ಸಿದ್ದರಾಮಯ್ಯ ಮೇಲೆ ಬೇಟೆಯಾಡುತ್ತಿದೆ ಕಣ್ಣು, ಅದೇ ಕಣ್ಣು!
Recommended Video
'ಶಾಸಕರ ಸರಣಿ ರಾಜೀನಾಮೆಯ ಹಿಂದೆ ಯಾರ ಕೈವಾಡವಿದೆ ಎನ್ನುವುದು ನನಗೆ ಗೊತ್ತಿದೆ. ಮೈತ್ರಿ ಸರಕಾರ ಕೆಡವಲು ಉದ್ದೇಶಪೂರ್ವಕವಾಗಿಯೇ ಶಾಸಕರನ್ನು ಮುಂದೆ ಬಿಡಲಾಗಿದೆ. ಇದರ ಹಿಂದೆ ಕಾಂಗ್ರೆಸ್ ಮುಖಂಡರ ಕೈವಾಡವಿದೆ' ಇದು ಕೆಲವು ದಿನಗಳ ಹಿಂದೆ ಜೆಡಿಎಸ್ ವರಿಷ್ಠ ದೇವೇಗೌಡರು ನೀಡಿದ್ದ ಹೇಳಿಕೆ.
ರಾಜಕಾರಣವನ್ನು ಅರಿದು ಕುಡಿದು ಆಪೋಸನ ಮಾಡಿಕೊಂಡಿರುವ ಗೌಡ್ರ ಲೆಕ್ಕಾಚಾರ ತಪ್ಪಾಗುತ್ತಾ? ಹಾಗಿದ್ದರೆ, ರಾಜ್ಯ ಕಾಂಗ್ರೆಸ್ ನಲ್ಲಿ ಅಷ್ಟು ಪ್ರಬಲರಾಗಿರುವ ಮುಖಂಡರು ಯಾರು? ಸೈಲೆಂಟಾಗಿ ಪರದೆಯ ಹಿಂದೆ ಆಟವಾಡುತ್ತಿರುವವರು ಯಾರು ಎಂದಾಗ ಸಂಶಯದ ಕಣ್ಣು ಸಿದ್ದರಾಮಯ್ಯನವರ ಕಡೆ ತಿರುಗುವುದು ಸಹಜ.
ಅದಕ್ಕೆ ಕಾರಣ ಇಲ್ಲದಿಲ್ಲ, ಈವರೆಗೆ ರಾಜೀನಾಮೆ ನೀಡಿರುವ ಶಾಸಕರು ಮತ್ತು ಅದಕ್ಕೆ ಬುಧವಾರ ಸೇರ್ಪಡೆಯಾಗಿರುವ ಶಾಸಕರನ್ನು ಸೇರಿಸಿದಾಗ, ಅದರಲ್ಲಿ ಸಿದ್ದರಾಮಯ್ಯನವರ ಗರಡಿಯಲ್ಲಿ ಪಳಗಿದವರ ಸಂಖ್ಯೆ ಕಮ್ಮಿ ಇಲ್ಲದೇ ಇರುವುದು.
ಸಿದ್ದರಾಮಯ್ಯ ಸಿಎಂ, ಎಚ್ ಡಿ ರೇವಣ್ಣ ಡಿಸಿಎಂ : ದೇವೇಗೌಡರ ಅಸ್ತ್ರ
ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಸಿದ್ದರಾಮಯ್ಯನವರ ಅಪಸ್ವರ, ಅಸಹಿಷ್ಣುತೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಮುಂದುವರಿಯುತ್ತಲೇ ಇತ್ತು. ಸೂಕ್ಷ್ಮವಾಗಿ ಇದನ್ನೆಲ್ಲಾ ಗಮನಿಸುತ್ತಿದ್ದ ಗೌಡ್ರು, ಅವಾಗಾವಾಗ ಎಐಸಿಸಿ ವರಿಷ್ಠರಿಗೆ ದೂರು ನೀಡುತ್ತಲೇ ಬರುತ್ತಿದ್ದರು.
ಸಿದ್ದರಾಮಯ್ಯನವರನ್ನು ಎದುರು ಹಾಕಿಕೊಳ್ಳುವ ಸಾಹಸಕ್ಕೆ ಕೈಹಾಕಿರಲಿಲ್ಲ
ಆದರೆ, ಮೊದಲೇ ಹೈರಾಣವಾಗಿರುವ ವರಿಷ್ಠರು ಸಿದ್ದರಾಮಯ್ಯನವರನ್ನು ಎದುರು ಹಾಕಿಕೊಳ್ಳುವ ಸಾಹಸಕ್ಕೆ ಕೈಹಾಕಿರಲಿಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು. ಅದೇನೇ ಇರಲಿ, ಈಗ ರಾಜೀನಾಮೆ ನೀಡಿರುವ ಶಾಸಕರಲ್ಲಿ ಎಸ್ ಟಿ ಸೋಮಶೇಖರ್ ಕೂಡಾ ಒಬ್ಬರು. ಸಿದ್ದರಾಮಯ್ಯನವರೇ ನಮ್ಮ ನಾಯಕ ಎಂದು ಹಲವು ಬಾರಿ ಹೇಳಿಕೆ ನೀಡಿ, ಮುಖ್ಯಮಂತ್ರಿಗಳ ಕೆಂಗಣ್ಣಿಗೆ ಗುರಿಯಾಗಿದ್ದದ್ದು ಗೊತ್ತೇ ಇದೆ.
ಗುರುವಾರ ಸಚಿವ ಸಂಪುಟ ಸಭೆ: ಕುಮಾರಸ್ವಾಮಿ ಇಂದ ಮಹತ್ವದ ಘೋಷಣೆ?
ಭೈರತಿ ಬಸವರಾಜು, ಮುನಿರತ್ನ, ಎಂಟಿಬಿ ನಾಗರಾಜು, ಸುಧಾಕರ್
ಇನ್ನು ಭೈರತಿ ಬಸವರಾಜು, ಮುನಿರತ್ನ, ಎಂಟಿಬಿ ನಾಗರಾಜು, ಸುಧಾಕರ್ ಎಲ್ಲಾ, ಯಾವುದೇ ಮುಚ್ಚುಮರೆಯಿಲ್ಲದೇ ಸಿದ್ದರಾಮಯ್ಯ ಮುಖಂಡರು, ಅವರನ್ನು ಮತ್ತೆ ಸಿಎಂ ಆಗಿ ನೋಡಬೇಕು ಎನ್ನುವ ಆಸೆಯನ್ನು ತೋಡಿಕೊಂಡಿದ್ದವರೇ.. ಆದರೂ, ಇವರ ರಾಜೀನಾಮೆಯನ್ನು ತಡೆಯಲು ಸಿದ್ದರಾಮಯ್ಯನವರಿಗೆ ಸಾಧ್ಯವಾಗಲಿಲ್ಲವೇ?
ಸುಧಾಕರ್ ರಾಜೀನಾಮೆ ನೀಡಿದ ಮೇಲೆ, ಇಷ್ಟೊಂದು ಡ್ರಾಮಾ ನಡೆಯಬೇಕಿತ್ತೇ
ಸುಧಾಕರ್ ರಾಜೀನಾಮೆ ನೀಡಿದ ಮೇಲೆ, ಇಷ್ಟೊಂದು ಡ್ರಾಮಾ ನಡೆಯಬೇಕಿತ್ತೇ ಎನ್ನುವುದನ್ನು ಅರಿಯಲು ರಾಜಕೀಯದಲ್ಲಿ ಪಿಎಚ್ಢಿ ಪಡೆಯಬೇಕಾಗಿಲ್ಲ. ಬೆಂಗಳೂರು ನಗರ ವ್ಯಾಪ್ತಿಯ ಮೂವರು ಶಾಸಕರು ರಾಜೀನಾಮೆ ನೀಡಿದಾಗಲೇ, ವರಿಷ್ಠರಿಗೆ ಸಿದ್ದರಾಮಯ್ಯನವರ ಮೇಲೆ ಕಣ್ಣಿತ್ತು, ಈಗ ಮತ್ತಿಬ್ಬರು ಅವರ ಗರಡಿಯವರು ರಾಜೀನಾಮೆ ನೀಡಿದಾಗ ಅದು ಅವರ ಮೇಲೆ ಹದ್ದಿನ ಕಣ್ಣಾಯಿತು.
ಸಿದ್ದರಾಮಯ್ಯನವರ ಮೇಲೆ ಅಸಮಾಧಾನ ವ್ಯಕ್ತವಾಗಿತ್ತು
ಎರಡ್ಮೂರು ದಿನಗಳ ಹಿಂದೆ ಕೆಪಿಸಿಸಿ ಉಸ್ತುವಾರಿ ವೇಣುಗೋಪಾಲ್ ಬಂದಿದ್ದಾಗಲೂ, ಬೆಂಗಳೂರು ಶಾಸಕರು ರಾಜೀನಾಮೆ ನೀಡಿರುವುದರ ಬಗ್ಗೆ ಸಿದ್ದರಾಮಯ್ಯನವರ ಮೇಲೆ ಅಸಮಾಧಾನ ವ್ಯಕ್ತವಾಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಅತೃಪ್ತರನ್ನು ಮನವೊಲಿಸುವಂತೆ ವರಿಷ್ಠರು ಮಾಡಿದ್ದ ಮನವಿಗೆ, ಐ ಯಾಮ್ ಸಾರಿ, ಹೆಲ್ಪ್ ಲೆಸ್ ಎಂದು ಸಿದ್ದರಾಮಯ್ಯ ಹೇಳಿದ್ದರು ಎಂದು ಕೂಡಾ ವರದಿಯಾಗಿತ್ತು.
ಗುಲಾಂನಬಿ ಆಜಾದ್ ಅವರನ್ನು ಕಣ್ಮುಚ್ಚಿ ನಂಬುವ ಸೋನಿಯಾ ಮತ್ತು ರಾಹುಲ್
ಗುಲಾಂನಬಿ ಆಜಾದ್ ಅವರನ್ನು ಕಣ್ಮುಚ್ಚಿ ನಂಬುವ ಸೋನಿಯಾ ಮತ್ತು ರಾಹುಲ್ ಗಾಂಧಿ, ಇದ್ದಕ್ಕಿದ್ದಂತೆಯೇ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದು ಯಾಕೆ? ಅದೇ ಅದೇ ಕಣ್ಣು ಬೇಟೆಯಾಡುತಿದೆ, ಸಿದ್ದರಾಮಯ್ಯ ಅದೇನು ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದಾರೋ, ವಿರೋಧ ಪಕ್ಷದಲ್ಲಿ ಇರಬೇಕು ಎನ್ನುವುದು ಅವರ ಆಶಯವೇ?