ಪಿಎಸ್ಐ ನೇಮಕಾತಿ ಅಕ್ರಮ: ಡೀಲ್ ಕೋರನಿಂದಲೇ ಡಿವೈಎಸ್ಪಿಗೆ ಡೀಲ್!
ಬೆಂಗಳೂರು, ಜು. 12: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ಸಂಬಂಧ ಕಲಬುರಗಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಿಐಡಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪಿಎಸ್ಐ ಹುದ್ದೆ ಡೀಲ್ ಕೋರರ ರಣ ರೋಚಕ ಸಂಗತಿಗಳು ದೋಷಾರೋಪ ಪಟ್ಟಿಯಿಂದಲೇ ಹೊರ ಬಿದ್ದಿವೆ.
ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರಿಗೆ ಮೊದಲೇ ಮಾಹಿತಿ ಇತ್ತು. ಪಿಎಸ್ಐ ಹುದ್ದೆ ಡೀಲ್ ಮಾಡುತ್ತಿದ್ದ ಒಂದು ಗ್ಯಾಂಗ್ ಬಗ್ಗೆ ಇನ್ನೊಂದು ಗ್ಯಾಂಗ್ ಮಾಹಿತಿ ನೀಡಿತ್ತು. ಇದನ್ನೇ ಮುಂದಿಟ್ಟುಕೊಂಡು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ 80 ಲಕ್ಷ ರೂ. ವಸೂಲಿ ಮಾಡಲ ಹೋಗಿ ಕೇವಲ ಹತ್ತು ಲಕ್ಷ ರೂ. ಲಂಚ ವಸೂಲಿ ಮಾಡಿದ್ದರು. ಅದೂ ಈ ಡೀಲ್ ಪ್ರಮುಖ ಕಿಂಗ್ಪಿನ್ ಆರ್. ಡಿ. ಪಾಟೀಲನ ಸಮ್ಮುಖದಲ್ಲಿ ನಡೆದಿತ್ತು.
ಇಂತಹ ಸ್ಫೋಟಕ ಸಂಗತಿ ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಕಲಬುರಗಿಯಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಅಫಜಲಪುರದ ಆರ್.ಡಿ. ಪಾಟೀಲ್ ತನ್ನ ಪರಿಚಿತ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರಿಗೆ ಮಾಹಿತಿ ನೀಡಿದ್ದ. ತನ್ನ ಎದುರಾಳಿ ಗ್ಯಾಂಗ್ ಮಂಜುನಾಥ್ ಮೇಳಕುಂದಿ, ಜ್ಞಾನ ಜ್ಯೋತಿ ಇಂಗ್ಲಿಷ್ ಶಾಲೆ ಮುಖ್ಯ ಶಿಕ್ಷಕ ಕಾಶಿನಾಥ್ ಪಿಎಸ್ಐ ಅಕ್ರಮದಲ್ಲಿ ಶಾಮೀಲಾಗಿರುವ ಮಾಹಿತಿಯನ್ನು ಸಾಲಿ ಅವರಿಗೆ ಪ್ರಮುಖ ಕಿಂಗ್ಪಿನ್ ಆರ್.ಡಿ. ಪಾಟೀಲ ನೀಡಿದ್ದ. ಆರ್.ಡಿ ಪಾಟೀಲನ ಸೂಚನೆ ಮೇರೆಗೆ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಆರೋಪಿ ಮಂಜುನಾಥ್ ಮೇಳಕುಂದಿ ಮತ್ತು ಕಾಶಿನಾಥ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಅಕ್ರಮ ಬಹಿರಂಗಪಡಿಸದೇ ಇರಬೇಕಾದರೆ 80 ಲಕ್ಷ ರೂ. ಹಣ ಕೊಡಬೇಕು ಎಂದು ಹೆದರಿಸಿದ್ದಾರೆ.
ಬೆದರಿಸಿದರೆ ಹಣ ಸಿಗುತ್ತದೆ:
ಆರೋಪಿಗಳಿಗೆ ಬೆದರಿಕೆ ಹಾಕಲು ಕಿಂಗ್ಪಿನ್ ಆರ್.ಡಿ. ಪಾಟೀಲನಿಗೆ ಹಣ ಕೊಡುವಂತೆ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಕೇಳಿದ್ದ. ನನ್ನ ಬಳಿ ಹಣವಿಲ್ಲ, ಮೇಳಕುಂದಿ ಮತ್ತು ಕಾಶಿನಾಥ್ ಅವರಿಗೆ ಹೆದರಿಸಿದರೆ ಹಣ ಸಿಗಬಹುದು ಎಂದು ಹೇಳಿದ್ದೇ ತಡ, ಇಬ್ಬರು ಆರೋಪಿಗಳಿಗೆ ಡಿವೈಎಸ್ಪಿ ಹೆದರಿಸಿದ್ದ. 80 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು ಅಂತಿಮವಾಗಿ 10 ಲಕ್ಷ ರೂ. ಪಡೆದಿದ್ದ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಗೊತ್ತಿದ್ದೂ ಅದನ್ನು ಮಲ್ಲಿಕಾರ್ಜುನ ಸಾಲಿ ಬಹಿರಂಗ ಪಡಿಸದೇ ಹೆದರಿಸಿ ಹಣ ವಸೂಲಿ ಮಾಡಿದ್ದ ಎಂಬ ಸಂಗತಿ ಸಿಐಡಿ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರ ಬೆದರಿಕೆಗೆ ಹೆದರಿದ ಆರೋಪಿ ಮಂಜುನಾಥ್ ಮೇಳಕುಂದಿ, ಜ್ಞಾನ ಜ್ಯೋತಿ ಇಂಗ್ಲಿಷ್ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್, ಕಿಂಗ್ ಪಿನ್ ಆರ್.ಡಿ. ಪಾಟೀಲ್ ಮನೆಗೆ ಹೋಗಿದ್ದರು. ವಾಟ್ಸಪ್ ಕಾಲ್ ಮೂಲಕ ಆರ್.ಟಿ. ಪಾಟೀಲ್ ಮತ್ತು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಸಂಭಾಷಣೆ ಮಾಡಿದ್ದಾರೆ. ಅದಾದ ಬಳಿಕ 80 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಸಾಲಿಗೆ 10 ಲಕ್ಷ ರೂ. ನೀಡುವುದಾಗಿ ಖಚಿತ ಪಡಿಸಿದ ಬಳಿಕ ಸುಮ್ಮನಾಗಿದ್ದರು. ಮಾತುಕತೆ ನಡೆದ ಮರು ದಿನವೇ ಹತ್ತು ಲಕ್ಷ ರೂ. ಹಣವನ್ನು ಮಲ್ಲಿಕಾರ್ಜುನ ಸಾಲಿಗೆ ನೀಡಲಾಗಿತ್ತು ಎಂದು ಅಕ್ರಮವನ್ನು ಎಳೆಎಳೆಯಾಗಿ ಸಿಐಡಿ ಅಧಿಕಾರಿಗಳು ಬಿಚ್ಚಿಟ್ಟಿದ್ದಾರೆ.