ಸತತ ಎರಡನೇ ವರ್ಷವೂ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂ. 1
ಬೆಂಗಳೂರು, ಆಗಸ್ಟ್ 24: ಉದ್ಯಮಗಳಿಂದ ಬಂಡವಾಳ ಆಕರ್ಷಷಿಸುವಲ್ಲಿ ಕರ್ನಾಟಕ ರಾಜ್ಯ ಸತತ ಎರಡನೇ ವರ್ಷವೂ ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಬೃಹತ್ ಕೈಗಾರಿಕೆ ಸಚಿವ ದೇಶಪಾಂಡೆ ಹೇಳಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ರಾಜ್ಯ 2013ರಲ್ಲಿ 11ನೆ ಸ್ಥಾನದಲ್ಲಿತ್ತು. 2014 ಮತ್ತು 2015ರಲ್ಲಿ ಕ್ರಮವಾಗಿ 5 ಮತ್ತು 4ನೇ ಸ್ಥಾನಕ್ಕೆ ಏರಿಕೆಯಾಗಿತ್ತು. 2016ರಲ್ಲಿ ಮೊದಲಬಾರಿಗೆ ರೂ. 1.54 ಲಕ್ಷ ಕೋಟಿ ಬಂಡವಾಳ ಆಕರ್ಷಣೆಯೊಂದಿಗೆ ಮೊದಲ ಸ್ಥಾನ ಗಿಟ್ಟಿಸಿಕೊಂಡಿತು," ಎಂದು ಹೇಳಿದರು.
ಕರ್ನಾಟಕ ದೇಶಕ್ಕೆ ನಂಬರ್ ವನ್
"ಇದೀಗ ಸತತ ಎರಡನೇ ವರ್ಷವೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. 2017ರ ಜೂನ್ ಅಂತ್ಯಕ್ಕೆ ರಾಜ್ಯದಲ್ಲಿ ರೂ. 1.40 ಲಕ್ಷ ಕೋಟಿಯಷ್ಟು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಪ್ರೋತ್ಸಾಹ ಇಲಾಖೆ ಪ್ರಕಾರ ಜೂನ್ವರೆಗೆ ಗುಜರಾತ್ ರೂ. 44 ಸಾವಿರ ಕೋಟಿ, ಮಹಾರಾಷ್ಟ್ರ ರೂ. 15 ಸಾವಿರ ಕೋಟಿ, ತೆಲಂಗಾಣ ರೂ. 11 ಸಾವಿರ ಕೋಟಿ ಹಾಗೂ ಆಂಧ್ರಪ್ರದೇಶ ರೂ. 10 ಸಾವಿರ ಕೋಟಿ ಉದ್ದೇಶಿತ ಬಂಡವಾಳ ಹೂಡಿಕೆ ಪಡೆದಿವೆ ಎಂದು ಅವರು ಹೇಳಿದ್ದಾರೆ.
'ಇನ್ವೆಸ್ಟ್ ಕರ್ನಾಟಕ'ದಲ್ಲಿ ಭರ್ಜರಿ ಕೊಡುಗೆ
ಕಳೆದ ಬಾರಿ ನಡೆಸಿದ 'ಇನ್ವೆಸ್ಟ್ ಕರ್ನಾಟಕ'ದಲ್ಲಿ ಮಾಡಿಕೊಂಡ ಒಪ್ಪಂದಗಳ ಪ್ರಕಾರ ರೂ. 3.34 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ನಿರೀಕ್ಷೆ ಇತ್ತು. ಇದರಲ್ಲಿ ರೂ. 4,500 ಕೋಟಿ ಮೊತ್ತದ 62 ಯೋಜನೆಗಳು ಈಗಾಗಲೇ ಆರಂಭವಾಗಿವೆ. ರೂ. 1.69 ಕೋಟಿ ಹೂಡಿಕೆಯ 942 ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. 72 ಕಂಪನಿಗಳು ಮಾತ್ರ ಹೂಡಿಕೆಯಿಂದ ಹಿಂದೆ ಸರಿದಿದ್ದು, ಈ ಕಂಪನಿಗಳು 16,000 ಕೋಟಿ ಬಂಟವಾಳ ಹೂಡುವುದಾಗಿ ಹೇಳಿದ್ದವು ಎಂದು ದೇಶಪಾಂಡೆ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ನಲ್ಲಿ ಹೂಡಿಕೆ ಸಮಾವೇಶ
ಇನ್ನು ಇದೇ ಅಕ್ಟೋಬರ್ 23 ಮತ್ತು 24ರಂದು 'ರಾಷ್ಟ್ರೀಯ ಮಾರಾಟಗಾರರ ಮತ್ತು ಬಂಡವಾಳ ಹೂಡಿಕೆದಾರರ ಸಮಾವೇಶ'ವನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ದೇಶಪಾಂಡೆ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಬೇರೆ ರಾಜ್ಯಗಳಲ್ಲಿ ರೋಡ್ ಶೋ ನಡೆಸುವ ತೀರ್ಮಾನವನ್ನೂ ಸರಕಾರ ತೆಗೆದುಕೊಂಡಿದೆ.
ವಿದ್ಯುತ್ ಚಾಲಿತ ವಾಹನಗಳ ರಾಜಧಾನಿ ಬೆಂಗಳೂರು
ಇನ್ನು ಬೆಂಗಳೂರನ್ನು ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯಾಗಿ ಪರಿವರ್ತಿಸಲು ಸರ್ಕಾರ ತೀರ್ಮಾನಿಸಿದೆ ಎಂದೂ ದೇಶಪಾಂಡೆ ಹೇಳಿದ್ದಾರೆ. ಇದಕ್ಕಾಗಿ ವಿಶೇಷ ನೀತಿಯನ್ನು ಸರಕಾರ ಹೊರತರಲಿದೆ ಎಂದು ದೇಶಪಾಂಡೆ ಹೇಳಿದ್ದಾರೆ.
ವಿದ್ಯುತ್ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿ
'ವಿದ್ಯುತ್ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿ'ಯ ಅಡಿಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಪ್ರೋತ್ಸಾಹ, ವಾಹನ ಖರೀದಿದಾರರಿಗೆ ವಿವಿಧ ತೆರಿಗೆ ವಿನಾಯಿತಿ, ವಿದ್ಯುತ್ ವಾಹನಗಳ ಉತ್ಪಾದನೆಗೆ ಮುಂದಾಗುವ ಉದ್ಯಮಗಳಿಗೆ ವಿಶೇಷ ರಿಯಾಯಿತಿ ನೀಡುವ ಪ್ರಸ್ತಾಪ ನೀತಿಯಲ್ಲಿ ಇರಲಿದೆ.