ದೆಹಲಿ ಸರ್ಕಾರಿ ಶಾಲೆಗಳು ಕರ್ನಾಟಕಕ್ಕೆ ಮಾದರಿಯಾಗಲಿ: ಎಎಪಿ
ಬೆಂಗಳೂರು, ಜುಲೈ 14: ಕೊರೋನಾ ಸಂಕಷ್ಟದ ಕಾಲದಲ್ಲೂ ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ದೆಹಲಿ ಸರ್ಕಾರಿ ಶಾಲೆಯ ಮಕ್ಕಳ ಫಲಿತಾಂಶ ಇಡೀ ದೇಶಕ್ಕೆ ಮಾದರಿ ಆಗಿದೆ, ಶೇ 98 ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಕಳೆದ ಮೂರು ವರ್ಷಗಳ ಉತ್ತಮ ದಾಖಲೆಯನ್ನೇ ಮುರಿದಿದ್ದಾರೆ.
Recommended Video
ಕರ್ನಾಟಕದಲ್ಲಿಯೂ ಸಹ ಇದೇ ರೀತಿ ಸರ್ಕಾರಿ ಶಾಲೆಯ ಮಕ್ಕಳು ಸಾಧನೆ ಮಾಡಬೇಕು ಹಾಗೂ ದೆಹಲಿ ಮಾದರಿಯ ಶಿಕ್ಷಣವನ್ನು ನೀಡಲು ಸರ್ಕಾರ ಮುಂದಾಗಬೇಕು ಎಂಬುದು ನಮ್ಮ ಮನವಿ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.
ದೆಹಲಿ ಶಿಕ್ಷಣ ಮಾದರಿಯ ಯಶಸ್ಸಿಗೆ ದಶ ಸೂತ್ರಗಳು
ಎಲ್ಲದಕ್ಕಿಂತ ಹೆಚ್ಚಾಗಿ ದೆಹಲಿ ಸರ್ಕಾರದ ಉತ್ತಮ ಶಿಕ್ಷಣ ವ್ಯವಸ್ಥೆ ಬೇರೆ ರಾಜ್ಯಗಳಿಗೆ ಮಾದರಿ ಆಗಬೇಕಿರುವುದು ಇಂದಿನ ತುರ್ತು. ಏಕೆಂದರೆ ಸರ್ಕಾರಿ ಶಾಲೆಗಳಿಗಿಂತ ಉತ್ತಮವಾದ, ಗುಣಮಟ್ಟದ ಶಿಕ್ಷಣ ಕೊಡುತ್ತೇವೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಸುಲಿಗೆ ಮಾಡುತ್ತಿರುವ ಈ ಹೊತ್ತಿನಲ್ಲಿ ದೆಹಲಿ ಸರ್ಕಾರಿ ಶಾಲಾ ವ್ಯವಸ್ಥೆ ಹಾಗೂ ಶಿಕ್ಷಣ ದೇಶದ ಎಲ್ಲಾ ಮಕ್ಕಳಿಗೂ ಸಿಗುವಂತಾಗಲಿ ಎಂಬುದು ಆಮ್ ಆದ್ಮಿ ಪಕ್ಷದ ಕಾಳಜಿಯಾಗಿದೆ.
ಕೊರೋನಾ ಸಂಕಷ್ಟದಿಂದ ಅನೇಕ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಕುಟುಂಬಗಳು ಈ ಬಾರಿ ಮಕ್ಕಳನ್ನು ದುಬಾರಿ ಶುಲ್ಕ ಕೊಟ್ಟು ಶಾಲೆಗೆ ಕಳುಹಿಸಬೇಕೆ ಎನ್ನುವ ಗೊಂದಲದಲ್ಲಿ ಇದ್ದಾರೆ, ಇಂತಹ ಸಂಕಷ್ಟದ ಹೊತ್ತಿನಲ್ಲಿ ದೆಹಲಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿ ಪೋಷಕರ ನೆರವಿಗೆ ನಿಲ್ಲಬೇಕು.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮೂಲ ಸೌಕರ್ಯಗಳನ್ನು ಕಲ್ಪಿಸಲು ಈ ಲಾಕ್ಡೌನ್ ಸಂದರ್ಭ ಚೆನ್ನಾಗಿದೆ ಎಂದು ಈ ಹಿಂದೆ ಆಮ್ ಆದ್ಮಿ ಪಕ್ಷ ಸಲಹೆ ನೀಡಿತ್ತು. ಈ ಕೂಡಲೇ ಸರ್ಕಾರ ಈ ಮನವಿಯನ್ನು ಪರಿಗಣಿಸಿ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಈ ಕೂಡಲೇ ಕೆಲಸ ಮಾಡಬೇಕು. ಬಜೆಟ್ನಲ್ಲಿ ಮೀಸಲಿಟ್ಟಿರುವ ಕೇವಲ ಶೇ 3 ಹಣವನ್ನು ಕನಿಷ್ಟ ಶೇ 15 ಕ್ಕೆ ಹೆಚ್ಚಿಸಬೇಕು. ಈ ಮೂಲಕವಾದರೂ ಸರ್ಕಾರ ಜನರ ನೆರವಿಗೆ ನಿಲ್ಲಲಿ ಎಂಬುದು ಆಮ್ ಆದ್ಮಿ ಪಕ್ಷದ ಕಾಳಜಿಯಾಗಿದೆ.