ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ: ವಿಭಾಗವಾರು ಯಾರಿಗೆ ಹೆಚ್ಚು ಸ್ಥಾನ?
ಬೆಂಗಳೂರು, ಏಪ್ರಿಲ್ 24: ಟೈಮ್ಸ್ ನೌ ವಾಹಿನಿ ಮತ್ತು ವಿಎಂಆರ್ ಸಂಸ್ಥೆಗಳು ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ನಡೆಸಿದ ಸಮೀಕ್ಷೆ ಸೋಮವಾರ ಹೊರ ಬಿದ್ದಿದೆ.
ಈ ಸಮೀಕ್ಷೆ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಹೇಳಿದೆ. ಮತ್ತು ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಜೆಡಿಎಸ್ ಸಖ್ಯ ಅನಿವಾರ್ಯವಾಗಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.
ಟೈಮ್ಸ್ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ
ಒಟ್ಟಾರೆ ಸಮೀಕ್ಷೆ ಕಾಂಗ್ರೆಸ್ ಗೆ 91, ಬಿಜೆಪಿಗೆ 89, ಜೆಡಿಎಸ್+ಬಿಎಸ್ಪಿಗೆ 40 ಮತ್ತು ಇತರರಿಗೆ 4 ಸ್ಥಾನಗಳನ್ನು ನೀಡಿದೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಶೇಕಡಾ 38.6 ಮತಗಳನ್ನು ಗಳಿಸಲಿದೆ. ಬಿಜೆಪಿ ಮತ್ತು ಜೆಡಿಎಸ್+ಬಿಎಸ್ಪಿ ಕ್ರಮವಾಗಿ ಶೇಕಡಾ 35.03 ಹಾಗೂ ಶೇಕಡಾ 21.33 ಮತಗಳನ್ನು ಪಡೆದುಕೊಳ್ಳಲಿದೆ. ಇತರರಿಗೆ ಶೇಕಡಾ 5.04 ಮತಗಳು ಬೀಳಲಿವೆ.
ಎಬಿಪಿ ನ್ಯೂಸ್ ಸಮೀಕ್ಷೆ: ಬಿಜೆಪಿ ಅತಿ ದೊಡ್ಡ ಪಕ್ಷ- ಸರ್ಕಾರ ಅತಂತ್ರ
ವಿಭಾಗವಾರು ಫಲಿತಾಂಶಗಳನ್ನು ಸಮೀಕ್ಷೆ ನೀಡಿದ್ದು ಕೇಂದ್ರ ಕರ್ನಾಟಕದಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದೆ. ಮತ್ತೊಂದು ವಿಶೇಷವೆಂದರೆ ಬೆಂಗಳೂರಿನಲ್ಲಿ ಕಾಂಗ್ರೆಸ್ ತನ್ನ ಸ್ಥಾನಗಳನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿದೆ.
ಮುಂಬೈ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಕುಸಿತ
ಸಮೀಕ್ಷೆ ಪ್ರಕಾರ 2013ರಲ್ಲಿ 50 ಕ್ಷೇತ್ರಗಳಲ್ಲಿ 31 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಮುಂಬೈ ಕರ್ನಾಟಕದಲ್ಲಿ ಕೇವಲ 21 ಸ್ಥಾನಗಳನ್ನು ಗೆಲ್ಲಲಿದೆ. 2013ರಲ್ಲಿ 13 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ 23 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.
ಇಲ್ಲಿ ಜೆಡಿಎಸ್ ಮತ್ತು ಬಿಎಸ್ಪಿ ಒಟ್ಟಾಗಿ 2013ರಲ್ಲಿ ಗೆದ್ದಿದ್ದ 1 ಸ್ಥಾನಗಳ ಜಾಗದಲ್ಲಿ 5 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಯು ತಿಳಿಸಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಚುನಾವಣೆ ಮೇಲೆ ಅಷ್ಟಾಗಿ ಪರಿಣಾಮ ಬೀಳುವುದಿಲ್ಲ. ಲಿಂಗಾಯತರು ಹೆಚ್ಚಾಗಿರುವ ಮುಂಬೈ ಕರ್ನಾಟಕದಲ್ಲಿ ಬಿಜೆಪಿ ಸೀಟು ಗಳಿಕೆಯಲ್ಲಿ ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಸಮೀಕ್ಷೆ ಅಂದಾಜಿಸಿದೆ.
ಕರಾವಳಿ ಕರ್ನಾಟಕದಲ್ಲಿ ಬಿಜೆಪಿಗಿಲ್ಲ ಲಾಭ
ಕರಾವಳಿ ಕರ್ನಾಟಕದಲ್ಲಿ ಮತ ಧ್ರುವೀಕರಣದ ಯತ್ನಗಳು ನಡೆದರೂ ಬಿಜೆಪಿಗೆ ಹೆಚ್ಚಿನ ಲಾಭವಾಗುವುದಿಲ್ಲ ಎಂದು ಸಮೀಕ್ಷೆ ಹೇಳಿರುವುದು ವಿಶೇಷ. ಕಳೆದ ಬಾರಿ 21ರಲ್ಲಿ 5 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಇಲ್ಲಿ 8 ಸ್ಥಾನಗಳನ್ನಷ್ಟೇ ಗೆಲ್ಲಬಹುದು ಎಂಬುದು ಜನಾಭಿಪ್ರಾಯದಲ್ಲಿ ತಿಳಿದು ಬಂದಿದೆ.
