ಆಗಸ್ಟ್ 07: ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಸಮಗ್ರ ವರದಿ!
ಬೆಂಗಳೂರು, ಆ. 07: ಅಂತೂ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ಶನಿವಾರ ಅಸ್ತಿತ್ವಕ್ಕೆ ಬಂದಿರುವುದು, ರಾಜ್ಯದಲ್ಲಿನ ಇಂದಿರಾ ಕ್ಯಾಂಟೀನ್ಗಳ ಹೆಸರು ಬದಲಾವಣೆ ವಿಚಾರದಲ್ಲಿ ಆಡಳಿತ-ವಿರೋಧ ಪಕ್ಷಗಳ ನಾಯಕರ ಕೆಸರೆರಚಾಟ, ಭಾರತೀಯರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದ ಅಥ್ಲೀಟ್ ನೀರಜ್ ಚೋಪ್ರಾಗೆ ಒಂದು ಕ್ಷಣ ಪಕ್ಷಬೇದ ಮರೆತು ಒಂದಾಗಿ ಅಭಿನಂದಿಸಿದ ರಾಜ್ಯದ ರಾಜಕಾರಣಿಗಳು, ಎಲ್ಲರಿಗೂ ಖಾತೆ ಹಂಚುವ ಮೂಲಕ ನಿರಾಳರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಬಯಸಿದ ಖಾತೆ ಸಿಗದಿದ್ದಕ್ಕೆ ಅಸಮಾಧಾನ ಹೊರಹಾಕಿದ ನೂತನ ಸಚಿವರು.
ಜೊತೆಗೆ ಹೆಸರು ಬದಲಾವಣೆ ವಿಚಾರ ಶನಿವಾರ ಎಲ್ಲಕ್ಕಿಂತ ಹೆಚ್ಚು ಚರ್ಚೆಗೆ ಬಂದಿದೆ. ಶುಕ್ರವಾರ ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಪ್ರಕಟಿಸಿದ್ದ ನಿರ್ಧಾರದ ಮುಂದುವರೆದ ಭಾಗವಾಗಿ ಇಂದೂ ಕೂಡ ಜನಪ್ರತಿನಿಧಿಗಳಲ್ಲಿ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಇದೇ ವೇಳೆಯಲ್ಲಿ ಉಳಿದಿರುವ ಂದು ವಾರದ ಲೋಕಸಭಾ ಕಲಾಪದಲ್ಲಿ ಭಾಗವಹಿಸುವಂತೆ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮೊದಲಿಗೆ ನೋಡೋಣ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು:
ಅಂತೂ ಇಂತು ಶನಿವಾರಕ್ಕೆ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಯ ಎಲ್ಲ ಕೆಲಸಗಳನ್ನು ಬಿಜೆಪಿ ಹೈಕಮಾಂಡ್ ಮಾಡಿ ಮುಗಿಸಿದೆ. ಆ ಮೂಲಕ ಮುಂದೆ ರಾಜ್ಯದಲ್ಲಿ ಬಿಜೆಪಿಯನ್ನು ಮುನ್ನಡೆಸುವವರು ಯಾರು? ಎಂಬ ಬಿಜೆಪಿ ಕಾರ್ಯಕರ್ತರ ಪ್ರಶ್ನೆಗೆ ಸಂಪೂರ್ಣ ಉತ್ತರವನ್ನು ಕೊಟ್ಟಿದೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗಯೇ 2024ರ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿಯನ್ನು ಬಿಜೆಪಿ ಆರಂಭಿಸಿದೆ.
ಶುಕ್ರವಾರವೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ ಕೆಲವು ವಿಚಾರಗಳಲ್ಲಿ ಒಮ್ಮತ ಮೂಡದೇ ಇದ್ದುದರಿಂದ ಇವತ್ತು ಅಂದರೆ ಶನಿವಾರ ಮಧ್ಯಾಹ್ನ ಎಲ್ಲ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಮುಗಿಸಿದರು.
ಶುಕ್ರವಾರವೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ ಕೆಲವು ವಿಚಾರಗಳಲ್ಲಿ ಒಮ್ಮತ ಮೂಡದೇ ಇದ್ದುದರಿಂದ ಇವತ್ತು ಅಂದರೆ ಶನಿವಾರ ಮಧ್ಯಾಹ್ನ ಎಲ್ಲ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಮುಗಿಸಿದರು. ಆದರೆ ಖಾತೆ ಹಂಚಿಕೆ ಮಾಡಿದ ಬಳಿಕ ನಿರೀಕ್ಷೆಯಂತೆ ಅಸಮಾಧಾನ ವ್ಯಕ್ತವಾಯ್ತು. ಸಚಿವ ಆನಂದ್ ಸಿಂಗ್ ಹಾಗೂ ಇತರರು ಖಾತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲ 29 ಸಚಿವರಿಗೆ ಖಾತೆ ಹಂಚಿದ ಬಳಿಕ ರೇಸ್ ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳಿಂದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ಜೊತೆಗೆ ಕೋವಿಡ್ ನಿಂದಾಗಿರುವ ಅರ್ಥಿಕ ನಷ್ಟದ ಬಗ್ಗೆ ಚರ್ಚೆ ನಡೆದರು. ಆ ಬಳಿಕ ಕೆಲವು ಸಚಿವರ ಅಸಮಾಧಾನಕ್ಕೆ ತಣ್ಣನೆಯ ಪ್ರತಿಕ್ರಿಯೆ ನೀಡುವ ಮೂಲಕ ಸಿಎಂ ಬೊಮ್ಮಾಯಿ ಅಸಮಾಧಾನ ತಣಿಸಿದರು. ಈ ಬಗ್ಗೆ ಮಾತನಾಡಿದ ಅವರು, "ಕೆಲವರಿಗೆ ಅಸಮಾಧಾನ ಇರೋದು ನಿಜ. ಆದರೆ ಎಲ್ಲರನ್ನೂ ಕರೆದು ಮಾತಾಡಿ ಬಗೆ ಹರಿಸುತ್ತೇನೆ. ಬದಲಾವಣೆ ತರಬೇಕು ಅಂತ ಹೊಸಬರಿಗೆ ಮಹತ್ವದ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಎಲ್ಲ ಮಂತ್ರಿಗಳಿಗೂ ಮುಂದೆ ಅವರವರ ಖಾತೆಗಳನ್ನು ಉತ್ತಮವಾಗಿ ನಿಭಾಯಿಸಲಿ" ಎಂದು ಸಲಹೆ ನೀಡಿದರು.
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ಕೊಡಲಾಗಿದೆ. ಈ ಹಿಂದೆ 2011ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಾಗಲೂ ಹೀಗೆಯೆ ಸಂಪುಟ ದರ್ಜೆ ಸ್ಥಾನಮಾನ ಕೊಡಲಾಗಿತ್ತು. ಆಗಿ ಸಿಎಂ ಆಗಿದ್ದ ಡಿ.ವಿ. ಸದಾನಂದಗೌಡರು ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ಸ್ಥಾನಮಾನ ಕೊಟ್ಟಿದ್ದರು. ಜೊತೆಗೆ ರೇಸ್ಕೋರ್ಸ್ ರಸ್ತೆಯ ನಿವಾಸದಲ್ಲಿಯೆ ವಾಸ್ತವ್ಯ ಮಾಡಲು ಅವಕಾಶ ಕೊಡಲಾಗಿತ್ತು.
ಅದರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದದರಾಮಯ್ಯ ಅವರು, "ಮೇಜರ್ ಧ್ಯಾನ್ಚಂದ್ ಅವರು ಶ್ರೇಷ್ಠ ಹಾಕಿ ಪಟು ಎಂಬುದರಲ್ಲಿ ಎರಡು ಮಾತಿಲ್ಲ. ಬೇರೆ ಪ್ರಶಸ್ತಿಗೆ ಅವರ ಹೆಸರು ಇಡಬಹುದಾಗಿತ್ತು. ರಾಜೀವ್ ಗಾಂದಿ ಹೆಸರೇಕೆ ಬದಲಿಸಬೇಕು. ದೇಶಕ್ಕಾಗಿ ಸೇವೆ ಸಲ್ಲಿಸಿದವರ ನೆನಪಿಗೆ ರಾಷ್ಟ್ರೀಯ ನಾಯಕರುಗಳ ಹೆಸರುಗಳನ್ನು ನಾಮಕರಣ ಮಾಡಲಾಗುತ್ತದೆ" ಎಂದು ಸಮರ್ಥಿಸಿಕೊಂಡರು.
ಇದೇ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟದ ಕುರಿತು ಯಾವುದೇ ನಿರೋಕ್ಷೆಗಳಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಹೊಸ ಸಚಿವ ಸಂಪುಟದ ಬಗ್ಗೆ ಯಾವ ಆಶಾ ಭಾವನೆಯೂ ಇಲ್ಲ. ಬಹುತೇಕ ಹಳಬರೇ ಸಂಪುಟದಲ್ಲಿದ್ದಾರೆ. ಹೀಗಾಗಿ ಹೊಸದನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಮಂತ್ರಿ ಮಂಡಲದಲ್ಲಿ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ಇಲ್ಲ. ಹಳೆಯ ಮೈಸೂರು ಭಾಗಕ್ಕೆ ಅವಕಾಶ ಕಡಿಮೆಯಾಗಿದೆ. ರಾಜ್ಯದಲ್ಲಿ ಶೇ. 24.1 ರಷ್ಟು ದಲಿತರಿದ್ದಾರೆ. ಆದರೆ, ಪರಿಶಿಷ್ಟರಿಗೆ ನಾಲ್ಕು ಸ್ಥಾನ ಮಾತ್ರ ನೀಡಲಾಗಿದೆ. ಭೋವಿಗಳಿಗೆ, ಕೊರಚ, ಕೊರಮರಿಗೆ ಅವಕಾಶ ಕೊಟ್ಟಿಲ್ಲ. ನಾವಿದ್ದಾಗ ಪ್ರಮಖ ಖಾತೆಗಳನ್ನು ಆ ಸಮುದಾಯದವರಿಗೆ ನೀಡಲಾಗಿತ್ತು. ಒಟ್ಟಾರೆ ಸಂಪುಟದಲ್ಲಿ ಪ್ರಾದೇಶಿಕ ಸಮೋತಲನ ಹಾಗೂ ಸಾಮಾಜಿಕ ನ್ಯಾಯಕ್ಕೆ ಅವಕಾಶವೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜೊತೆಗೆ ತಮ್ಮ ಆಪ್ತ ಜಮೀರ್ ಅಹ್ಮದ್ ಮೇಲೆ ಆಗಿದ್ದ ಇಡಿ ದಾಳಿಯ ಬಗ್ಗೆಯೂ ಸಿದ್ದರಾಮಯ್ಯ ಮಾತನಾಡಿದ್ದಾರೆ.
"ಸಾಮಾನ್ಯವಾಗಿ ಐಟಿ ದಾಳಿಯಾದ ಬಳಿಕ ಅವರ ಶಿಫಾರಸು ಪ್ರಕಾರ ಇಡಿಯವರು ದಾಳಿ ಮಾಡುತ್ತಾರೆ. ಅದು ಆದಾಯ ಮೀರಿ ಆಸ್ತಿ ಗಳಿಸಿದ್ದರೆ, ಅಕ್ರಮವಾಗಿ ಹಣ ವರ್ಗಾವಣೆ ಅಥವಾ ದುರುಪಯೋಗವಾಗಿದ್ದರೆ ಮಾತ್ರ. ಆದರೆ, ಜಮೀರ್ ಅಹಮದ್ ಅವರ ಮನೆಯ ಮೇಲೆ ಇಡಿಯವರು ಏಕಾಏಕಿ ದಾಳಿ ನಡೆಸಿದ್ದಾರೆ. ಇದು ರಾಜಕೀಯ ಪ್ರೇರಿತರ ಹಾಗೂ ಇದರ ಹಿಂದೆ ದುರುದ್ದೇಶ ಅಡಗಿದೆ ಎಂದು ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಮೀರ್ ಅಹಮದ್ ಅವರು ಮನೆ ಕಟ್ಟಿದ್ದಾರೆ ಅಷ್ಟೆ. ಹಣ ದುರುಪಯೋಗ ಅಥವಾ ಅಕ್ರಮ ವರ್ಗಾವಣೆ ಎಲ್ಲಿ ಆಗಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬಿಜೆಪಿಯವರ ಮೇಲೆ ಏಕೆ ದಾಳಿ ನಡೆಯುವುದಿಲ್ಲ. ಅವರೆಲ್ಲ ಬಡವರೇ, ಬಿಪಿಎಲ್ ಕಾರ್ಡುದಾರರೇ? ಕಾಂಗ್ರೆಸ್ಸಿಗರನ್ನೇ ಟಾರ್ಗೆಟ್ ಮಾಡುವುದೇಕೆ? ಜಮೀರ್ ಅಹಮದ್ ಅವರು ನನ್ನ ಆಪ್ತರು. ಅದೇ ರೀತಿ ಹಲವಾರು ಮಂದಿ ನನಗೆ ಆಪ್ತರಿದ್ದಾರೆ. ಬಿಜೆಪಿಯಲ್ಲಿಯೂ ಇದ್ದಾರೆ. ಆದರೆ, ಸ್ನೇಹ ಬೇರೆ, ರಾಜಕೀಯ ಬೇರೆ ಎಂದು ಸಿದ್ದರಾಮಯ್ಯ ಅವರು ಹೇಳಿರುವುದು ಕುತೂಹಲ ಮೂಡಿಸಿದೆ.