ಕರ್ನಾಟಕದಲ್ಲಿ ಪ್ರಾಥಮಿಕ-ಪ್ರೌಢಶಾಲೆಗಳ ಪುನಾರಂಭ ಯಾವಾಗ?
ಬೆಂಗಳೂರು, ಜುಲೈ.28: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣ ಪ್ರತಿನಿತ್ಯ ಏರಿಕೆಯಾಗುತ್ತಿದೆ. 2019-20ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಪುನಾರಂಭಗೊಳ್ಳುತ್ತವೆಯೇ ಇಲ್ಲವೇ ಎನ್ನುವುದು ತೀವ್ರ ಚರ್ಚೆಯಾಗುತ್ತಿದೆ.
Recommended Video
ದೇಶಾದ್ಯಂತ ಶಾಲಾ-ಕಾಲೇಜುಗಳನ್ನು ಪುನಾರಂಭಿಸಬೇಕೇ ಅಥವಾ ಬೇಡವೇ ಎನ್ನುವುದರ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜುಲೈ.31ರಂದು ಅನ್ ಲಾಕ್-2 ಅವಧಿ ಅಂತ್ಯಗೊಳ್ಳಲಿದೆ. ಆಗಸ್ಟ್.01ರಂದು ದೇಶಾದ್ಯಂತ ಲಾಕ್ ಡೌನ್-3ರ ಹೊಸ ಮಾರ್ಗಸೂಚಿಗಳು ಯಾವ ರೀತಿಯಲ್ಲಿ ಇರಬೇಕು ಎನ್ನುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದರು. ಈ ವೇಳೆ ಶಾಲಾ-ಕಾಲೇಜುಗಳ ಪುನಾರಂಭಕ್ಕೆ ವಿರೋಧ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳ ಆತಂಕ ಹೆಚ್ಚಿಸಿದ ವಿಟಿಯು ಪರೀಕ್ಷೆ ಘೋಷಣೆ
ಕರ್ನಾಟಕದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಸದ್ಯದ ಮಟ್ಟಿಗೆ ಪುನಾರಂಭಗೊಳ್ಳುವುದು ಅನುಮಾನವಾಗಿದೆ. ಆದರೆ ವಿದ್ಯಾರ್ಥಿಗಳಿರುವ ಗ್ರಾಮಗಳಿಗೇ ಶಿಕ್ಷಕರು ತೆರಳಿ ತರಗತಿಗಳನ್ನು ನಡೆಸುವ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ.
ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರ ಹಿಂದೇಟು
ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿಯು ಪೋಷಕರನ್ನು ಎಡೆಬಿಡದೇ ಕಾಡುತ್ತಿದೆ. ವಿದ್ಯಾರ್ಥಗಳ ಸುರಕ್ಷತೆಯ ವಿಚಾರಕ್ಕೆ ಪೋಷಕರು ಆತಂಕಗೊಂಡಿದ್ದಾರೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ ಎನ್ನುವುದು ಶಿಕ್ಷಣ ಇಲಾಖೆ ತಜ್ಞರು ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ವಿದ್ಯಾಗಮ ಯೋಜನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ
ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಶಿಕ್ಷಣದ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾವಾರು ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಿದ್ಯಾಗಮ ಯೋಜನೆಯನ್ನು ರೂಪಿಸಲಾಗಿದೆ. ಗ್ರಾಮಾಂತರ ಪ್ರದೇಶಗಳ ಶಾಲೆಯಲ್ಲಿ ವಿದ್ಯಾರ್ಥಿಗಳ ಅಂಕಿ-ಸಂಖ್ಯೆ ಮತ್ತು ದತ್ತಾಂಶದ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳನ್ನು ಪಟ್ಟಿ ಮಾಡಿಕೊಳ್ಳಲಾಗಿದೆ. ಅಂಥ ಗ್ರಾಮಗಳಿಗೆ ಶಿಕ್ಷಕರನ್ನೇ ಕಳುಹಿಸಲು ತೀರ್ಮಾನಿಸಲಾಗಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತರಗತಿಗಳನ್ನು ನಡೆಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಿರಂತರ ಕಲಿಕೆಗೆ ಒತ್ತು ನೀಡುವುದಕ್ಕೆ ಯೋಜನೆ
ದೇಶಾದ್ಯಂತ ವಿದ್ಯಾಗಮ ಯೋಜನೆಯನ್ನು ಜಾರಿಗೊಳಿಸುವ ಮೂಲಕ ನಿರಂತರ ಕಲಿಕೆಗೆ ಒತ್ತು ನೀಡಬೇಕಿದೆ. ಇದರಿಂದ ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕ ಸೇರಿದಂತೆ ವಿದ್ಯಾರ್ಥಿಗಳ ಮೇಲೆ ನಡೆಸುವ ಅಪರಾಧಗಳಿಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವಾಗುತ್ತದೆ. 20ಕ್ಕಿಂತ ಕಡಿಮೆ ಸಂಖ್ಯೆಯನ್ನು ಹೊಂದಿರುವ ಪ್ರೌಢಶಾಲೆಗಳನ್ನು ಗುರುತಿಸಲಾಗಿದ್ದು, ಈ ವಿದ್ಯಾರ್ಥಿಗಳಿಗೆ ದೈಹಿಕ ತರಬೇತಿಯನ್ನು ನೀಡುವುದಕ್ಕೆ ತೀರ್ಮಾನಿಸಲಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಪ್ರೌಢಶಿಕ್ಷಣ ವಿದ್ಯಾರ್ಥಿಗಳಿಗೆ ದೂರದರ್ಶನದಲ್ಲಿ ತರಗತಿಗಳನ್ನು ನಡೆಸುವುದಕ್ಕೆ ಶಿಕ್ಷಣ ಇಲಾಖೆಯು ತೀರ್ಮಾನಿಸಿದೆ.
ಮೊಬೈಲ್ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕ್ರಮ
ಮೊಬೈಲ್ ಫೋನ್ ಉಳ್ಳವರಿಗೆ ಯಾವ ರೀತಿ ತರಬೇತಿ ನೀಡುವುದು ಮತ್ತು ಮೊಬೈಲ್ ಫೋನ್ ಹೊಂದಿಲ್ಲದ ವಿದ್ಯಾರ್ಥಿಗಳಿಗೆ ಯಾವ ರೀತಿ ಶಿಕ್ಷಣವನ್ನು ನೀಡಬೇಕು ಎನ್ನುವುದರ ಬಗ್ಗೆಯೂ ಯೋಜನೆ ರೂಪಿಸಿಕೊಳ್ಳಲಾಗಿದೆ. ಏಕೆಂದರೆ ಪೋಷಕರ ಬಳಿಯಿರುವ ಮೊಬೈಲ್ ಫೋನ್ ಗಳನ್ನು ಬೆಳಗ್ಗೆ 9 ಗಂಟೆಗೂ ಮೊದಲು ಮತ್ತು ಸಂಜೆ 6 ಗಂಟೆಯ ನಂತರ ಮಾತ್ರ ಮಕ್ಕಳು ಬಳಸುವುದಕ್ಕೆ ಸಿಗುತ್ತದೆ. ಕೆಲವು ಕಡೆಗಳಲ್ಲಿ ಬೆಳಗ್ಗೆ 9 ಗಂಟೆಗೂ ಮೊದಲೇ ಶಿಕ್ಷಕರು ವಾಯ್ಸ್ ಮೆಸೇಜ್ ಮತ್ತು ಟೆಕ್ಸ್ಟ್ ಮೆಸೇಜ್ ಕಳುಹಿಸುವುದು ಹಾಗೂ ಆ ದಿನದ ಅಸೈನ್ ಮೆಂಟ್ ಗಳನ್ನು ನೀಡುವಂತೆ ಸಲಹೆ ನೀಡಲಾಗಿದೆ.