ಗ್ರಾಮೀಣ ಭಾಗದಲ್ಲಿ ಗುಡ್ಡಗಾಡು ಅಲೆದರೂ ಸಿಗ್ತಿಲ್ಲ ಇಂಟರ್ನೆಟ್, ವಿದ್ಯಾರ್ಥಿಗಳ ಪಾಡು ಕೇಳಲೇಬೇಡಿ
ಸಚಿವರು ಬೆಂಗಳೂರಿನಲ್ಲಿ ಕುಳಿತುಕೊಂಡು ಆನ್ಲೈನ್ ತರಗತಿಗಳ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಗ್ರಾಮೀಣ ಕರ್ನಾಟಕದ ಸ್ಥಿತಿ ಹೇಗಿದೆ ಎನ್ನುವ ನೈಜತೆ ಅರಿಯಲು ಯಾರೂ ಮುಂದಾಗುತ್ತಿಲ್ಲ.
ಅಧಿಕಾರಿಗಳ ಟೇಬಲ್ ವರದಿಯನ್ನೇ ನಂಬಿಕೊಂಡು ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾರೆ, ಅದರಲ್ಲೂ ವಿಶೇಷವಾಗಿ ಮಲೆನಾಡು ಭಾಗದ ವಿದ್ಯಾರ್ಥಿಗಳ ಸಮಸ್ಯೆ ಹೇಳತೀರದಂತಾಗಿದೆ.
ಮಲೆನಾಡು ಭಾಗಗಳಲ್ಲಿ ತಾಲೂಕಿಗೆ ಮೂರ್ನಾಲ್ಕು ಟವರ್ಗಳು ಇದ್ದರೆ ಹೆಚ್ಚು, ಆದರೆ ಅಲ್ಲಿಯ ಜನ ಸಾಂಧ್ರತೆ ಕಡಿಮೆ ಇರುವುದರಿಂದ ಹಳ್ಳಿಗಳು ತಾಲೂಕು ಅಥವಾ ಪ್ರಮುಖ ಸ್ಥಳದಿಂದ ಸಾಕಷ್ಟು ದೂರದಲ್ಲಿರುತ್ತಾರೆ. ಹೀಗಾಗಿ ಆನ್ಲೈನ್ ಶಿಕ್ಷಣ ಎನ್ನುವುದು ಹಳ್ಳಿಯ ವಿದ್ಯಾರ್ಥಿಗಳಿಗೆ ಕನಸಾಗಿ ಪರಿಣಮಿಸಿದೆ.
ನಿತ್ಯ ವಿದ್ಯಾರ್ಥಿಗಳು ಎರಡು ಹಂತಗಳಲ್ಲಿ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಬೆಳಗ್ಗೆ 10 ರಿಂದ 1 ಹಾಗೂ 3 ರಿಂದ 5ರವರೆಗೆ ತರಗತಿ ನಡೆಯುತ್ತಿದೆ.ತೀರ್ಥಹಳ್ಳಿ, ಆಗುಂಬೆ, ಸಾಗರ, ಉತ್ತರ ಕನ್ನಡದ ಕೆಲವು ಭಾಗ, ಕೊಪ್ಪ, ಚಿಕ್ಕಮಗಳೂರಿನ ಬಹುತೇಕ ಕಡೆ ಇಂಟರ್ನೆಟ್ ಸಮಸ್ಯೆ ಎದುರಾಗಿದೆ.
ವಿದ್ಯಾರ್ಥಿಗಳು ತರಗತಿ ಆರಂಭವಾದಾಗಿನಿಂದ ಮುಗಿಯುವವರೆಗೂ ಇಂಟರ್ನೆಟ್ ಹುಡುಕುವುದೇ ಕೆಲಸವಾಗಿದೆ. ''ಮಳೆಗಾಲ ಛತ್ರಿ ಹಿಡಿದು ಮೊಬೈಲ್, ನೋಟ್ಬುಕ್ಗಳನ್ನು ಹಿಡಿದು ನೆಟ್ವರ್ಕ್ಗಾಗಿ ಅಲೆಯುವುದು ತುಂಬಾ ಕಷ್ಟ, ಮನೆಯಿಂದ ಕಿಲೋಮೀಟರ್ಗಟ್ಟಲೆ ನಡೆದುಕೊಂಡು ಹೋಗಬೇಕು, ಕಾಲೇಜು ಬೇಗ ಆರಂಭಿಸಿದರೆ ಒಳಿತು, ಇಲ್ಲವಾದರೆ ಕಾಲೇಜು ಆರಂಭವಾದ ಬಳಿಕವೇ ತರಗತಿಗಳನ್ನು ತೆಗೆದುಕೊಳ್ಳಬೇಕು, ದಿನವೂ ಒಂದೆರೆಡು ತರಗತಿಗಳನ್ನು ಕೂಡ ಅಟೆಂಡ್ ಮಾಡಲು ಆಗುತ್ತಿಲ್ಲ, ಒಳ್ಳೆಯ ಅಂಕವನ್ನು ನಿರೀಕ್ಷಿಸುವುದು ಹೇಗೆ'', ಎಂದು ಸಾಗರದ ಎಲ್ಬಿ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿ ಚಂದನಾ ಹೇಳಿದ್ದಾರೆ.
ವಿದ್ಯುತ್ ಸಂಪರ್ಕದ ಸಮಸ್ಯೆ
ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕದ್ದೇ ವರ್ಷವಿಡೀ ಸಮಸ್ಯೆಯಾಗಿದೆ, ಅದರಲ್ಲೂ ಮಳೆಗಾಲದಲ್ಲಿ ವಿದ್ಯುತ್ ಇರುವುದೇ ದೊಡ್ಡ ಸಾಧನೆ, ಗ್ರಾಮೀಣ ಪ್ರದೇಶದ ಬಹುತೇಕ ಮನೆಗಳಲ್ಲಿ ಯುಪಿಎಸ್ ರೀತಿಯ ಸೌಲಭ್ಯ ಹಾಕಿಸಿಕೊಳ್ಳಲು ಸವಲತ್ತು ಇರುವುದಿಲ್ಲ. ಹೀಗಾಗಿ ಆನ್ಲೈನ್ ಶಿಕ್ಷಣಕ್ಕೆ ಬೇಕಿರುವ ಗ್ಯಾಜೆಟ್ಗಳನ್ನು ಚಾರ್ಜ್ ಮಾಡಿಕೊಳ್ಳುವುದು ದುಸ್ತರವಾಗುತ್ತಿದೆ.
ಅಂತರ್ಜಾಲ ಸಂಪರ್ಕದ ಸಮಸ್ಯೆ
ಮಲೆನಾಡು ಪ್ರದೇಶಗಳಲ್ಲಿ ಅಂತರ್ಜಾಲ ಬೇಕೆಂದರೆ ಎಷ್ಟೋ ಬಾರಿ ಮನೆಯ ಸುತ್ತಲಿನ ಬೆಟ್ಟ ಗುಡ್ಡಗಳನ್ನು ಹತ್ತುವ ಅನಿವಾರ್ಯತೆ ಇದೆ, ಚಳಿಗಾಲ ಅಥವಾ ಬೇಸಿಗೆಯಲ್ಲಿ ಇದು ಕೊಂಚ ಮಟ್ಟಿಗೆ ನೆರವಾಗಬಹುದು ಆದರೆ ಮಳೆಗಾಲದಲ್ಲಿ ಗುಡ್ಡ ಬೆಟ್ಟಗಳಿಗೆ ಹೋಗುವುದು ಅಸಾಧ್ಯವಾಗಿರುತ್ತದೆ.
ಒಂದೊಮ್ಮೆ ಸಾಹಸ ಮಾಡಿ ಗುಡ್ಡ ಹತ್ತಿದರೂ 2ಜಿಗಿಂತ ಹೆಚ್ಚು ಫಾಸ್ಟ್ ಇರುವ ನೆಟ್ವರ್ಕ್ ಸಿಗಲು ಸಾಧ್ಯವಿಲ್ಲ, ಒಂದೊಂದು ತರಗತಿಗಳ ನಡುವೆಯೂ ನೂರಾರು ಬಾರಿ ಅಡಚಣೆ ಉಂಟಾಗುತ್ತಿದೆ.
ಕರೆಂಟ್ ಇಲ್ಲ ಅಂದರೆ ಇಂಟರ್ನೆಟ್ ಕೂಡಾ ಕಟ್
ಇನ್ನೊಂದೆಡೆ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲವೆಂದಾದರೆ ಅಂತರ್ಜಾಲ ಸಂಪರ್ಕವೂ ಸ್ಥಗಿತವಾಗುತ್ತದೆ. ಆದಾಯವಿರುವುದಿಲ್ಲ ಎನ್ನುವ ಕಾರಣಕ್ಕೆ ಗ್ರಾಮಿಣ ಪ್ರದೇಶಗಳ ಟವರ್ ನಿರ್ವಾಹಕರು ಬ್ಯಾಟರಿ ಅಥವಾ ಜನರೇಟರ್ ಮೂಲಕ ಟವರ್ನ್ನು ನಡೆಸುವುದಿಲ್ಲ ವಿದ್ಯುತ್ ಇದ್ದರೆ ಮಾತ್ರ ಟವರ್ ಚಾಲ್ತಿಯಲ್ಲಿರುತ್ತದೆ. ಇದರಿಂದ ವಿದ್ಯುತ್ ಇಲ್ಲದಿರುವಾಗ ವಿದ್ಯಾರ್ಥಿಗಳಿಗೆ ಅಂತರ್ಜಾಲವೇ ಇರುವುದಿಲ್ಲ ಹೀಗಾಗಿ ಆನ್ಲೈನ್ ತರಗತಿ ತಪ್ಪಿಹೋಗುತ್ತವೆ.
Recommended Video
ಬ್ರಾಡ್ಬ್ಯಾಂಡ್ ಇದ್ದರೂ ಏನೂ ಪ್ರಯೋಜನವಿಲ್ಲ
ಇನ್ನು ಬ್ರಾಡ್ಬ್ಯಾಂಡ್ ಸಂಪರ್ಕಕ್ಕೂ ಕೂಡ ವಿದ್ಯುತ್ ಸಂಪರ್ಕ ಅತ್ಯಗತ್ಯ ಇಲ್ಲದಿದ್ರೆ ಕೆಲಸ ಮಾಡುವುದಿಲ್ಲ. ಹೀಗಾಗಿ ಗ್ರಾಮೀಣ ಹಾಗೂ ಮಲೆನಾಡು ಪ್ರದೇಶದಲ್ಲಿನ ಲಕ್ಷಾಂತರ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳ ದೃಷ್ಟಿಯಿಂದ ಈ ಕುರಿತು ಪರ್ಯಾಯ ವ್ಯವಸ್ಥೆ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕಿದೆ.