ಊಹೆಗೂ ಮೀರಿ ಬಹುಮತ ಸಾಬೀತುಪಡಿಸುತ್ತೇವೆ: ಶ್ರೀರಾಮುಲು
ಬೆಂಗಳೂರು, ಮೇ 17: "ಊಹೆಗೂ ಮೀರಿ ನಾವು ಬಹುಮತ ಸಾಬೀತುಪಡಿಸುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಬಿಜೆಪಿಯ ಮೊಳಕಾಲ್ಮೂರು ಶಾಸಕ ಬಿ ಶ್ರೀರಾಮುಲು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, "ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲೇ ಸಾಕಷ್ಟು ಜನ ಅಸಾಮಾಧಾನ ಹೊಂದಿರುವವರಿದ್ದಾರೆ. ಅವರೆಲ್ಲ ಬಿಜೆಪಿಗೆ ಸೇರಲು ಸಿದ್ದರಾಗಿದ್ದಾರೆ" ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಯಡಿಯೂರಪ್ಪ ಸಂಪುಟ ಸೇರಲು ಹಾತೊರೆಯುತ್ತಿರುವ ಶಾಸಕರ ಪಟ್ಟಿ
ಅಷ್ಟೇ ಅಲ್ಲ, ಪಕ್ಷೇತರ ಶಾಸಕರೂ ಬಿಜೆಪಿ ಜೊತೆಯಲ್ಲಿದ್ದಾರೆ ಎಂದು ಸಹ ಶ್ರೀರಾಮುಲು ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದಲೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀರಾಮುಲು ಬಿರುಸಿನ ಪೈಪೋಟಿ ನೀಡಿ ಸೋತಿದ್ದರು.
ಕರ್ನಾಟಕ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿಸದ್ದು, ಇನ್ನು 15 ದಿನಗಳ ಒಳಗೆ ಅವರು ಬಹುಮತ ಸಾಬೀತುಪಡಿಸಬೇಕಿದೆ.
ಬಹುವರ್ಷಗಳ ನಂತರ ಒಂದೇ ಪಕ್ಷ ಕೇಂದ್ರ ಮತ್ತು ಕರ್ನಾಟಕದಲ್ಲಿ
ಮೇ 15 ರಂದು ಹೊರಬಿದ್ದ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ 104 ಸ್ಥಾನ ಗೆದ್ದು ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಹೊರಹೊಮ್ಮಿತ್ತು. ಆದರೆ ಬಹುಮತ ಪಡೆದಿರಲಿಲ್ಲ. ಇತ್ತ 78 ಸ್ಥಾನ ಗೆದ್ದ ಕಾಂಗ್ರೆಸ್, 38 ಸ್ಥಾನ ಗೆದ್ದ ಜೆಡಿಎಸ್ ಗೆ ತನ್ನ ಬೆಂಬಲ ನೀಡಿ ಸರ್ಕಾರ ರಚಿಸಲು ಮನವಿ ಮಾಡಿತ್ತು. ಆದರೆ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದರಿಂದ ಇಂದು ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದರು.