ದೀಪಾವಳಿಗೆ ಇಲ್ಲ ತೊಗರಿ ದರ ಏರಿಕೆ ವರಿ
ಬೆಂಗಳೂರು, ನವೆಂಬರ್. 02: ದೀಪಾವಳಿ ಹಬ್ಬಕ್ಕೆ ಬೇಳೆ ಕಾಳುಗಳ ಬೆಲೆ ಇಳಿಯುವ ನಿರೀಕ್ಷೆಯಿದೆ. ಸರ್ಕಾರ ವಶಪಡಿಸಿಕೊಂಡಿರುವ 2.35 ಲಕ್ಷ ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳನ್ನು ನ.6ರೊಳಗೆ ಇ-ಹರಾಜು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಹರಾಜು ಪ್ರಕ್ರಿಯೆಯ ಮಾಹಿತಿ ನೀಡಿದರು.[ತೊಗರಿ ಬೇಳೆಗೆ ಈ ಪರಿ ಬೆಲೆಗೆ ಏನು ಕಾರಣ]
ಈಗಿನಿಂದಲೇ ಪ್ರಕ್ರಿಯೆ ಆರಂಭಿಸಲು ಎಲ್ಲ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.ನ.4ರಿಂದ 6ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ತೊಗರಿ ಬೇಳೆ, ಉದ್ದಿನ ಬೇಳೆ, ತೊಗರಿ ಕಾಳನ್ನು ನವೆಂಬರ್ 6ರೊಳಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಹೆಸರು ಬೇಳೆ, ಕಡಲೆಕಾಳು ಸೇರಿ ಉಳಿದ ಬೇಳೆಕಾಳು ನ.9ರೊಳಗಾಗಿ ಮಾರುಕಟ್ಟೆಗೆ ಸರಬರಾಜಾಗಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.[ತೊಗರಿ ಬೇಳೆ ಪ್ರತಿ ಕೆ.ಜಿಗೆ 110 ರು ಮಾತ್ರ]
ಕೃಷಿ ಮಾರುಕಟ್ಟೆ ಇಲಾಖೆ ಸಹಕಾರದೊಂದಿಗೆ ಇ-ಟ್ರೇಡಿಂಗ್ ಮಾಡಲಾಗುವುದು. ರಾಜ್ಯದಲ್ಲಿರುವ 34 ಸಾವಿರ ನೋಂದಾಯಿತ ವ್ಯಾಪಾರಿಗಳು ಇ-ಟ್ರೇಡಿಂಗ್ನಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಕೆಲವೇ ದಿನದಲ್ಲಿ ದರ ಕೆಜಿಗೆ 120 ರು. ತಲುಪಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಧಾನ್ಯಗಳನ್ನು ಸಂಗ್ರಹಿಸಿರುವುದು ಕಂಡುಬಂದರೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.