ಆಟೋ, ಟ್ಯಾಕ್ಸಿ ಚಾಲಕರು 5 ಸಾವಿರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮೇ 22 : ಲಾಕ್ ಡೌನ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕರ್ನಾಟಕ ಸರ್ಕಾರ 5 ಸಾವಿರ ರೂ. ಪರಿಹಾರ ಘೋಷಣೆ ಮಾಡಿತ್ತು. ಈಗ ಪರಿಹಾರ ಧನ ಪಡೆಯಲು ಅರ್ಜಿ ಸಲ್ಲಿಸಲು ಲಿಂಕ್ ಓಪನ್ ಮಾಡಲಾಗಿದೆ.
Recommended Video
ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಪ್ರಸ್ತುತ 4ನೇ ಹಂತದ ಲಾಕ್ ಡೌನ್ ದೇಶಾದ್ಯಂತ ಜಾರಿಯಲ್ಲಿದೆ. ಲಾಕ್ ಡೌನ್ ಪರಿಣಾಮ ಆಟೋ ಮತ್ತು ಟ್ಯಾಕ್ಸಿ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದ್ದು, ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
5 ಸಾವಿರ ಪರಿಹಾರ ಪಡೆಯಲು ಆಟೋ, ಟ್ಯಾಕ್ಸಿ ಚಾಲಕರಿಗೆ ಅರ್ಹತೆಗಳು
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದರು. ಆದರೆ, ಪರಿಹಾರಕ್ಕಾಗಿ ಅರ್ಜಿ ಸಲ್ಲಿಕೆ ಮಾಡಲು ಲಿಂಕ್ ನೀಡಿರಲಿಲ್ಲ. ಶುಕ್ರವಾರ ಲಿಂಕ್ ನೀಡಲಾಗಿದ್ದು, ಚಾಲಕರು ಅರ್ಜಿ ಸಲ್ಲಿಸಬಹುದು.
5 ಸಾವಿರ ರೂ. ಪಡೆಯಲು ಆಟೋ ಮತ್ತು ಟ್ಯಾಕ್ಸಿ ಚಾಲಕರ ಗಮನಕ್ಕೆ
ಸೇವಾಸಿಂಧು ಪೋರ್ಟಲ್ ಓಪನ್ ಮಾಡಿದಾಗ 'ಆಟೋರಿಕ್ಷಾ ಚಾಲಕರು/ಟಾಕ್ಸಿ ಚಾಲಕರಿಗೆ ಕೋವಿಡ್-19ರ ಅವಧಿಯಲ್ಲಿ ಪರಿಹಾರ ವಿತರಿಸುವುದು' ಎಂಬ ಬರಹ ಕಾಣುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದಾಗ ಮುಂದಿನ ಪುಟಕ್ಕೆ ಹೋಗಲಿದ್ದು, ಅಲ್ಲಿ ಅರ್ಜಿ ಹಾಕಬಹುದು.
5 ಸಾವಿರ ಪಡೆಯಲು ಆಟೋ, ಟ್ಯಾಕ್ಸಿ ಚಾಲಕರು ಅರ್ಜಿ ಹಾಕುವುದು ಹೇಗೆ?
ಯಾವ ಮಾಹಿತಿ ನೀಡಬೇಕು
https://sevasindhu.karnataka.gov.in ವೆಬ್ಸೈಟ್ನಲ್ಲಿ 'ಆಟೋರಿಕ್ಷಾ ಚಾಲಕರು/ಟಾಕ್ಸಿ ಚಾಲಕರಿಗೆ ಕೋವಿಡ್-19ರ ಅವಧಿಯಲ್ಲಿ ಪರಿಹಾರ ವಿತರಿಸುವುದು' ಎಂಬ ಬರಹದ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ಸಲ್ಲಿಸುವ ಪುಟ ತೆರೆಯುತ್ತದೆ. ದಯವಿಟ್ಟು ಅರ್ಜಿಯನ್ನು ಆಂಗ್ಲ ಭಾಷೆ ಯಲ್ಲಿ ನೋಂದಾಯಿಸಿ ಎಂದು ಮನವಿ ಮಾಡಲಾಗಿದೆ. ಒಟ್ಟು 4 ಹಂತದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
ಪರಿಹಾರ ಪಡೆಯಲು ಮೊದಲ ಹಂತ
ಮೊದಲ ಹಂತದಲ್ಲಿ ಅರ್ಜಿದಾರರ ವಿಳಾಸ ನಮೂದಿಸಬೇಕು. ಆಧಾರ್ ಕಾರ್ಡ್ನಲ್ಲಿ ಇರುವಂತೆ ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ವಿಳಾಸ, ಜಿಲ್ಲೆ, ತಾಲೂಕು, ವರ್ಗವನ್ನು ಭರ್ತಿ ಮಾಡಬೇಕು.
2ನೇ ಹಂತದಲ್ಲಿ ಏನಿದೆ?
ಚಾಲಕರು 2ನೇ ಹಂತದಲ್ಲಿ ಚಾಲನಾ ಅನುಜ್ಞಾ ಪತ್ರ (ಡಿಎಲ್) ವಿವರಗಳನ್ನು ಭರ್ತಿ ಮಾಡಬೇಕು. ಡಿಎಲ್ ಸಂಖ್ಯೆ, ಡಿಎಲ್ ಸಿಂಧುತ್ವ ದಿನಾಂಕ, ಡಿಎಲ್ನಲ್ಲಿ ಇರುವಂತೆ ನಿಮ್ಮ ಹೆಸರು, ಬ್ಯಾಡ್ಜ್ ಸಂಖ್ಯೆ, ವಾಹನದ ವರ್ಗದ ವಿವರ ತುಂಬಬೇಕು.
ವಾಹನದ ವಿವರ ತುಂಬಿ
3ನೇ ಹಂತದಲ್ಲಿ ಚಾಲಕರು ಲಾಕ್ಡೌನ್ಗಿಂತ ಮುನ್ನ ನೀವು ಚಲಾಯಿಸುತ್ತಿದ್ದ ವಾಹನದ ವಿವರಗಳನ್ನು ತುಂಬಬೇಕು. ವಾಹನದ ಸಂಖ್ಯೆ, ಚಾಸಿಸ್ ಸಂಖ್ಯೆ (ಕೊನೆಯ 5 ಅಂಕಿ), ಆರ್ಸಿ ಪುಸ್ತಕದಲ್ಲಿ ಇರುವಂತೆ ಹೆಸರು, ಸಾರಿಗೆ ವಾಹನದ ವರ್ಗ, ಆಸನ ಸಂಖ್ಯೆ, ಅರ್ಹತಾ ಪತ್ರದ ಸಿಂಧುತ್ವ ದಿನಾಂಕ ಭರ್ತಿ ಮಾಡಬೇಕು.
4ನೇ ಹಂತದಲ್ಲಿ ಘೋಷಣೆ
ಚಾಲಕರು 4ನೇ ಹಂತದಲ್ಲಿ ಆಟೋರಿಕ್ಷಾ ಕ್ಯಾಬ್ / ಟ್ಯಾಕ್ಸಿ ಚಾಲಕನಾದ ನಾನು ಲಾಕ್ಡೌನ್ ಸಮಯದಲ್ಲಿ ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯ ಕಳೆದುಕೊಂಡಿರುವುದು ಸತ್ಯವಾಗಿದೆ ಮತ್ತು ಈ ಸಮಯದಲ್ಲಿ ನನ್ನ ಆರ್ಥಿಕ ಸ್ಥಿತಿಯು ಉತ್ತಮವಾಗಿರುವುದಿಲ್ಲ ಎಂದು ದೃಢೀಕರಿಸುತ್ತೇನೆ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು.