ಶಾಸಕರನ್ನು ಹುಡುಕಿಕೊಡಿ: ಪೊಲೀಸ್ ಠಾಣೆಗೆ ಕಾರ್ಯಕರ್ತರ ದೂರು
ಬೆಂಗಳೂರು, ಜುಲೈ 17: ದೋಸ್ತಿ ಸರ್ಕಾರದ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡಿ ಮುಂಬೈ ಸೇರಿರುವ ಶಾಸಕರು ಸರ್ಕಾರಕ್ಕೆ ಯಾವ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎನ್ನುತ್ತಿದ್ದಾರೆ. ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂಬ ಆರೋಪ ಸೇರಿದಂತೆ ಶಾಸಕರು ತಮ್ಮ ರಾಜೀನಾಮೆಗೆ ಹಲವು ಕಾರಣಗಳನ್ನು ನೀಡುತ್ತಿದ್ದಾರೆ.
ಆದರೆ, ಅತ್ತ ಜನರು ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಕ್ಷೇತ್ರದಲ್ಲಿ ಶಾಸಕರು ಸಿಗದೆ ಗೋಳಾಡುತ್ತಿದ್ದಾರೆ. ಅತೃಪ್ತ ಶಾಸಕರ ವಿರುದ್ಧ ಸಿಟ್ಟಿಗೆದ್ದಿರುವ ಕೆಲವು ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಶಾಸಕರು ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಆರ್.ಶಂಕರ್ ಬೇಡಿಕೆ ತಿರಸ್ಕರಿಸಿದ ಸ್ಪೀಕರ್ ರಮೇಶ್ ಕುಮಾರ್!
ಶಾಸಕರಾದ ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ ಸೇರಿದಂತೆ ವಿವಿಧ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಕಣ್ಮರೆಯಾಗಿದ್ದಾರೆ, ಅವರನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರನ್ನು ಹುಡುಕಿಕೊಡುವಂತೆ ಜಿಲ್ಲಾ ಕಾಂಗ್ರೆಸ್ ಹೊಸಪೇಟೆ ಪಟ್ಟಣ ಠಾಣೆಗೆ ದೂರು ನೀಡಿದೆ. ಕ್ಷೇತ್ರದಲ್ಲಿ ಬರಗಾಲವಿದೆ. ಕುಡಿಯುವ ನೀರಿನ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಅಪಹರಿಸಿ, ಬಲವಂತವಾಗಿ ಕೂಡಿಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ರೆಸಾರ್ಟ್ ರಾಜಕಾರಣದ ವಿರುದ್ಧ ರಸ್ತೆಗಿಳಿದು ರವಿ ಬೆಳಗೆರೆ ಧರಣಿ ಸತ್ಯಾಗ್ರಹ
ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ಕುರಿತೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಣ್ಣ ಇರಬಗೇರಾ ಅವರು ಇದೇ ರೀತಿ ದೂರು ಸಲ್ಲಿಸಿದ್ದಾರೆ. ಶಾಸಕರನ್ನು ಸಂಪರ್ಕಿಸುವ ಪ್ರಯತ್ನಗಳು ಸಫಲವಾಗಿಲ್ಲ ಎಂದು ಹೇಳಿದ್ದಾರೆ.
'ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಕಣ್ಮರೆಯಾಗಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿ ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚಿಸಬೇಕಿದ್ದ ಅವರು ಎಲ್ಲಿಗೋ ಹೋಗಿದ್ದಾರೆ. ಅವರನ್ನು ಹುಡುಕಿಕೊಡಬೇಕು' ಎಂದು ಕಾಂಗ್ರೆಸ್ ಮುಖಂಡರು ದೂರು ನೀಡಿದ್ದಾರೆ.
ವಿಶ್ವಾಸಮತಯಾಚನೆ : ಸದನದಲ್ಲಿ ಏನೆಲ್ಲ ಘಟನೆಗಳು ನಡೆಯಲಿವೆ?
ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಅವರು ಕೆಲವು ದಿನಗಳಿಂದ ಕಾಣೆಯಾಗಿದ್ದು, ಕ್ಷೇತ್ರದ ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ಆಘಾತವಾಗಿದೆ. ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಭದ್ರತೆ ಬಗ್ಗೆ ಆತಂತ ಉಂಟಾಗಿದೆ. ಅವರಿಗೆ ಬೆದರಿಕೆ ಒಡ್ಡಿ ಅಕ್ರಮ ಬಂಧನದಲ್ಲಿ ಇರಿಸಿರುವ ಶಂಕೆ ಇದೆ ಎಂದು ಪೊಲೀಸ್ ಆಯುಕ್ತರ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ.