ರಾಜ್ಯದಲ್ಲಿ ಮುಂದುವರಿದ ಹಂದಿಜ್ವರ ಸಾವಿನ ಸರಣಿ
ಬೆಂಗಳೂರು. ಫೆ. 25 : ರಾಜ್ಯದಲ್ಲಿ ಎಚ್ 1 ಎನ್ 1 ಗೆ ಆರ್ಭಟ ಮುಂದುವರಿದಿದ್ದು ಸಾವಿನ ಸಂಖ್ಯೆ 41ಕ್ಕೆ ಏರಿದೆ. ಸೋಮವಾರ ಬೆಂಗಳೂರಿನಲ್ಲಿ ಮೂವರು ಮತ್ತು ಮಂಗಳವಾರ ಚಿತ್ರದುರ್ಗದಲ್ಲಿ ಒಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಒಂದೇ ದಿನ ಮೃತಪಟ್ಟಿದ್ದಾರೆ. ಚಿತ್ರದುರ್ಗದ ಅಸರ್ ಮೊಹಲ್ಲಾದ 55 ಚರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ.[ಬೆಂಗಳೂರು: ಹಂದಿ ಜ್ವರ ಔಷಧ ಲಭ್ಯವಿರುವ ಆಸ್ಪತ್ರೆ ಪಟ್ಟಿ]
ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಸೋಮವಾರ 699 ಜನರಿಗೆ ಇದ್ದ ಸೊಂಕು ಮಂಗಳವಾರ 763 ಜನರಲ್ಲಿ ಕಾಣಿಸಿಕೊಂಡಿದೆ. ಹಂದಿಜ್ವರಕ್ಕೆ ಸಂಬಂಧಿಸಿ ಒಟ್ಟು 1.935 ಜನರ ಗಂಟಲ ದ್ರಾವಣ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ತಿಳಿಸಿದೆ.
ಸಾಂಕ್ರಾಮಿಕ ರೋಗಗಳ ಪತ್ತೆಗೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಬೆಳಗಾವಿ ವ್ಯಾಪ್ತಿಯಲ್ಲಿ ಹೊಸದಾಗಿ 5 ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪಿಸಲು ನಿರ್ಧಾರ ಮಾಡಲಾಗಿದೆ. ಬೆಂಗಳೂರಿನ ನಿಮಾನ್ಸ್ ಮತ್ತು ಮಣಿಪಾಲ್ ಆಸ್ಪತ್ರೆಯಲ್ಲಿ ಉಚಿತ ಪರೀಕ್ಷೆ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಮಾಹಿತಿ ನೀಡಿದ್ದಾರೆ.[ಎಚ್1ಎನ್ 1 ಲಕ್ಷಣಗಳೇನು? ಮುನ್ನೆಚ್ಚರಿಕೆ ವಿಧಾನಗಳೆನು?]
ಜಮ್ಮು ಮತ್ತು ಕಾಶ್ಮೀರಕ್ಕೂ ಮಹಾಮಾರಿ ವ್ಯಾಪಿಸಿದ್ದು ಸೋಂಕಿಗೆ 10 ಜನ ಬಲಿಯಾಗಿದ್ದಾರೆ. ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಂದಿಜ್ವರ ಕಾಣಿಸಿಕೊಂಡಿದ್ದು ನಿಯಂತ್ರಣ ಸಾಧ್ಯವಾಗುತ್ತಿಲ್ಲ.