಜಿಲ್ಲಾ ಖಜಾನೆಯಿಂದಲೇ ಸೋರಿಕೆಯಾಗಿದೆ ಎನ್ನುವ ಮಾಹಿತಿ ಸಿಐಡಿ ತನಿಖೆಯ ವೇಳೆ ಖಚಿತಗೊಂಡಿದೆ ಎನ್ನುವ ಮಾಹಿತಿ ಬಂದಿರುವುದರಿಂದ, ಹಣಕ್ಕಾಗಿ ಯಾವ ಮಟ್ಟಕ್ಕಾದರೂ ಕೆಲವು ಅಧಿಕಾರಿಗಳು ಇಳಿಯುತ್ತಾರೆನ್ನುವುದಕ್ಕೊಂದು ಉದಾಹರಣೆ.
ಎಸ್ಸೆಸ್ಸೆಲ್ಸಿ ಪತ್ರಿಕೆಯೂ ಸೋರಿಕೆಯಾಗಿದೆ ಎನ್ನುವ ಸಂಶಯ
ಗುರುವಾರ (ಮಾ 24) ವಿಜಯಪುರ ಜಿಲ್ಲಾ ಖಜಾನೆಯಿಂದ ಮುದ್ದೇಬಿಹಾಳಕ್ಕೆ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆಗಳು ಪೊಲೀಸ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ರವಾನೆಯಾಗದೇ, ಖಾಸಗಿ ಶಾಲೆಯ ವಾಹನದಲ್ಲಿ ಸಾಗಣೆಯಾಗಿದ್ದರಿಂದ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿದೆಯೇ ಎನ್ನುವ ಅನುಮಾನ ದಟ್ಟವಾಗಿ ಕಾಡತೊಡಗಿದೆ.
ಆಯಾಯ ಜಿಲ್ಲಾಧಿಕಾರಿಗಳು ಹೊಣೆ
ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಶಿಕ್ಷಣ ಇಲಾಖೆ ಜೊತೆಗೆ ಬೇರೆ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದೆ. ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಹೊಣೆಯನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಿದ್ದು, ಇದಕ್ಕಾಗಿ ತಲಾ ಇಪ್ಪತ್ತು ಲಕ್ಷ ರೂಪಾಯಿ ಸರಕಾರ ಒದಗಿಸಿದೆ.
ರಹಸ್ಯ ಪಾಲನೆ
ಅಧಿಕಾರಿಗಳ ತಂಡಕ್ಕೆ ಯಾವ ಕೇಂದ್ರದ ಜವಾಬ್ದಾರಿಯನ್ನು ವಹಿಸಲಾಗುತ್ತದೆ ಎನ್ನುವುದನ್ನು ಮೊದಲೇ ತಿಳಿಸದೇ, ಪರೀಕ್ಷಾ ದಿನದಂದೇ ಬೆಳಿಗ್ಗೆ ಅವರಿಗೆ ವಹಿಸಿರುವ ಕೇಂದ್ರಗಳ ಪಟ್ಟಿ ನೀಡಲಾಗುತ್ತಿದೆ. ಪ್ರತಿಯೊಂದು ಅಧಿಕಾರಿಗಳ ತಂಡಕ್ಕೆ 6 ರಿಂದ 8 ಪರೀಕ್ಷಾ ಕೇಂದ್ರಗಳ ಜವಾಬ್ದಾರಿ ವಹಿಸಲಾಗುತ್ತಿದೆ.
ಪರೀಕ್ಷೆ ವೇಳೆ ಅಡಚಣೆರಹಿತ ವಿದ್ಯುತ್
ಎಸ್ಸೆಸ್ಸೆಲ್ಸಿ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬೆಳಿಗ್ಗೆ ಮತ್ತು ಸಂಜೆ 6 ರಿಂದ 9ರ ವರೆಗೆ ಅಡಚಣೆ ರಹಿತ ವಿದ್ಯುತ್ ಪೂರೈಸಲು ಇಂಧನ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಒಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲಿ ಎನ್ನುವುದು ಎಲ್ಲರ ಆಶಯ. ಮಕ್ಕಳಿಗೆ ಆಲ್ ದಿ ಬೆಸ್ಟ್.