ಅಂದು, ಇಂದು: ರಾಜಕಾರಣಿಗಳ ಮುಂದೆ ಅಸಹಾಯಕರಾದ ಧರ್ಮಸ್ಥಳ ಮಂಜುನಾಥ, ಚಾಮುಂಡೇಶ್ವರಿ
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಮತದಾರರಲ್ಲಿ ಈ ರಾಜಕಾರಣಿಗೆಳ ಮೇಲೆ ಹೇಸಿಗೆ ಮೂಡಿಸುವಂತಾಗಿದೆ. ಅಭಿವೃದ್ದಿ ವಿಚಾರದ ಬಗ್ಗೆ ಮಾತನಾಡುವುದನ್ನು ಬಿಟ್ಟು, ಒಬ್ಬರು, ಇನ್ನೊಬ್ಬರನ್ನು ದೂರುವುದರಲ್ಲಿ ಮೂರೂ ಪಕ್ಷಗಳು ಪೈಪೋಟಿಗೆ ಬಿದ್ದಿವೆ.
ಗುರುವಾರ (ಅ 17) ನಡೆದ ಘಟನೆಯೂ ಇದಕ್ಕೆ ಹೊರತಾದದಲ್ಲ. ಸಮ್ಮಿಶ್ರ ಸರಕಾರಕ್ಕೆ ಕೈಕೊಟ್ಟ ಎಚ್.ವಿಶ್ವನಾಥ್, ಅವರು 'ಎಷ್ಟೋ ಕೋಟಿಗೆ ಬಿಜೆಪಿಗೆ ಸೇಲಾಗಿದ್ದಾರೆ' ಎಂದು ಸಾ.ರಾ.ಮಹೇಶ್ ಆರೋಪ. 'ಅದನ್ನು ಪ್ರೂವ್ ಮಾಡು' ಎನ್ನುವುದು ಇನ್ಜೊಬ್ಬರ ವಾದ.
'ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ' ಎನ್ನುವ ಹಾಗೇ, ಇವರಿಬ್ಬರ ಹೇಳಿಕೆ/ಮೇಲಾಟಕ್ಕೆ ಸಾಕ್ಷಿಯಾಗಿದ್ದು ಮಾತ್ರ ಚಾಮುಂಡೇಶ್ವರಿ ಸನ್ನಿಧಾನ. ತಮ್ಮಗಳ ರಾಜಕೀಯ ದಾಹಕ್ಕೆ, ದೇವಸ್ಥಾನವನ್ನೂ ರಾಜಕಾರಣಿಗಳು ಬಿಡಲಾರರು ಎನ್ನುವುದು ಮತ್ತೊಮ್ಮೆ ರುಜುವಾತಾಗಿದೆ.
ದೈವೀಶಕ್ತಿಗೆ ಉತ್ತರ ಕೊಡಲೇಬೇಕಾದ ಪರಿಸ್ಥಿತಿ ಬರುತ್ತೆ: ಎಚ್ಡಿಕೆ ಮಾರ್ಮಿಕ ಹೇಳಿಕೆ
ಮನಃಬಂದಂತೆ ಹೇಳಿಕೆಯನ್ನು ನೀಡಿ, ಲಕ್ಷಾಂತರ ಭಕ್ತರು ನಂಬುವ ದೇವಸ್ಥಾನದ ಹೆಸರನ್ನು ಎಳೆದು ತರುವ ಇವರಿಗೆ ದೇವರು ಅದ್ಯಾವಾಗ ಬುದ್ದಿಕೊಟ್ಟಾನೋ? ರಾಜಕಾರಣದಲ್ಲಿ ಈ ಆಣೆಪ್ರಮಾಣಕ್ಕೆ ಮೊದಲ ಸೂತ್ರಧಾರಿ ಸಂಸದೆ ಶೋಭಾ ಕರಂದ್ಲಾಜೆ. ಅದರ ಒಂದು ಝಲಕ್..
ಮಂಜುನಾಥನ ಪುಣ್ಯಕ್ಷೇತ್ರದಲ್ಲಿ ಆಣೆಪ್ರಮಾಣ
ಸುಮಾರು ಎಂಟು ವರ್ಷಗಳ ಹಿಂದೆ, ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ "ಯಡಿಯೂರಪ್ಪನವರು ಲೆಹರ್ ಸಿಂಗ್ ಮೂಲಕ ಸಂಧಾನಕ್ಕೆ ಯತ್ನಿಸುತ್ತಿದ್ದಾರೆ" ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದ್ದರು. ಅದಕ್ಕೆ, ಯಡಿಯೂರಪ್ಪನವರು, "ಬನ್ನಿ ಬೇಕಾದ್ರೆ ಮಂಜುನಾಥನ ಪುಣ್ಯಕ್ಷೇತ್ರದಲ್ಲಿ ದೇವರ ಸನ್ನಿಧಿಯಲ್ಲಿ ಆಣೆ ಪ್ರಮಾಣ ನಡೆದೇಹೋಗಲಿ" ಎಂದು ಕುಮಾರಸ್ವಾಮಿಗೆ ಪಂಥಾಹ್ವಾನ ನೀಡಿದ್ದರು.
ಧರ್ಮಸ್ಥಳ ಮಂಜುನಾಥನ ಸನ್ನಿಧಿ
ಆಗಲಿ ನೋಡೇಬಿಡೋ ಎಂದು ಕುಮಾರಸ್ವಾಮಿಯವರೂ ಸವಾಲು ಸ್ವೀಕರಿಸಿದ್ದರು. ಆ ವಿದ್ಯಮಾನದ ಬಗ್ಗೆ ಶೋಭಾ ಕರಂದ್ಲಾಜೆ ದಿನಪತ್ರಿಕೆಯಲ್ಲಿ ಪ್ರಕಟಣೆಯೊಂದನ್ನು ನೀಡಿದ್ದರು. 2011ರ ಜೂನ್ 27ರಂದು, ಎಚ್ಡಿಕೆ, ಬಿಎಸೈ ಇಬ್ಬರೂ ಧರ್ಮಸ್ಥಳಕ್ಕೆ ಹೋಗಿದ್ದರು. ಆದರೆ, ಆಣೆಪ್ರಮಾಣಕ್ಕೆ ಯಡಿಯೂರಪ್ಪ ಹಿಂದೇಟು ಹಾಕಿದ್ದರು.
ಆಧಾರ್- ವೋಟರ್ ಐಡಿ ಲಿಂಕ್: ರಾಜಕಾರಣಿಗಳಿಗೆ ಅಸಲಿ ಪರೀಕ್ಷೆ ಇನ್ನು ಶುರು
ಮುದ್ದಹನುಮೇಗೌಡರು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ
ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದ್ದರೂ ದೇವೇಗೌಡರ ವಿರುದ್ಧ ಕಣಕ್ಕಿಳಿದು ಅಂತಿಮ ಕ್ಷಣದಲ್ಲಿ ಧರ್ಮಸಂಕಟದಿಂದ ನಾಮಪತ್ರವನ್ನು ಹಿಂಪಡೆದಿದ್ದ ಸಂಸದ ಮುದ್ದಹನುಮೇಗೌಡರು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದರು. ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ್ರು ಮೂರುವರೆ ಕೋಟಿ ಹಣ ಪಡೆದಿದ್ದಾರೆ ಎನ್ನುವ ಆಡಿಯೋವೊಂದು ಬಹಿರಂಗವಾಗಿತ್ತು. ಇದು ಸುಳ್ಳು ಎಂದು ಗೌಡ್ರು, ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ದರು.
ಮಲೆ ಮಹದೇಶ್ವರನ ಮೇಲೆ ಪ್ರಮಾಣ
ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ ಮಾಡುತ್ತಿದ್ದ ನಮ್ಮ ರಾಜಕಾರಣಿಗಳು, ಕಳೆದ ಲೋಕಸಭಾ ಚುನಾವಣೆಯ ವೇಳೆ, ಮಲೆಮಹದೇಶ್ವರನ ಮೇಲೆ ಆಣೆ ಪ್ರಮಾಣ ಮಾಡಲಾರಂಭಿಸಿದರು. "ಸುಮಲತಾ ಪರ ಚುನಾವಣೆ ಮಾಡಿಲ್ಲ ಅಂತಾ ಮಲೆ ಮಹದೇಶ್ವರನ ಮೇಲೆ ಪ್ರಮಾಣ ಮಾಡಲಿ" ಎಂದು ಮಾಜಿ ಶಾಸಕ ನರೇಂದ್ರಸ್ವಾಮಿಗೆ ಮಳವಳ್ಳಿ ಶಾಸಕ ಅನ್ನದಾನಿ ಸವಾಲು ಹಾಕಿದ್ದರು.
ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮತ ಹಾಕಿ ಎಂದು ಪ್ರಮಾಣ
ಮಂಡ್ಯ ಲೋಕಸಭಾ ಚುನಾವಣೆಯ ವೇಳೆ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಮತ ಹಾಕಿ ಅಂತ ಸ್ಥಳೀಯ ನಾಯಕರು ಧರ್ಮಸ್ಥಳದ ಮಂಜುನಾಥನ ಫೋಟೋ ಮೇಲೆ ಆಣೆ ಮಾಡಿಸುತ್ತಿದ್ದರು. ಜೊತೆಗೆ, ಚಾಮುಂಡೇಶ್ವರಿಯ ಫೋಟೋ ಮೇಲೂ, ಸುಮಲತಾ ಕಡೆಯವರು ಪ್ರಮಾಣ ಮಾಡಿಸುತ್ತಿದ್ದರು ಎನ್ನುವ ಸುದ್ದಿಯಿತ್ತು.
ಎಚ್ ವಿಶ್ವನಾಥ್ ಮತ್ತು ಸಾ.ರಾ.ಮಹೇಶ್
ಅಕ್ಟೋಬರ್ 17ರಂದು ಎಚ್ ವಿಶ್ವನಾಥ್ ಮತ್ತು ಸಾ.ರಾ.ಮಹೇಶ್ ಚಾಮುಂಡಿ ತಾಯಿಯ ಮೆಟ್ಟಲೇರಿದ್ದರು. ಇದೂ, ಹಣಕಾಸಿಗೆ ಸಂಬಂಧ ಪಟ್ಟ ವಿಚಾರವೇ ಹೊರತು, ರಾಜ್ಯ ಅಭಿವೃದ್ದಿಯ ವಿಚಾರವಲ್ಲ. "ಹೆಚ್. ವಿಶ್ವನಾಥ್ 25 ಕೋಟಿ ಹಣಕ್ಕೆ ತಮ್ಮನ್ನು ಮಾರಿಕೊಂಡಿದ್ದಾರೆ" ಎನ್ನುವುದು ಮಹೇಶ್ ಆರೋಪವಾಗಿತ್ತು. ಚಾಮುಂಡಿ ಸನ್ನಿಧಾನದಲ್ಲಿ ಆಣೆಪ್ರಮಾಣ ಎಂದು ಒಬ್ಬರು ಇನ್ನೊಬ್ಬರಿಗೆ ಸವಾಲು ಎಸೆದರು. ಕೊನೆಗೆ, ಆಣೆಪ್ರಮಾಣ ನಡೆಯಲಿಲ್ಲ.