50 ಲಕ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಅನುಮಾನ
ಬೆಂಗಳೂರು, ಮೇ. 16: ರಾಜ್ಯದಲ್ಲಿ 1 ರಿಂದ 10 ನೇ ತರಗತಿ ವರೆಗೆ ಓದುತ್ತಿರುವ ಸರ್ಕಾರಿ ಮಕ್ಕಳ ಸಂಖ್ಯೆ ಬರೋಬ್ಬರಿ 50 ಲಕ್ಷಕ್ಕಿಂತಲೂ ಹೆಚ್ಚಿದೆ. ಕೊರೊನಾ ದಿಂದ ಎರಡು ವರ್ಷ ಸರಿಯಾಗಿ ಶಾಲೆ ನೋಡದ ಮಕ್ಕಳಿಗೆ ಈ ಭಾರಿಯೂ ಸಮವಸ್ತ್ರ ಸಿಗುವುದು ಸಿಗುವುದು ಅನುಮಾನ. ಯಾಕೆಂದರೆ ಗಗನಕ್ಕೇರಿರುವ ಸಮವಸ್ತ್ರ ಸರ್ಕಾರದ ಬೆಲೆಗೆ ಸಿಗುತ್ತಿಲ್ಲ. ಬಿಡ್ ದಾರರು ಹೇಳಿದಷ್ಟು ಬೆಲೆ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಇಂಥ ತಿಕ್ಕಾಟಕ್ಕೆ ನಾಂದಿ ಹಾಡಿರುವ ಪರಿಣಾಮ ಈ ವರ್ಷವೂ ಮಕ್ಕಳು ಸಮವಸ್ತ್ರ ಇಲ್ಲದೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಲಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಎರಡು ವರ್ಷ ರಾಜ್ಯದಲ್ಲಿ ಶಾಲೆಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಕಲಿಕಾ ಗುಣಮಟ್ಟದಲ್ಲಿ ರಾಜ್ಯವನ್ನು ಮಾದರಿ ಮಾಡುವ ಪಣ ತೊಟ್ಟಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹದಿನೈದು ದಿನ ಮೊದಲೇ ಶಾಲೆಗಳ ಆರಂಭಕ್ಕೆ ಅವಕಾಶ ಕೊಟ್ಟು ದಾಖಲೆ ಬರೆದಿದ್ದಾರೆ. ಇದೀಗ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಸಿಗುವುದೇ ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣ ಮಾಡಿದೆ.
ಬಟ್ಟೆ ಬೆಲೆ ಬಲು ದುಬಾರಿ:
ಕೊರೊನಾ ಸಂಕಷ್ಟದಿಂದ ಅನೇಕ ಮಿಲ್ಗಳು ಬಾಗಿಲು ಮುಚ್ಚಿಕೊಂಡಿವೆ. ಇನ್ನೊಂದೆಡೆ ಉಕ್ರೇನ್ ರಷ್ಯಾ ಯುದ್ಧದ ಪರಿಣಾಮ ಹತ್ತಿ ಮತ್ತು ಬಟ್ಟೆಯ ಕಚ್ಚಾ ಮಾಲು ಭಾರತಕ್ಕೆ ಸಮಯಕ್ಕೆ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಇದರ ಜತೆಗೆ ಇಂಧನ ಬೆಲೆ ದುಬಾರಿ, ಹಾಗೂ ಖರೀದಿ ಮಾಡುವ ಬಟ್ಟೆಗೆ ಮುಂಗವಾಗಿ ಜಿಎಸ್ ಟಿ ತೆರಿಗೆ ಪಾವತಿ ಮಾಡಬೇಕೆಂಬ ನಿಯಮ ಬಟ್ಟೆ ಉದ್ಯಮವನ್ನು ಹೈರಾಣ ಮಾಡಿಸಿದೆ. ಇದರ ಪರಿಣಾಮ ಒಂದು ಮೀಟರ್ ಬಟ್ಟೆ ದರ ಸರಾಸರಿ 100 ರೂ.ಗೂ ಅಧಿಕ ಹೆಚ್ಚಳವಾಗಿದೆ. ಎಲ್ಲಾ ರೀತಿಯ ಬಟ್ಟೆಯ ಬೆಲೆ ದುಬಾರಿಯಾಗಿರುವುದರಿಂದ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಸಮವಸ್ತ್ರ ಉದ್ಯಮದ ಮೇಲೂ ಗಂಭೀರ ಪರಿಣಾಮ ಬಿದ್ದಿದೆ.
ಈ ಬೆಲೆ ನಂಬಿಕೊಂಡ್ರೆ ಗೋವಿಂದ:
ಕಳೆದ ವರ್ಷ ಒಂದು ಮೀಟರ್ ಸೂಟಿಂಗ್ ಬಟ್ಟೆ ದರ 118 ರೂ.ಗೆ ಸಿಗುತ್ತಿತ್ತು. ಈ ವರ್ಷ ಅದು 168 ರೂ. ಆಗಿದೆ. ಇನ್ನು ಒಂದು ಮೀಟರ್ ಶರ್ಟ್ 68 ರೂ. ಇದ್ದಿದ್ದು ಈಗ 90 ರೂ. ಆಗಿದೆ. ಇದರ ಜತೆಗೆ ಜಿಎಸ್ಟಿ ಪೂರ್ತಿ ಹಣ ಪಾವತಿ ಮಾಡಬೇಕು. ಇಷ್ಟು ಪಾವತಿ ಮಾಡಿದ್ರೂ ಬಟ್ಟೆ ಡೆಲಿವರಿ ಕೊಡಲು ಎರಡು ತಿಂಗಳು ಕಾಯಬೇಕು. ಇಲ್ಲಿದ್ದರೆ ಬಟ್ಟೆಯನ್ನೇ ಕೊಡಲ್ಲ. ಹೀಗಾಗಿ ಬಟ್ಟೆ ಬೆಲೆ ದುಬಾರಿಯಾಗಿರುವ ಕಾರಣ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಸಮವಸ್ತ್ರ ವಿತರಣೆಯಲ್ಲಿ ಭಾರೀ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಸಮವಸ್ತ್ರ ಬೆಲೆ ದುಬಾರಿಯಾಗಿ ಡೀಲರ್ಗಳು ಒದ್ದಾಡುತ್ತಿದ್ದಾರೆ. ಇದರ ಜತೆಗೆ ಶಾಲೆಗಳು ಒದ್ದಾಡುತ್ತಿವೆ.
ಸರ್ಕಾರಿ ಶಾಲೆಗಳ ಸಮವಸ್ತ್ರದ ಸ್ಥಿತಿ:
ರಾಜ್ಯದಲ್ಲಿ ಒಂದರಿಂದ 10 ನೇ ತರಗತಿ ವರೆಗೆ 50 ಲಕ್ಷ ಮಕ್ಕಳು ಅಂದಾಜು ವ್ಯಾಸಂಗ ಮಾಡುತ್ತಿದ್ದಾರೆ. ಒಂದು ಮಗುವಿಗೆ ವರ್ಷದಲ್ಲಿ ಎರಡು ಸಮವಸ್ತ್ರ ನೀಡಲಾಗುತ್ತಿತ್ತು. ಇದಕ್ಕಾಗಿ ಒಂದು ಮಗುವಿಗೆ ಸರ್ಕಾರ ಕನಿಷ್ಠ 300 ರೂ. ನಿಂದ ಗರಿಷ್ಠ 400 ರೂ ಪಾವತಿ ಮಾಡುತ್ತಿತ್ತು. ವಿವಿಧ ಜಿಲ್ಲೆಗಳಲ್ಲಿ ಒಂದೇ ಸಮಯದಲ್ಲಿ ಸಮವಸ್ತ್ರ ವಿತರಣೆ ಮಾಡುವ ಸಂಬಂಧ ಒಂದು ಬೆಲೆ ನಿಗದಿ ಪಡಿಸಿ ಬಿಡ್ ದಾರರಿಗೆ ಹಂಚಿಕೆ ಮಾಡಲಾಗುತ್ತಿತ್ತು. ಇದರಿಂದ ಕಾಲಮಿತಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೂ ಸಮವಸ್ತ್ರ ವಿತರಣೆಯಾಗುತ್ತಿತ್ತು.
