ಲಾಕ್ಡೌನ್ 3.0 ಮುಗಿಯುತ್ತಿದ್ದಂತೆ ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟ
ಬೆಂಗಳೂರು, ಮೇ 5: ಕೊರೊನಾ ಸೋಂಕು ಹರಡದಂತೆ ಸರ್ಕಾರ ವಿಧಿಸಿರುವ ಮೂರನೇ ಅವಧಿಯ ಲಾಕ್ ಡೌನ್ ಮುಗಿಯುತ್ತಿದ್ದಂತೆ ಕರ್ನಾಟಕ ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ಪ್ರಕಟಣೆ ನಿರೀಕ್ಷಿಸಬಹುದಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಿಕೆಯಾಗಿತ್ತು. ಈ ಬಗ್ಗೆ ಶೀಘ್ರದಲ್ಲೇ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದ್ದು, ಬಹುಶಃ ಜೂನ್ ತಿಂಗಳಲ್ಲಿ ಪರೀಕ್ಷೆ ಆಯೋಜಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ತಡವಾಗಿ ನಡೆಸಲಾಗುತ್ತಿದೆ. ಪರೀಕ್ಷೆಗೆ ಬೇಕಾದ ಸಿದ್ಧತೆ, ವೇಳಾಪಟ್ಟಿ ತಯಾರಿಸಲು ರಾಜ್ಯ ಸರ್ಕಾರ ನಿರ್ಧಾರಿಸಿದ್ದು, ಶಿಕ್ಷಣ ಇಲಾಖೆಯ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಲಾಕ್ಡೌನ್ ತೆರವುಗೊಂಡ ಬಳಿಕ ಮೊದಲಿಗೆ ಒಂದು ಸುತ್ತಿನ ರಿವಿಜನ್ ಕ್ಲಾಸ್ ನಡೆಸಲಾಗುತ್ತದೆ. ಬಳಿಕ ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ಮೇ. 17 ನಂತರ ವಿದ್ಯಾರ್ಥಿಗಳಿಗೆ 10 ದಿನ ಕ್ಲಾಸ್ ನಡೆಸಿ, ಜೂನ್ ನಲ್ಲಿ ಪರೀಕ್ಷೆ ನಡೆಸಲು ನಿರ್ಧಾರಿಸಲಾಗಿದೆ ಎಂದರು.
ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದೆ. ಈ ಕುರಿತಂತೆ ಅಧಿಕೃತ ವೇಳಾಪಟ್ಟಿಯನ್ನು ಸುರೇಶ್ ಕುಮಾರ್ ಅವರು ಇನ್ನು 20-30 ದಿನಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಮುಂದಿಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಕೊರೊನಾ ಪಾಸ್ ಬ್ಯಾಚ್: ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೊರೊನಾ ದೆಸೆಯಿಂದ ಎಸ್ಎಸ್ಎಲ್ಸಿ ಪಾಸ್ ಆದ ಬ್ಯಾಚಿಗೆ ಸೇರಿದವರು ಎಂದು ಕರೆಸಿಕೊಳ್ಳಲು ಇಷ್ಟವಿಲ್ಲ. ಪರೀಕ್ಷೆ ಎದುರಿಸಿ ಫಲಿತಾಂಶಕ್ಕಾಗಿ ಕಾಯಲು ಸಿದ್ಧ ಎಂದಿದ್ದಾರೆ. ಸದ್ಯ ದೂರದರ್ಶನದಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯದ ಪುನರಾವರ್ತನಾ ತರಗತಿ (ರಿವಿಜನ್ ಕ್ಲಾಸ್) ಗಳು ದೂರದರ್ಶನದ ಚಂದನದಲ್ಲಿ ಪ್ರಸಾರವಾಗುತ್ತಿದ್ದು, ಇಂಗ್ಲೀಷ್ ಇನ್ನಿತರ ಪಠ್ಯಗಳ ರಿವಿಜನ್ ಕೂಡಾ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.