ಡಿಸ್ಟಿಂಕ್ಷನ್ ನಲ್ಲಿ ಪಾಸಾದ ಸುರೇಶ್ ಕುಮಾರ್ ಗೆ ಕಂಗ್ರಾಟ್ಸ್: ಇನ್ನೇನಿದ್ದರೂ ಫಲಿತಾಂಶ
ಸರಕಾರ ಎರಡು ಸಾವಿರ ಕೋಟಿ ಅವ್ಯವಹಾರ ನಡೆಸಿದೆ ಎನ್ನುವ ಸಿದ್ದರಾಮಯ್ಯನವರ ಆರೋಪದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಉತ್ತರಿಸುತ್ತಾ, "ನನಗೆ ಕಳೆದ ಮೂರು ವಾರಗಳಿಂದ ಊಟ, ನೀರು, ಉಸಿರು ಎಲ್ಲಾ ಎಸ್ಎಸ್ಎಲ್ಸಿ ಪರೀಕ್ಷೆ ಮಾತ್ರ" ಎನ್ನುವ ಮಾತನ್ನು ಹೇಳಿದರು.
ಹೌದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮಹತ್ವವಾಗಿರುವ ಈ ಸಮಯದಲ್ಲಿ, ಸುಮಾರು ಎಂಟೂವರೆ ಲಕ್ಷ ವಿದ್ಯಾರ್ಥಿಗಳ ಶೈಕ್ಷಣಿಕ ಬುನಾದಿ ಬರೆಯುವ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದೆಂದರೆ ತಮಾಷೆಯ ಮಾತೇ?
SSLC ಪರೀಕ್ಷೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪಾಸ್!
"ರಾಜ್ಯದ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವಂತಹ ಸಾಧನೆಯಿದು" ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಸುರೇಶ್ ಕುಮಾರ್ ಮತ್ತು ಶಿಕ್ಷಣ ಇಲಾಖೆಯ ಬೆನ್ನು ತಟ್ಟಿದ್ದಾರೆ. ನಿಸ್ಸಂಶಯವಾಗಿ, ಸಚಿವರು ಮತ್ತು ಇಲಾಖೆ ಈ ಹೊಗಳಿಕೆಗೆ ಅರ್ಹರು.
ಕೊರೊನಾ ರಣಕೇಕೆ ಹಾಕುತ್ತಿರುವ ಈ ಸಮಯದಲ್ಲಿ ಸರಕಾರ ತನ್ನ ಮೇಲಿದ್ದ ಅತಿದೊಡ್ಡ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಇಡೀ ದೇಶವೇ ಕಾತುರದಿಂದ ವೀಕ್ಷಿಸುತ್ತಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಸಂಘಟಿತವಾಗಿ, ಯಶಸ್ವಿಯಾಗಿ ನಡೆಸಿದ ಸುರೇಶ್ ಕುಮಾರ್ ಮತ್ತು ತಂಡಕ್ಕೆ ಅಭಿನಂದನೆಗಳು.
ಸಚಿವ ಸುರೇಶ್ ಕುಮಾರ್
ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ವಿಚಾರದಲ್ಲಿ ಸಚಿವ ಸುರೇಶ್ ಕುಮಾರ್ ಅವರಿಗೆ ಮೊದಲಿಂದಲೂ ಯಾವುದೇ ಗೊಂದಲವಿರಲಿಲ್ಲ. ಪರೀಕ್ಷೆ ನಡೆಸುವ ವಿಚಾರದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದ ಸಚಿವರು, ಪರೀಕ್ಷೆಯನ್ನು ನಾನು ಪ್ರತಿಷ್ಠೆಗಾಗಿ ತೆಗೆದುಕೊಂಡಿಲ್ಲ ಎಂದು ಹಲವು ಬಾರಿ ಹೇಳಿದ್ದರು.
ನಿಮ್ಮ ಹಿಂದೆ ನಾನು ಇದ್ದೇನೆ, ಸಿಎಂ ಯಡಿಯೂರಪ್ಪನವರ ಧೈರ್ಯ
ಯಾವುದೇ ಗೊಂದಲ ಬೇಡ, ನಿಮ್ಮ ಹಿಂದೆ ನಾನು ಇದ್ದೇನೆ ಎಂದು ಸಿಎಂ ಯಡಿಯೂರಪ್ಪನವರ ಧೈರ್ಯ, ನನಗೆ ಮತ್ತು ನಮ್ಮ ಇಲಾಖಾ ಸಿಬ್ಬಂದಿಗಳಿಗೆ ಹೊಸ ಹುಮ್ಮಸ್ಸನ್ನು ನೀಡಿತು ಎಂದು ಸಚಿವ ಸುರೇಶ್ ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ. ಸುರೇಶ್ ಕುಮಾರ್ ಅವರ ಮಾತಿಗೆ ಕಾರಣ ಇಲ್ಲದಿಲ್ಲ, ಯಾಕೆಂದರೆ, ಸಚಿವ ಸಂಪುಟದಲ್ಲೇ ಪರೀಕ್ಷೆ ನಡೆಸುವ ವಿಚಾರದಲ್ಲಿ ಒಮ್ಮತವಿರಲಿಲ್ಲ.
ಇಲಾಖೆಯ ಅಧಿಕಾರಿಗಳು
ಪಕ್ಕದ ರಾಜ್ಯಗಳು ಪರೀಕ್ಷೆಯನ್ನೇ ರದ್ದು ಪಡಿಸಿದಾಗ, ಕರ್ನಾಟಕವೂ ಇದೇ ದಾರಿಯಲ್ಲಿ ಸಾಗಬಹುದು ಎನ್ನುವ ಮಾತು ಕೇಳಿಬರುತ್ತಿತ್ತು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಚಿವ ಸುರೇಶ್ ಕುಮಾರ್, ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಜೊತೆ ಸತತ ಸಂಪರ್ಕ, ಹೊಂದಾಣಿಕೆ ಮಾಡಿಕೊಂಡು, ಎಲ್ಲವೂ ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು.
SSLC Exam ಯಶಸ್ವಿಯಾಗಿ ನಡೆಸಲು ಶ್ರಮಿಸಿದ ಸಮಸ್ತ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸಿದ ಸಿಎಂ
ಹೆಚ್ಚುಕಮ್ಮಿಯಾದರೆ ಸರಕಾರವೇ ನೇರ ಹೊಣೆ
ಹೆಚ್ಚುಕಮ್ಮಿಯಾದರೆ ಸರಕಾರವೇ ನೇರ ಹೊಣೆ ಎನ್ನುವ ವಿರೋಧ ಪಕ್ಷಗಳ ಮತ್ತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದ ಮಾತನ್ನು, ಎಚ್ಚರಿಕೆಯಾಗಿ ತೆಗೆದುಕೊಂಡ ಸಚಿವಾಲಯ, ಸರಕಾರದ ಪಾಲಿಗೆ ಸಾಧನೆಯ ಪಟ್ಟಿಗೆ ಸೇರಿಸಬಹುದಾದ ಕೆಲಸವನ್ನು ಮಾಡಿ ಮುಗಿಸಿದೆ.
ಕೊರೊನಾ ಮಾರ್ಗಸೂಚಿಯಂತೇ ಪರೀಕ್ಷೆ
ಇನ್ನು, ಪರೀಕ್ಷೆ ಬರೆಯಲು ಬರುವ ಮಕ್ಕಳಿಗೆ ಕೊರೊನಾ ಮಾರ್ಗಸೂಚಿಯಂತೇ ಪರೀಕ್ಷೆ ನಡೆಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಉಷ್ಣತೆ ಜಾಸ್ತಿಯಿದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಸಿ, ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂತು. ಗ್ರಾಮಾಂತರ ಭಾಗದ ಕೆಲವು ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಿ, ಮಕ್ಕಳಿಗೆ ಹುಮ್ಮಸ್ಸು/ಧೈರ್ಯ ತುಂಬುವ ಕೆಲಸವನ್ನು ಮಾಡಲಾಯಿತು.
ಕಂಗ್ರಾಟ್ಸ್ ಮಿ.ಸುರೇಶ್ ಕುಮಾರ್
ಬೆನ್ನಿಗೆ ಬೆನ್ನಾಗಿ ನಿಂತ ರಾಜ್ಯದ ಎಲ್ಲಾ ಜಿಲ್ಲಾಡಳಿತ, ಇಲಾಖೆಯ ಸಿಬ್ಬಂದಿಗಳ ಪ್ರೋತ್ಸಾಹ, ಪೋಷಕರ ಸಹಕಾರ, ವಿದ್ಯಾರ್ಥಿಗಳು ಧೈರ್ಯದಿಂದಾಗಿ, ದೊಡ್ಡ ಸವಾಲಿನ ಕೆಲಸವಾಗಿದ್ದ ಎಸ್ಎಸ್ಎಲ್ಸಿ ಪರೀಕ್ಷೆ, ಅಲ್ಲಲ್ಲಿ ಕೆಲವು ಅಪವಾದಗಳ ಹೊರತಾಗಿ ತೊಂದರೆಯಿಲ್ಲದೇ ಮುಗಿದಿದೆ. ಕಂಗ್ರಾಟ್ಸ್ ಮಿ.ಸುರೇಶ್ ಕುಮಾರ್ ಎಂಡ್ ಟೀಮ್.