ರೈತರ ಆತ್ಮಹತ್ಯೆ ಕಾಯಿಲೆಗೆ ಸಿದ್ದು ಚುಚ್ಚುಮದ್ದು
ಬೆಂಗಳೂರು, ಜು. 20: ರೈತರ ಆತ್ಮಹತ್ಯೆಗೆ ಕಾರಣ ತಿಳಿಯಲು ತಜ್ಞರ ಸಮಿತಿ ರಚನೆ ಮಾಡಿ ಅಧ್ಯಯನ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ ಜುಲೈ 19, ಭಾನುವಾರ ಭೇಟಿ ಸಾಂತ್ವನ ಹೇಳಿದ ಸಿದ್ದರಾಮಯ್ಯ ಸಮಿತಿ ನೇಮಕದ ವಿಚಾರವನ್ನು ತಿಳಿಸಿದರು.
ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆದಿವೆ. ತುಮಕೂರಿನಲ್ಲೂ ಅನೇಕ ರೈತರು ನೇಣಿಗೆ ಶರಣಾಗಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತಿತರ ಜಿಲ್ಲೆಗಳಲ್ಲಿ ಆತ್ಮಹತ್ಯೆ ನಡೆದ ವರದಿಯಾಗಿಲ್ಲ. ಇದೆಲ್ಲವನ್ನು ಅವಲೋಕಿಸಿ ರೈತರ ಆತ್ಮಹತ್ಯೆಗೆ ಸಾಲಬಾಧೆ ಕಾರಣವೋ, ಕಬ್ಬು ಬೆಳೆ ಸಮಸ್ಯೆಯೋ ಅಥವಾ ಇನ್ನಿತರ ಯಾವುದಾದರೂ ಕಾರಣವಿದೆಯೇ ಎಂಬುದನ್ನು ಪರಾಮರ್ಶೆಗೆ ಒಳಪಡಿಸಬೇಕಾಗಿದೆ ಎಂದು ಹೇಳಿದರು.[ನೊಂದ ರೈತರ ಮನೆಗೆ ಅಂತೂ ಇಂತೂ ಭೇಟಿ ಇತ್ತ ಸಿಎಂ]
ಕೃಷಿ ಕ್ಷೇತ್ರದ ಸಮಸ್ಯೆ ಕುರಿತು ಅಧ್ಯಯನ ನಡೆಸಲು ಕೃಷಿ ತಜ್ಞ ಡಾ.ಎಸ್.ಸ್ವಾಮಿನಾಥನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗುವುದು. ಸಮಿತಿ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.[ಕರ್ನಾಟಕದಲ್ಲಿ ರೈತರ ಸಾವಿಗೆ ಕಾರಣವೇನು? ಇಲ್ಲಿದೆ ಉತ್ತರ]
ರೈತರಿಂದ ಯಾವುದೇ ರೀತಿಯಲ್ಲಿ ಬಲವಂತದ ಸಾಲ ವಸೂಲಿ ಮಾಡದಂತೆ ಸಹಕಾರ ಸಂಘಗಳಿಗೆ ಸೂಚಿಸಲಾಗಿದೆ. ಬಲವಂತದ ಸಾಲ ವಸೂಲಿ ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶೇ.14ಕ್ಕಿಂತ ಹೆಚ್ಚಿನ ಬಡ್ಡಿ ವಸೂಲು ಮಾಡುವ ಖಾಸಗಿ ಲೇವಾದೇವಿಗಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಡಾ.ವೀರೇಶ್ ವರದಿ ಜಾರಿ ಮಾಡಲು ಸಾಧ್ಯವಾಗದ್ದಕ್ಕೆ ಅನೇಕ ಕಾರಣಗಳಿದೆ. ವರದಿ ವಿರೋಧಿಸಿ ರೈತ ಸಂಘಟನೆಗಳೇ ಪ್ರತಿಭಟನೆ ನಡೆಸಿವೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.[ಆತ್ಮಹತ್ಯೆಗೆ ಕಾರಣ ಹುಡುಕಲು ಹುಬ್ಬಳ್ಳಿಯಲ್ಲಿ ರೈತಸಂಘ ಸಭೆ]
ಜುಲೈ 21 ರಂದು ರೈತ ಸಂಘ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು ಕೆಲ ತೀರ್ಮಾನಗಳನ್ನು ತೆಗೆದುಕೊಂಡು ಸರ್ಕಾರದ ಮೇಲೆ ಒತ್ತಡ ಹಾಕಲಿದೆ. ಕರ್ನಾಟಕ ಸರ್ಕಾರ ರೈತ ಸಂಘದ ನಿರ್ಧಾರಗಳಿಗೆ ಯಾವ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.