ರಾಜ್ಯದ 6 ತಾಣಗಳು ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಗೆ
ಬೆಂಗಳೂರು, ಮೇ. 23: ಕರ್ನಾಟಕದ ಆರು ಸ್ಥಳಗಳನ್ನು ಮೂರು ವಿಭಾಗಗಳಲ್ಲಿ ಯುನೆಸ್ಕೋ ತನ್ನ ವಿಶ್ವ ಪರಂಪರೆಯ 'ತಾತ್ಕಾಲಿಕ ಪಟ್ಟಿ'ಗೆ ಸೇರಿಸಿದೆ.
ಸುಲ್ತಾನ್ ವಾಸ್ತುಶಿಲ್ಪ ಶೈಲಿಯ ಸ್ಮಾರಕ, ಗುಮ್ಮಟಗಳನ್ನು ಹೊಂದಿರುವ ಗುಲ್ಬರ್ಗ, ಬೀದರ್, ವಿಜಾಪುರ, ಹೊಯ್ಸಳ ವಾಸ್ತುಶಿಲ್ಪ ಶೈಲಿಯ ದೇವಾಲಯ ಇರುವ ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣವನ್ನು ಇದೀಗ ಯುನೆಸ್ಕೊ ತನ್ನ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ.[ವಿಶ್ವಪಾರಂಪರಿಕ ಪಟ್ಟಿಗೆ ಸೇರಿದ ಕರ್ನಾಟಕದ ಇತರ ಸ್ಥಳಗಳು]
ಹಂಪಿ, ಪಟ್ಟದಕಲ್ಲು ಹಾಗೂ ಪಶ್ಚಿಮ ಘಟ್ಟಗಳು ಈಗಾಗಲೇ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿವೆ. ಅಳವಿನಂಚಿರುವ ಅಥವಾ ನಿರ್ಲಕ್ಷಕ್ಕೆ ಒಳಗಾಗಿರುವ ಸ್ಥಳಗಳನ್ನು ಸಂರಕ್ಷಿಸುವ ಉದ್ದೇಶದಿಂದ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಈ ಸ್ಥಳಗಳನ್ನು ಸೇರಿಸುತ್ತದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದರೆ ಅವುಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಆರ್ಥಿಕ ಸಹಕಾರ ಸಿಗುತ್ತದೆ. ಜೊತೆಗೆ ಈ ತಾಣಗಳು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಯಾಗುತ್ತದೆ.
ಈ ಪಟ್ಟಿಗೆ ಸೇರ್ಪಡೆಯಾಗಲು ಹಲವಾರು ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಈಗ ಪ್ರಕಟವಾಗಿರುವುದು ತಾತ್ಕಾಲಿಕ ಪಟ್ಟಿ ಮಾತ್ರ. ರಾಜ್ಯದ ಈ ತಾಣಗಳು ಅಂತಿಮ ಪಟ್ಟಿಗೆ ಸೇರಬೇಕಾದರೆ ರಾಜ್ಯ ಸರ್ಕಾರ ಯುನೊಸ್ಕೋ ನಿಗದಿ ಪಡಿಸಿದ ಮಾನದಂಡಗಳನ್ನು ನೀಡಿ ಅರ್ಹತೆ ಪಡೆದುಕೊಳ್ಳಬೇಕಾಗುತ್ತದೆ.
ಯುನೆಸ್ಕೋ ಈ ವರ್ಷ ಪ್ರಕಟಿಸಿದ ತಾತ್ಕಾಲಿಕ ಪಟ್ಟಿಯಲ್ಲಿ ದೇಶದ 22 ಸ್ಥಳಗಳು ಸ್ಥಾನ ಪಡೆದಿದ್ದು ಇದರಲ್ಲಿ ಆರು ಕರ್ನಾಟಕದ ಸ್ಥಳಗಳು ಆಯ್ಕೆಯಾಗಿವೆ. 1998ರಿಂದ ಆರಂಭವಾಗಿ 2014ರವರೆಗಿನ ತಾತ್ಕಾಲಿಕ ಪಟ್ಟಿಯಲ್ಲಿ ದೇಶದ 48 ಸ್ಥಳಗಳು ಸ್ಥಾನಪಡೆದಿವೆ.