ವಿಜಯ ಸಂಕೇಶ್ವರ್ ಅಥವಾ ರಾಜೀವ್ ಚಂದ್ರಶೇಖರ್ ಲೆಕ್ಕಾಚಾರದಲ್ಲಿ ಬಿಜೆಪಿ?
ರಾಜ್ಯಸಭಾ ಚುನಾವಣೆಗೆ ಇನ್ನೇನು ಬಿಜೆಪಿಯಿಂದ ಅಭ್ಯರ್ಥಿ ಹೆಸರು ಘೋಷಣೆ ಮಾಡಬೇಕಿದೆ. ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿಗೆ ಇರುವ ಸಂಖ್ಯಾಬಲದ ಮೇಲೆ ಹೇಳುವುದಾದರೆ, ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿ, ರಾಜ್ಯಸಭೆಗೆ ಕಳಿಸುವ ಸಾಧ್ಯತೆ ಮಾತ್ರ ಇದೆ. ಆದರೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಒಬ್ಬರು ರಾಜೀವ್ ಚಂದ್ರಶೇಖರ್. ಮತ್ತೊಬ್ಬರು ವಿಜಯ ಸಂಕೇಶ್ವರ್. ಅಭ್ಯರ್ಥಿಯನ್ನು ಅಂತಿಮಗೊಳಿಸುವುದಕ್ಕೆ ಮುಂಚೆ ಹಲವು ಅಂಶವನ್ನು ಪರಿಗಣಿಸಬೇಕಿದೆ. ಮುಖ್ಯವಾಗಿ ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡೇ ಅಭ್ಯರ್ಥಿಯ ಆಯ್ಕೆ ಮಾಡಬೇಕಾಗುತ್ತದೆ ಬಿಜೆಪಿ.
ರಾಜ್ಯಸಭೆ ಚುನಾವಣೆ : ಬಿಜೆಪಿ ಅಭ್ಯರ್ಥಿಯಾಗಲು ಪೈಪೋಟಿ!
ಕಾಂಗ್ರೆಸ್ ಈಗಾಗಲೇ ಕನ್ನಡ, ಕನ್ನಡ ಧ್ವಜ ಹೀಗೆ ಭಾಷೆ- ನೆಲದಂಥ ವಿಷಯದ ಮೇಲೆ ಪ್ರಚಾರ ಆರಂಭಿಸಿದೆ. ಆ ಕಾರಣಕ್ಕೆ ರಾಜ್ಯದವರೇ ಆದ ವಿಜಯ ಸಂಕೇಶ್ವರ್ ಅವರನ್ನು ಆಯ್ಕೆ ಮಾಡಲಾಗುತ್ತದಾ ಅಥವಾ ರಾಜೀವ್ ಚಂದ್ರಶೇಖರ್ ಅವರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಲಾಗುತ್ತದಾ ಎಂಬ ಬಗ್ಗೆ ಪ್ರಶ್ನೆ ಉದ್ಭವಿಸಿದೆ.
ಬಿಜೆಪಿಯ ರಾಜ್ಯ ನಾಯಕರ ಪೈಕಿ ಹಲವರಿಗೆ ವಿಜಯ ಸಂಕೇಶ್ವರ್ ಸ್ಪರ್ಧೆ ಮಾಡಲಿ ಎಂಬ ಇರಾದೆ ಇದೆ. ಜತೆಗೆ ಅವರ ಗೆಲುವಿನ ಬಗ್ಗೆ ಒಲವಿದೆ. ಸಂಕೇಶ್ವರ್ ಆಯ್ಕೆ ಆದರೆ ಅದರಿಂದ ಬಿಜೆಪಿಗೆ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಇದರ ಹಿಂದಿದೆ.
ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಲಿಂಗಾಯತ ಸಮಾಜದ ವಿಜಯ ಸಂಕೇಶ್ವರ್ ಹಳಬರು, ಹಿರಿಯರು
ಇನ್ನು ವಿಜಯ ಸಂಕೇಶ್ವರ್ ಲಿಂಗಾಯತ ಸಮಾಜದವರು. ಬಿಜೆಪಿಯು ವೋಟ್ ಬ್ಯಾಂಕ್ ಎಂದು ಹೆಚ್ಚು ಅವಲಂಬಿತ ಆಗಿರುವ ಜಾತಿ ಅದು. ಮತ್ತು ಬಿಜೆಪಿಯಲ್ಲಿ ವಿಜಯ ಸಂಕೇಶ್ವರ ಹಳಬರು ಹಾಗೂ ಹಿರಿಯರು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಸಂಕೇಶ್ವರ್ ಸಂಸದರಾಗಿದ್ದರು. ಜತೆಗೆ ಹುಬ್ಬಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಪ್ರಬಲವಾದ ಹಿಡಿತ ಹೊಂದಿದ್ದಾರೆ.