ಕಾಂಗ್ರೆಸ್ 2013ರಲ್ಲಿ ಕರಾವಳಿಯಲ್ಲಿ 13 ಸ್ಥಾನಗಳನ್ನು ಗೆದ್ದಿತ್ತು ಈ ಬಾರಿ 2 ಸ್ಥಾನ ಕಳೆದುಕೊಂಡು 11 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂಬುದು ಸರ್ವೆಯ ಸಾರಾಂಶ.
ಬೆಂಗಳೂರಲ್ಲಿ ಕಾಂಗ್ರೆಸ್ ರಾಜ್ಯಭಾರ
ಅಚ್ಚರಿಯ ರೀತಿಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಸೀಟು ಗಳಿಕೆ ಹೆಚ್ಚಾಗಲಿದೆ ಎಂದು ಸಮೀಕ್ಷೆ ಹೇಳಿದೆ. ನಗರ ಪಕ್ಷ ಎಂಬ ಹಣೆ ಪಟ್ಟಿ ಹೊತ್ತ ಬಿಜೆಪಿ ಈ ಬಾರಿ ಬೆಂಗಳೂರಿನಲ್ಲಿ 13 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 32ರಲ್ಲಿ 17 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸರ್ವೆ ತಿಳಿಸಿದೆ. ಇಲ್ಲಿ ಜೆಡಿಎಸ್ 2 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಬಹುದು ಎಂಬುದಾಗಿ ಜನಾಭಿಪ್ರಾಯ ಸಂಗ್ರಹದ ವರದಿ ಉಲ್ಲೇಖಿಸಿದೆ.
ಮಧ್ಯ ಕರ್ನಾಟಕದಲ್ಲಿ ಬಿಜೆಪಿ ನಾಗಾಲೋಟ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜೆಡಿಎಸ್ ತುರುಸಿನ ಸ್ಪರ್ಧೆ ನೀಡುವುದರಲ್ಲಿ ಮಧ್ಯ ಕರ್ನಾಟಕದ ಪಾತ್ರ ಪ್ರಮುಖವಾಗಿದೆ. ಈ ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಳ್ಳಲಿದ್ದು, ಪರಿಣಾಮ ಒಟ್ಟು ಸೀಟು ಗಳಿಕೆಯಲ್ಲಿ ಕಾಂಗ್ರೆಸ್ ಸಮೀಪಕ್ಕೆ ಬಂದು ನಿಲ್ಲಲಿದೆ ಎಂಬುದು ಸಮೀಕ್ಷೆಯ ಲೆಕ್ಕಾಚಾರವಾಗಿದೆ.
ಮಧ್ಯ ಕರ್ನಾಟಕದಲ್ಲಿ 2013ರಲ್ಲಿ 35 ರಲ್ಲಿ ಕೇವಲ 4 ಸ್ಥಾನಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ 22 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ ಸೀಟು ಗಳಿಕೆ 19ರಿಂದ 10 ಕ್ಕೆ ಇಳಿಕೆಯಾಗಲಿದೆ ಎಂದು ಸರ್ವೆ ಅಂದಾಜಿಸಿದೆ.
ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ
ಹೈದರಾಬಾದ್ ಕರ್ನಾಟಕದಲ್ಲಿಯೂ ಬಿಜೆಪಿಗೆ ಈ ಬಾರಿ ಭರ್ಜರಿ ಫಲಿತಾಂಶ ಸಿಗಲಿದೆ. ಇಲ್ಲಿ 2013ರಲ್ಲಿ 31 ಸ್ಥಾನಗಳಲ್ಲಿ ಕೇವಲ 4 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 15 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 19 ಸ್ಥಾನಗಳನ್ನು ಈ ಹಿಂದೆ ಗೆದ್ದುಕೊಂಡಿತ್ತು. ಅದು ಈ ಬಾರಿ 12ಕ್ಕೆ ಇಳಿಕೆಯಾಗಲಿದೆ.
ಜೆಡಿಎಸ್-ಬಿಎಸ್ಪಿಯೂ ಒಂದು ಸ್ಥಾನ ಕಳೆದುಕೊಂಡು ಈ ಬಾರಿ 3 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಲಿದೆ.
ಹಳೆ ಮೈಸೂರಲ್ಲಿ ಕಾಂಗ್ರೆಸ್ ಗೆ ಹಿನ್ನಡೆ
ಹಳೆ ಮೈಸೂರು ಭಾಗದ 55 ಕ್ಷೇತ್ರಗಳಲ್ಲಿ 2013ರ ಫಲಿತಾಂಶವೇ ಹೆಚ್ಚು ಕಡಿಮೆ ಪುನರಾವರ್ತನೆಯಾಗಲಿದೆ. 2013ರಲ್ಲಿ ಇಲ್ಲಿ 25 ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ ಬಲ ಈ ಬಾರಿ 20ಕ್ಕೆ ಕುಸಿಯಲಿದೆ.
ಜೆಡಿಎಸ್-ಬಿಎಸ್ಪಿ 23ರಿಂದ 25 ಸ್ಥಾನಗಳಿಗೆ ತಮ್ಮ ಶಕ್ತಿ ವೃದ್ಧಿಸಿಕೊಳ್ಳಲಿದ್ದರೆ, ಬಿಜೆಪಿ 2 ಸೀಟುಗಳ ಜಾಗದಲ್ಲಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ.