ಎಸ್ಎಸ್ಎಲ್ಸಿ-ಪಿಯು ಮಂಡಳಿ ವಿಲೀನ
ಬೆಂಗಳೂರು, ಆಗಸ್ಟ್ 31: ಪದವಿ ಪೂರ್ವ ಶಿಕ್ಷಣ ಮಂಡಳಿಯನ್ನು, ಪ್ರೌಢಶಿಕ್ಷಣ ಮಂಡಳಿ (ಎಸ್ಎಸ್ಎಲ್ಸಿ) ಯನ್ನು ವಿಲೀನಗೊಳಿಸಲಾಗುತ್ತಿದ್ದು, ಈ ಡಿಸೆಂಬರ್ ವೇಳೆಗೆ ವಿಲೀನ ಪೂರ್ಣಗೊಳ್ಳಲಿದೆ.
ಈ ಎರಡೂ ಮಂಡಳಿಗಳನ್ನು ವಿಲೀನ ಮಾಡುವ ಪ್ರಸ್ತಾವವು ಈ ಮುಂದೆಯೂ ಸರ್ಕಾರದ ಮುಂದೆ ಇತ್ತು, ಅದಕ್ಕೆ ಈಗ ಕಾಯಕಲ್ಪ ದೊರೆತಿದೆ. 2020 ರ ಪರೀಕ್ಷೆಗಳನ್ನು ಒಂದೇ ಮಂಡಳಿಯು ಮಾಡಲಿದೆ.
ಪ್ರೌಢಶಿಕ್ಷಣಾ ಮಂಡಳಿ (ಕೆಎಸ್ಇಇಬಿ) ಮತ್ತು ಪದವಿ ಪೂರ್ವ ಶಿಕ್ಷಣ ಮಂಡಳಿ ಪ್ರತ್ಯೇಕವಾಗಿ ಇಷ್ಟು ದಿನ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ವಿಲೀನವು ಅಂತ್ಯವಾದ ಈ ಎರಡೂ ಮಂಡಳಿಗಳು ಒಟ್ಟಿಗೆ ಕಾರ್ಯ ನಿರ್ವಹಿಸಲಿವೆ.
ನಿನ್ನೆ ನಡೆದ ಅಧಿಕಾರಿಗಳು ಮತ್ತು ಸಚಿವರ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ಹೊಸ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಈ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಸಭೆಯ ಬಳಿಕ ಮಾತನಾಡಿರುವ ಸುರೇಶ್ ಕುಮಾರ್, ಎರಡೂ ಮಂಡಳಿಗಳನ್ನು ವಿಲೀನ ಮಾಡುವ ಪ್ರಸ್ತಾವದ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದು, ಅಗತ್ಯ ಕ್ರಮಗಳನ್ನು ಶೀಘ್ರವಾಗಿ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಎರಡೂ ಮಂಡಳಿಗಳನ್ನು ವಿಲೀನಗೊಳಿಸುವ ಸಲುವಾಗಿ ಈಗಾಗಲೇ 50 ಕೋಟಿಯನ್ನು ತೆಗೆದು ಇಡಲಾಗಿದ್ದು, ಈ ವಿಲೀನ ಪ್ರಕ್ರಿಯೆಯಿಂದ ಎರಡೂ ಮಂಡಳಿಗಳಿಗೆ ಸಹಾಯವಾಗಲಿದೆ, ಸಾಕಷ್ಟು ಹಣ ಉಳಿತಾಯವಾಗಲಿದೆ ಎಂದು ಅವರು ಹೇಳಿದರು.
ಪ್ರತಿ ವರ್ಷ 8.5 ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಮತ್ತು 6 ಲಕ್ಷ ವಿದ್ಯಾರ್ಥಿಗಳು ಪಿಯು ಪರೀಕ್ಷೆ ಬರೆಯುತ್ತಾರೆ.