ರಾಜೀವ್ ಚಂದ್ರಶೇಖರ್ ಹೊರಗಿನವರು ಎನ್ನಲು ಸಾಧ್ಯವಿಲ್ಲ
ಆದರೂ ವಿವಿಧ ಅಂಶಗಳನ್ನು ಪರಿಗಣಿಸಿ, ಅಂತಿಮ ಆಯ್ಕೆ ಮಾಡುವುದು ದೆಹಲಿಯಿಂದ ಬರುವ ಫರ್ಮಾನು. ಇನ್ನು ಬಿಜೆಪಿಯೊಳಗಿರುವ ಹಲವರು ರಾಜೀವ್ ಚಂದ್ರಶೇಖರ್ ಅವರನ್ನು ರಾಜ್ಯಸಭೆಗೆ ಆರಿಸಿ ಕಳಿಸುವುದು ಒಳ್ಳೆಯದು ಎಂಬ ಅಭಿಪ್ರಾಯ ಹೊಂದಿದ್ದಾರೆ. ಬಿಜೆಪಿ ಮೂಲಗಳೇ ಹೇಳುವಂತೆ ರಾಜೀವ್ ಚಂದ್ರಶೇಖರ್ ಅವರನ್ನು ಹೊರಗಿನವರು ಎನ್ನಲು ಸಾಧ್ಯವಿಲ್ಲ.
ಕರ್ನಾಟಕಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಿರುವ ರಾಜೀವ್ ಚಂದ್ರಶೇಖರ್
ರಾಜೀವ್ ಚಂದ್ರಶೇಖರ್ ಕರ್ನಾಟಕಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ವಿಜಯ ಸಂಕೇಶ್ವರ್ ರೀತಿಯಲ್ಲೇ ಕನ್ನಡದ ಸುದ್ದಿ ವಾಹಿನಿ, ದಿನ ಪತ್ರಿಕೆಯ ಮಾಲೀಕತ್ವ ಹೊಂದಿದ್ದಾರೆ. ಆದ್ದರಿಂದ ರಾಜೀವ್ ಚಂದ್ರಶೇಖರ್ ಕೂಡ ಅತ್ಯುತ್ತಮ ಅಭ್ಯರ್ಥಿ ಎಂಬ ಮಾತು ಬಿಜೆಪಿ ಪಾಳಯದಲ್ಲಿದೆ.
ಕೇರಳದಲ್ಲೂ ಅನುಕೂಲ ಪಡೆಯಬಹುದು ಎಂಬುದು ಲೆಕ್ಕಾಚಾರ
ಮೂಲಗಳ ಪ್ರಕಾರ, ರಾಜೀವ್ ಚಂದ್ರಶೇಖರ್ ಅವರನ್ನು ಕರ್ನಾಟಕ ವಿಧಾನಸಭೆ ಚುನಾವಣೆಗಷ್ಟೇ ಸೀಮಿತವಾಗಿ ನೋಡಲು ಸಾಧ್ಯವಿಲ್ಲ. ಅವರಿಂದ ಕೇರಳ ರಾಜ್ಯದಲ್ಲೂ ಬಿಜೆಪಿಗೆ ಅನುಕೂಲ ಆಗಲಿದೆ. ಜತೆಗೆ ಕೇರಳದಲ್ಲಿ ಕೂಡ ಉತ್ತಮ ಸುದ್ದಿ ವಾಹಿನಿಯೊಂದರ ಮಾಲೀಕತ್ವ ಹೊಂದಿದ್ದಾರೆ.
ಬಿಜೆಪಿ ತೊರೆದು, ಹೊಸ ಪಕ್ಷ ಕಟ್ಟಿದ್ದರು ಎಂಬ ಆಕ್ಷೇಪ
ವಿಜಯ ಸಂಕೇಶ್ವರ ಅವರು ಒಮ್ಮೆ ಬಿಜೆಪಿಯನ್ನು ತೊರೆದುಹೋಗಿದ್ದರು ಮತ್ತು ಸ್ವಂತ ಪಕ್ಷ ಕಟ್ಟಿದ್ದರು ಎಂಬ ಕಾರಣಕ್ಕೆ ಬಿಜೆಪಿಯೊಳಗಿನ ಕೆಲವು ನಾಯಕರು ಅವರ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂಬ ಬಗ್ಗೆ ಮೂಲಗಳು ಮಾಹಿತಿ ನೀಡಿವೆ. ಇವೆಲ್ಲ ಏನೇ ಇದ್ದರೂ ಅಂತಿಮ ತೀರ್ಮಾನ ತೆಗೆದುಕೊಳ್ಳುವವರು ಪ್ರಧಾನಿ ನರೇಂದ್ರ ಮೋದಿ.