ಮಳೆಗಾಲ ಆರಂಭವಾಗಿ ತಿಂಗಳು, ತುಂಬದ ನದಿಗಳು
ಬೆಂಗಳೂರು, ಜುಲೈ 03 : ಕರ್ನಾಟಕದಲ್ಲಿ ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆಯುತ್ತ ಬಂದರೂ, ದಕ್ಷಿಣ ಕರ್ನಾಟಕದ 11 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿರುವುದು ಭಾರೀ ಕಳವಳಕ್ಕೆ ಕಾರಣವಾಗಿದೆ.
ಇಷ್ಟೊತ್ತಿಗಾಗಲೆ ಮುಂಗಾರು ಚುರುಕುಗೊಂಡು ಅಣೆಕಟ್ಟುಗಳು, ಕೆರೆಕಟ್ಟೆಗಳು, ಹಳ್ಳತೊರೆಗಳು ತುಂಬಿ ಹರಿಯಬೇಕಾಗಿತ್ತು. ಆದರೆ, ಮಳೆರಾಯ ಆರಂಭದಲ್ಲಿಯೇ ಕೈಕೊಟ್ಟಿರುವುದರಿಂದ ಆಯಕಟ್ಟಿನ ಪ್ರದೇಶಗಳಲ್ಲಿಯೇ ಕಡಿಮೆ ಮಳೆಯಾಗಿದೆ.
ಬೆಳಗಾವಿ: 22 ಗ್ರಾಮಗಳಿಗೆ ನೀರುಣಿಸುವ ಬಸವೇಶ್ವರ ಏತ ನೀರಾವರಿಗೆ ಚಾಲನೆ
ಇಂಥ ಸಂದರ್ಭದಲ್ಲಿಯೇ ಕೇವಲ 74.15 ಅಡಿಗಳಷ್ಟು ನೀರು ತುಂಬಿಕೊಂಡಿರುವ ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದು, ಬರಗಾಲದಿಂದ ಕಂಗೆಟ್ಟಿರುವ ಕರ್ನಾಟಕದ ರೈತರಿಗೆ ಗಾಯದ ಮೇಲೆ ಬರೆ ಕೊಟ್ಟಂತಾಗಿದೆ.
ಕರ್ನಾಟಕಕ್ಕೆ ಕೇಂದ್ರದಿಂದ 795.54 ಕೋಟಿ ರೂ. ಬರ ಪರಿಹಾರ
ಕಳೆದ ವರ್ಷ ಭೀಕರ ಬರಗಾಲವಿದ್ದರೂ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ಇದೇ ದಿನ 84.30 ಅಡಿಗಳಷ್ಟು ನೀರಿತ್ತು. ಕೆಆರೆಸ್ನ ಗರಿಷ್ಠಮಟ್ಟ 124.80 ಅಡಿಗಳು. ಇದು ತುಂಬಲು ಇನ್ನೆಷ್ಟು ವರ್ಷಗಳು ಬೇಕೋ?
ಇನ್ನು ತಮಿಳುನಾಡಿಗೆ ಹೀಗೆಯೇ ಕದ್ದುಮುಚ್ಚಿ ನೀರು ಬಿಡುತ್ತಿದ್ದರೆ ಮಳೆಗಾಲ ಮುಗಿಯುವ ಮುನ್ನವೇ ನೀರಿಗೆ ಹಾಹಾಕಾರ ಆರಂಭವಾಗುವುದರಲ್ಲಿ ಸಂದೇಹವೇ ಇಲ್ಲ, ಬೆಳೆಗಳಿಗೆ ಸಾಕಷ್ಟು ನೀರು ದೊರೆಯುವುದಿಲ್ಲ ಎಂದು ಮಂಡ್ಯ ಜಿಲ್ಲೆಯ ರೈತರು ನೀರಿಗಿಳಿದು ಪ್ರತಿಭಟನೆಗೆ ಇಳಿದಿದ್ದಾರೆ.
ಮಳೆಗಾಲದ ಲೇಖನದಲ್ಲಿ ಮನಸಾರೆ ತೋಯಿರಿ...
ಕೆಆರೆಸ್ ಭರ್ತಿಯಾಗಬೇಕಿದ್ದರೆ ಕೊಡಗಿನಲ್ಲಿ ಭರ್ಜರಿ ಮಳೆ ಸುರಿಯಬೇಕು. ಆದರೆ, ಈ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಕೇವಲ 431 ಮಿ.ಮೀ. ಮಳೆಯಾಗಿದೆ. ವಾಡಿಕೆ ಮಳೆಗೆ ಹೋಲಿಸಿದರೆ ಇದು ಶೇ.31ರಷ್ಟು ಕಡಿಮೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸುಂದರ್ ಮೇಟ್ರಿ ಅವರು ಹೇಳಿದ್ದಾರೆ.
ಇದು ಕೊಡಗಿನ ಕಥೆ ಮಾತ್ರವಲ್ಲ, ಕಾವೇರಿ ನೀರು ಪೂರೈಕೆಯಾಗುವ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕಥೆಯೂ ಇದೇ. ಮೈಸೂರಿನಲ್ಲಿ ಶೇ.45ರಷ್ಟು, ಮಂಡ್ಯದಲ್ಲಿ ಶೇ.58ರಷ್ಟು ಮತ್ತು ಚಾಮರಾಜನಗರದಲ್ಲಿ ಶೇ.61ರಷ್ಟು ಕಡಿಮೆ ಮಳೆಯಾಗಿದೆ.
ಇನ್ನು ಕಾವೇರಿ ಜಲಾನಯನ ಪ್ರದೇಶಗಳ ಅಣೆಕಟ್ಟೆಯನ್ನು ತುಂಬಿಸುವ ಹಾಸನ ಜಿಲ್ಲೆಯ ಹೇಮಾವತಿ ನದಿಯಲ್ಲಿ ಕೂಡ ಈ ವರ್ಷ ನೀರಿನ ಹರಿವು ಕಡಿಮೆಯೆ. ಈ ಜಿಲ್ಲೆಯಲ್ಲಿ ಕೇವಲ 123 ಮಿ.ಮೀ. ಮಳೆಯಾಗಿದೆ. ಇನ್ನು ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳು ಕೂಡ ಶೇ.37 ಮತ್ತು ಶೇ.40ರಷ್ಟು ಕಡಿಮೆ ಮಳೆ ಪಡೆದಿವೆ.
ಈ ನಡುವೆ, ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ 16 ಸೆಂ.ಮೀ., ಉತ್ತರಕನ್ನಡ ಜಿಲ್ಲೆಯ ಗೇರುಸೊಪ್ಪದಲ್ಲಿ 12 ಸೆಂ.ಮೀ. ಮಳೆಯಾಗಿದೆ. ಹೊನ್ನಾವರದಲ್ಲಿಯೂ 8 ಸೆಂ.ಮೀ. ಮಳೆ ಸುರಿದಿದೆ.