ಆದರೆ ಈ ವರ್ಷ ಒಂದು ಮಗುವಿಗೆ ಸಮವಸ್ತ್ರ ಕೊಡಲು ಕನಿಷ್ಠ 280 ರು. ನಿಂದ 300 ರೂ. ವರೆಗೂ ಬಿಡ್ ಮಾಡಿದ್ದಾರೆ ಎನ್ನಲಾಗಿದೆ. ಯಾರೂ ಸಹ ಕಡಿಮೆ ದರಕ್ಕೆ ಬಿಡ್ ಹಾಕಿಲ್ಲ. ಆದರೆ ಬಿಡ್ ದಾರರ ಬಿಡ್ ನಂಬಿ ಸರ್ಕಾರ ಸಮವಸ್ತ್ರ ಖರೀದಿ ಮಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಮತ್ತು ಬಿಡ್ ದಾರರ ನಡುವೆ ಬೆಲೆ ಸಮರ ಶುರುವಾಗಿದೆ. ಈ ವಿಚಾರದಲ್ಲಿ ಹುಟ್ಟಿರುವ ಗೊಂದಲ ಇನ್ನೂ ಇತ್ಯರ್ಥವಾಗಿಲ್ಲ. ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಸಿಗುವುದು ಅನುಮಾನ ಎಂದೇ ಹೇಳಲಾಗುತ್ತಿದೆ.
ಸಮವಸ್ತ್ರಕ್ಕೆ ಎಲ್ಲಿ ತರೋದು
ರಾಜ್ಯದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ರಾಜ್ಯ ಸರ್ಕಾರ ಕಲಿಕಾ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದನ್ನು ಎಲ್ಲಾ ಶಾಲೆಗಳಲ್ಲಿ ಅನುಷ್ಠಾನ ಮಾಡಲು ಸರ್ಕಾರ ಕೋಟಿ ಕೋಟಿ ವ್ಯಯ ಮಾಡಬೇಕಾಗಿದೆ. ಹೀಗಾಗಿ ಇರುವ ಅನುದಾನದಲ್ಲಿ ಹೊಂದಾಣಿಕೆ ಮಾಡಲು ಕಷ್ಟಸಾಧ್ಯವಾಗಿದೆ. ಹೀಗಾಗಿ ಕಲಿಕಾ ಚೇತರಿಕೆ ಜತೆಗೆ ಸಮವಸ್ತ್ರದ ಬೆಲೆ ಬರುವುದು ಶಿಕ್ಷಣ ಇಲಾಖೆಗೆ ಕಷ್ಟವಾಗಿ ಪರಿಣಮಿಸಿದೆ. ಹೀಗಾಗಿ ಹೆಚ್ಚುವರಿ ಹೊರೆ ಬೀಳುತ್ತಿರುವ ಸಮವಸ್ತ್ರದ ಹಣವನ್ನು ಕ್ರೋಢೀಕರಣ ಮಾಡಲಾಗದ ಸ್ಥಿತಿ ಎದುರಾಗಿದೆ. ಹೀಗಾಗಿ ಸಮವಸ್ತ್ರ ವಿತರಣೆಯಲ್ಲಿ ಗೊಂದಲ ಏರ್ಪಟ್ಟಿದೆ.
ಗೊಂದಲ ಏರ್ಪಟ್ಟಿದೆ
ರಾಜ್ಯದಲ್ಲಿ ಈ ವರ್ಷ ಕಲಿಕೆ ಮತ್ತು ಮಕ್ಕಳ ಕಲಿಕಾ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಅವರು ಪ್ರತಿನಿಧಿಸುವ ತರಗತಿಗೆ ಅನುಗುಣವಾಗಿ ಅವರನ್ನು ತಯಾರು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಲಿಕಾ ಚೇತರಿಕೆಗೆ ಒತ್ತು ನೀಡಲಾಗಿದೆ. ಸಮವಸ್ತ್ರ ವಿತರಣೆಯಲ್ಲಿ ಗೊಂದಲ ಏರ್ಪಟ್ಟಿದೆ ನಿಜ. ಬಿಡ್ ದಾರರು ದುಬಾರಿ ಬೆಲೆ ನಿಗದಿ ಪಡಿಸಿದ್ದಾರೆ. ಹೀಗಾಗಿ ಸಮವಸ್ತ್ರ ವಿಚಾರದಲ್ಲಿ ಗೊಂದಲ ಏರ್ಪಟ್ಟಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದ್ದಾರೆ.