ಆಗಸ್ಟ್ 16ರಿಂದ ಪಿಯು ತರಗತಿ ಶುರು, ಪ್ರವೇಶ ಪ್ರಕ್ರಿಯೆ ಆರಂಭ
ಬೆಂಗಳೂರು, ಆಗಸ್ಟ್ 11: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಪದವಿಪೂರ್ವ 2021-22ನೇ ಸಾಲಿನ ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭಿಸಿರುವುದರ ಜತೆಗೆ ಆಗಸ್ಟ್ 16ರಿಂದಲೇ ತರಗತಿ ನಡೆಸಲು ತಿಳಿಸಿದೆ.
ವಿದ್ಯಾರ್ಥಿಗಳು ಯಾವುದೇ ದಂಡ ಶುಲ್ಕವಿಲ್ಲದೆ ಆ.31ರವರೆಗೆ ದಾಖಲಾತಿ ಪಡೆಯಬಹುದಾಗಿದೆ. ಸೆಪ್ಟೆಂಬರ್ 1 ರಿಂದ 11ರ ಅವಧಿಯಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಂದ 670 ರೂ. ವಿಳಂಬ ಶುಲ್ಕ ಸಂಗ್ರಹಿಸಲಾಗುತ್ತದೆ. ಸೆ.13 ರಿಂದ 25ರ ಅವಧಿಯಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಂದ 2890 ರೂ. ದಂಡ ಶುಲ್ಕ ಪಡೆಯಬೇಕು ಎಂದು ನಿರ್ದೇಶನ ನೀಡಿದೆ.
SSLC Result; ಪರೀಕ್ಷೆ ಬರೆದ ಮಕ್ಕಳೆಲ್ಲಾ ಪಾಸ್
ಎಸ್ಎಸ್ಎಲ್ಸಿಯಲ್ಲಿ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದರಿಂದ ಪಿಯುಸಿ ದಾಖಲಾತಿ ಪ್ರಮಾಣವೂ ಹೆಚ್ಚಾಗಲಿದೆ. ಹೀಗಾಗಿ ಪ್ರಥಮ ಪಿಯುಸಿ ತರಗತಿಗಳಿಗೆ ಆ.31ರೊಳಗೆ ದಾಖಲಾತಿ ಪ್ರಕ್ರಿಯೆ ನಡೆಸುವಂತೆ ಇಲಾಖೆ ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದೆ.
2021-22ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈಗಾಗಲೇ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭವಾಗಿರುವುದರಿಂದ ಆ.16ರಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೂ ತರಗತಿಗಳನ್ನು ಆರಂಭಿಸಬೇಕು. ವಿಳಂಬವಾಗಿ ದಾಖಲಾದ ವಿದ್ಯಾರ್ಥಿಗಳು ನಂತರ ತರಗತಿಗಳಿಗೆ ಸೇರಿಕೊಳ್ಳಲಿದ್ದಾರೆ.
ದಾಖಲಾದ ವಿದ್ಯಾರ್ಥಿಗಳಿಗೆ ತರಗತಿ ಕೂಡಲೇ ಆರಂಭಿಸಬೇಕು ಎಂದು ಎಲ್ಲಾ ಪಿಯು ಕಾಲೇಜಿನ ಪ್ರಾಂಶುಪಾಲರಿಗೆ ಇಲಾಖೆಯು ನಿರ್ದೇಶನ ನೀಡಿದೆ. ಪ್ರಥಮ ಪಿಯುಸಿಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಂದ 2021-22ನೇ ಸಾಲಿನ ಪ್ರವೇಶ ಮಾರ್ಗಸೂಚಿಯಂತೆ ಶುಲ್ಕ ಪಡೆಯಬೇಕು.
ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ದಾಖಲಾತಿ ಶುಲ್ಕವನ್ನು ಮಾರನೇ ದಿನವೇ ಖಜಾನೆಗೆ ಸಲ್ಲಿಸಬೇಕು. ಯಾವುದೇ ರೀತಿಯಲ್ಲೂ ವಿಳಂಬ ಮಾಡಬಾರದು ಎಂದು ತಿಳಿಸಲಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷಾ ಉತ್ತರ ಪತ್ರಿಕೆಗಳನ್ನು ಡಿಜಿಟಲ್ ಮೌಲ್ಯಮಾಪನ ನಡೆಸಿರುವುದರಿಂದ ಫಲಿತಾಂಶದ ಮರು ಮೌಲ್ಯಮಾಪನ ಕೋರಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಈ ಬಾರಿ ಅವಕಾಶ ಇಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ವಿದ್ಯಾರ್ಥಿಗಳ ವಲಯದಲ್ಲಿ ಈ ಬಾರಿ ಮರು ಮೌಲ್ಯಮಾಪನಕ್ಕೆ ಅವಕಾಶ ನೀಡಲಾಗಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರು ಪ್ರತಿಕ್ರಿಯಿಸಿ ಈ ಬಾರಿ ಡಿಜಿಟಲ್ ಮೌಲ್ಯಮಾಪನದಲ್ಲಿ ತಪ್ಪುಗಳಾಗುವ ಸಾಧ್ಯತೆ ಇಲ್ಲ. ಹಾಗಾಗಿ ಮರುಮೌಲ್ಯಮಾಪನದ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿ ವರ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಲಿಖಿತವಾಗಿ ಬರೆಯುತ್ತಿದ್ದರು. ಆದರೆ, ಈ ಬಾರಿ ಬಹು ಆಯ್ಕೆ ಮಾದರಿ ಪ್ರಶ್ನೆಗಳ ಮೂಲಕ ಕೇವಲ ಸರಿ ಉತ್ತರದ ಸಂಖ್ಯೆಯನ್ನು ಒಎಂಆರ್ ಶೀಟ್ನಲ್ಲಿ ಗುರುತಿಸಿದ್ದಾರೆ. ಈ ಒಎಂಆರ್ ಪತ್ರಿಕೆಯನ್ನು ಡಿಜಿಟಲ್ ಸ್ಕ್ಯಾನಿಂಗ್ ಮೂಲಕ ಯಾಂತ್ರಿಕೃತ ಮೌಲ್ಯಮಾಪನ ನಡೆಸಲಾಗಿದೆ.
ಹಾಗಾಗಿ ಮೌಲ್ಯಮಾಪನ ತಪ್ಪಾಗಲು ಸಾಧ್ಯವಿಲ್ಲ. ಇನ್ನು ಪರೀಕ್ಷೆ ಬಳಿಕ ಕೀ ಉತ್ತರಗಳನ್ನೂ ನೀಡಿ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆಕ್ಷೇಪಗಳನ್ನು ಪರಿಶೀಲಿಸಿ ಕನ್ನಡ ಭಾಷಾ ವಿಷಯದ ಒಂದು ಪ್ರಶ್ನೆ ಗೊಂದಲದಿಂದ ಕೂಡಿದ್ದರಿಂದ ಸಾಮೂಕವಾಗಿ ಎಲ್ಲ ಮಕ್ಕಳಿಗೂ ಒಂದು ಕೃಪಾಂಕ ನೀಡಲಾಗಿದೆ. ಈ ಎಲ್ಲಾ ಕಾರಣದಿಂದ ಮರು ಮೌಲ್ಯಮಾಪನದ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
4,70,160 SSLC ವಿದ್ಯಾರ್ಥಿಗಳು ಉತ್ತೀರ್ಣ ಆಗಿದ್ದಾರೆ. 4,01,280 ವಿದ್ಯಾರ್ಥಿನಿಯರು ಉತ್ತೀರ್ಣ ಆಗಿದ್ದಾರೆ. A+ ಗ್ರೇಡ್ ಪಡೆದಿರುವ ವಿದ್ಯಾರ್ಥಿಗಳು 1,28,931, A ಗ್ರೇಡ್ ಪಡೆದಿರುವ ವಿದ್ಯಾರ್ಥಿಗಳು 2,50,317, B ಗ್ರೇಡ್ ಪಡೆದಿರುವ ವಿದ್ಯಾರ್ಥಿಗಳು 2,87,694, C ಗ್ರೇಡ್ ಪಡೆದಿರುವ ವಿದ್ಯಾರ್ಥಿಗಳು 1,13,610, ಶೇ. 9ರಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಿ ಪಾಸ್ ಮಾಡಲಾಗಿದೆ. C ಗ್ರೇಡ್ ಪಡೆದಿರುವ ಶೇ.9ರಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಲಾಗಿದೆ.
Recommended Video
625ಕ್ಕೆ 625 ಅಂಕ ಪಡೆದಿರುವ 157 ವಿದ್ಯಾರ್ಥಿಗಳು, 625ಕ್ಕೆ 623 ಅಂಕ ಪಡೆದಿರುವ 289 ವಿದ್ಯಾರ್ಥಿಗಳು, 625ಕ್ಕೆ 622 ಅಂಕ ಪಡೆದಿರುವ ಇಬ್ಬರು ವಿದ್ಯಾರ್ಥಿಗಳು, 625ಕ್ಕೆ 621 ಅಂಕ ಪಡೆದಿರುವ 449 ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.