ಬಾಬರಿ ಮಸೀದಿ ತೀರ್ಪು; ಕರ್ನಾಟಕದ ನಾಯಕರ ಪ್ರತಿಕ್ರಿಯೆ
ಬೆಂಗಳೂರು, ಸೆಪ್ಟೆಂಬರ್ 30 : ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಪ್ರಕಟಿಸಿದೆ. ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
ಕರ್ನಾಟಕದ ವಿವಿಧ ನಾಯಕರು ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಸತ್ಯ ಮೇವ ಜಯತೆ' ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದ್ದಾರೆ. ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಕೆ. ಯಾದವ್ ಬುಧವಾರ ತೀರ್ಪು ಪ್ರಕಟಿಸಿದರು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಸ್ವಾಗತಿಸಿದ ಬಿಜೆಪಿ ಭೀಷ್ಮ
ಪ್ರಕರಣದ ತೀರ್ಪನ್ನು ನೀಡುವಾಗ ನ್ಯಾಯಾಲಯ 1992ರಲ್ಲಿ ನಡೆದ ಮಸೀದಿ ಧ್ವಂಸವು ಪೂರ್ವ ನಿಯೋಜಿತವಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣದ ಎಲ್ಲಾ 32 ಆರೋಪಿಗಳು ನಿರ್ದೋಷಿಗಳು ಎಂದು ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಪ್ರಕಟ, ