SPಗೆ ಗುಡ್ ಬೈ: ದಿಲ್ಲಿಯಲ್ಲಿ ಶಂಕರ ಬಿದರಿ ಘೋಷಣೆ
ಬೆಳಗಿನ ಸುದ್ದಿ: ಹೆಚ್ಚೇನೂ ಇಲ್ಲ. ಕೇವಲ ಒಂಬತ್ತು ತಿಂಗಳ ಹಿಂದೆ ಶಂಕರ ಮಹಾದೇವ ಬಿದರಿ ಅವರು ಪೊಲೀಸ್ ಅಧಿಕಾರಿಯಾಗಿ ತಾವು ಸಲ್ಲಿಸಿದ ಉತ್ತಮ ಕೆಲಸಕ್ಕೆ ಸುಪ್ರೀಂ ಕೋರ್ಟಿನಿಂದ ಒಂದು ಸರ್ಟಿಫಿಕೇಟ್ ಪಡೆದರು. ಅದು ಅವರ ಜೀವನದಲ್ಲಿ ಬಹುದೊಡ್ಡ ಗೆಲುವಾಗಿತ್ತು. ಅದು ಅಷ್ಟಕ್ಕೆ ನಿಂತಿದ್ದರೆ ಬಿದರಿ ಅವರು ಇಂದು ಪ್ರಶಾಂತ ನಿವೃತ್ತ ಜೀವನ ಸವಿಯಬಹುದಿತ್ತು.
ಆದರೆ ಜನಸೇವೆ ಮಾಡಬೇಕು ಎಂಬ ಉಮೇದಿನಲ್ಲಿ ರಾಜಕೀಯ ಪ್ರವೇಶಿಸಿದರು. ಆದರೆ ಅಲ್ಲಿಂದೀಚೆಗೆ 65 ವರ್ಷದ ಬಿದರಿ ಅವರ ಒಂದೊಂದು ರಾಜಕೀಯ ನಡೆಯೂ ನಿಗೂಢವಾಗುತ್ತಾ, ಅತ್ಯಾಶ್ಚರ್ಯವೆಂಬಂತೆ ಸಿಕ್ಕ ಸಿಕ್ಕ ಪಾರ್ಟಿಗಳ ಕೈಹಿಡಿದರು.
ಮೊದಲು ಕಾಂಗ್ರೆಸ್ ಅಂಗಳದಲ್ಲಿ ಕಾಣಿಸಿಕೊಂಡರು. ಅದು ಸರಿಹೋಗುತ್ತಿಲ್ಲ ಎಂದೆನಿಸುತ್ತಿದ್ದಂತೆ ಲಖ್ನೋವರೆಗೂ ಸೈಕೆಲ್ ಹತ್ತಿ ಹೊರಟರು. ದೆಹಲಿಯಲ್ಲಿ ಮುಲಾಯಂ ಪಕ್ಷವನ್ನು ತಬ್ಬಿಕೊಂಡವರೆ ಕಾಂಗ್ರೆಸ್ ಹಾಗೆ ಹೀಗೆ ಎಂದು ಅಲವತ್ತುಕೊಂಡರು. ಅಷ್ಟೇ ಅಲ್ಲ. ದೇಶದ ಇಂದಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸೈಕಲ್ ಒಂದೇ ಎಂದರು.
ಆದರೆ ಈಗ ಆ ಸೈಕಲ್ ಸುಸ್ಥಿತಿಯಲ್ಲಿಲ್ಲ. ತಮಗೂ ಅದಕ್ಕೂ ಆಗಬರುವುದಿಲ್ಲ ಎಂಬ ಸ್ಥಿತಿಗೆ ಬಿದರಿ ಸಾಹೇಬರು ಬಂದುನಿಂತಿದ್ದಾರೆ. ಆದರೆ ಇದನ್ನೆಲ್ಲ ಗಮನಿಸಿದ ಜನ, ಖಡಕ್ ಪೊಲೀಸ್ ಅಧಿಕಾರಿ ಎನಿಸಿಕೊಂಡಿದ್ದ ಬಿದರಿ ಅವರಿಗೆ ಇದೆಲ್ಲಾ ಬೇಕಿತ್ತಾ? ಜನಸೇವೆ ಮಾಡಲು ರಾಜಕೀಯವೇ ಬೇಕಿತ್ತಾ? ಯಾಕೋ ಎಲ್ಲ ಎಡವಟ್ಟು ಮಾಡಿಕೊಂಡಬಿಟ್ಟರು ಎಂದು ಮಮ್ಮಲಮರುಗಿದರು.
ಆದರೆ ಶಂಕರ ಮಹಾದೇವ ಬಿದರಿ ಅವರು ಇಟ್ಟ ಹೆಜ್ಜೆ ಹಿಂತೆಗೆಯುವರಲ್ಲ. ರಾಜಕೀಯ ಜಯಿಸಲೇಬೇಕು ಎಂದು ಪಣತೊಟ್ಟಿದ್ದಾರೆ- ಅದು ಯಾವುದೇ ಪಕ್ಷವಾದರೂ ಸರಿ ಎನ್ನುತ್ತಿದ್ದಾರೆ. ಆದರೆ ತಾವು ಸೇವೆಯಲ್ಲಿದ್ದಾಗ ತಮ್ಮನ್ನು ಇನ್ನಿಲ್ಲದಂತೆ ಗೋಳುಹೊಯ್ದುಕೊಂಡ ಗೌಡ ಫ್ಯಾಮಿಲಿ ಸಹವಾಸ ಬೇಡವೇ ಬೇಡ ಎಂದು ನಿಶ್ಚಯಿಸಿರುವಂತಿದೆ . ಹಾಗಾಗಿ ಜೆಡಿಎಸ್ ಸಹವಾಸದಿಂದ ಬಿದರಿ ದೂರವೇ ಇರುವುದು ನಿಶ್ಚಿತ.
ಹಾಗಾಗಿ ಈ ಹಂತದಲ್ಲಿ ಅವರಿಗೆ ಕಾಣಿಸಿಕೊಂಡಿರುವುದು ಅವರ ಹಳೆಯ ರಾಜಕೀಯ ಧಣಿ ಯಡಿಯೂರಪ್ಪ. ಹಾಗಾಗಿ ಸಮಾಜವಾದಿ ಪಕ್ಷ ತೊರೆದು ಶಾಸ್ತ್ರಕ್ಕೆಂದು ಇದೇ 12ರಂದು ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿ, ಯಡಿಯೂರಪ್ಪನವರ ಕೆಜೆಪಿ/ಬಿಜೆಪಿ ಹಿಡಿಯುವ ಲಕ್ಷಣಗಳು ಹೆಚ್ಚಾಗಿವೆ ಎಂದು ಬಿದರಿ ಆಪ್ತ ಮೂಲಗಳ ಅನಿಸಿಕೆ. ಗುಲ್ಬರ್ಗಾ ಯಾನಾಗುಂಡಿಯ ಮಾತೆ ಮಾಣಿಕೇಶ್ವರಿ ಶಂಕರ ಬಿದರಿಗೆ ಯಾವ ದಾರಿ ತೋರುತ್ತಾರೋ ಕಾದುನೋಡಬೇಕಿದೆ.
ಗೂಳಿಹಟ್ಟಿ ಶೇಖರ್ ಗುಡ್ ಬೈ?: ಕುತೂಹಲದ ಸಂಗತಿಯೆಂದರೆ ಸಿಪಿ ಯೋಗೀಶ್ವರ್ ಅವರ 'ಹೈಕಮಾಂಡ್'ನಿಂದ ಬಸವಳಿದಿರುವ ಗೂಳಿಹಟ್ಟಿ ಶೇಖರ್ ಅವರೂ ಸಹ ಸಮಾಜವಾದಿ ಪಕ್ಷ ತೊರೆಯುವ ಲಕ್ಷಣಗಳು ಹೆಚ್ಚಾಗಿವೆ ಎನ್ನಲಾಗಿದೆ.