ಕೇರಳಕ್ಕೆ ಮದುವೆ ಔತಣ ಕೂಟಕ್ಕೆ ತೆರಳಿದ್ದ ಕರ್ನಾಟಕದ ಬಸ್ ಪಲ್ಟಿ: ಆರು ಜನರ ಸಾವು, ಹಲವರ ಸ್ಥಿತಿ ಗಂಭೀರ
ಕಾಸರಗೋಡು, ಜನವರಿ 03: ಮದುವೆಯ ಔತಣ ಕೂಟಕ್ಕೆ ತೆರಳಿದ್ದ ಕರ್ನಾಟಕ ಮೂಲದ ಬಸ್, ನಿಯಂತ್ರಣ ತಪ್ಪಿ ಪಲ್ಟಿಯಾಗಿ ಆರು ಜನರು ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ರಾಜಪುರಂನ ಪನಾತೂರ್ ಪ್ರದೇಶದ ಬಳಿ ನಡೆದಿದೆ.
ಕೇರಳಕ್ಕೆ ಮದುವೆಯ ಔತಣ ಕೂಟಕ್ಕೆಂದು KA.19.AA.1539 ಬಸ್ನಲ್ಲಿ ಕರ್ನಾಟಕದಿಂದ 70 ಜನರು ತೆರಳಿದ್ದರು. ಆದರೆ ರಾಜಪುರಂನ ಪನಾತೂರ್ ಪ್ರದೇಶದ ಬಳಿ ಬಸ್ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಪಲ್ಟಿಯಾಗಿದೆ. ದುರ್ಘಟನೆಯಲ್ಲಿ ಆರು ಜನರು ಸಾವನ್ನಪ್ಪಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.
''ಬಸ್ಸಿನಲ್ಲಿ ಸುಮಾರು 70 ಜನರು ಇದ್ದರು. ಚಿಕಿತ್ಸೆ ಪಡೆಯುತ್ತಿರುವ 44 ಜನರಲ್ಲಿ 33 ಜನರು ಕಾನ್ಹಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತಂಕಲ್ ತಾಲೂಕು ಆಸ್ಪತ್ರೆಯಲ್ಲಿ 5 ಮಂದಿ ಮತ್ತು ಕನ್ಹಂಗಡ್ ಜಿಲ್ಲಾ ಆಸ್ಪತ್ರೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ'' ಎಂದು ಕಾಸರಗೋಡು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇನ್ನು ಈ ದುರ್ಘಟನೆಯಲ್ಲಿ ಐವರು ಕರ್ನಾಟಕ ಸ್ಥಳೀಯರು ಸಾವನ್ನಪ್ಪಿರುವ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.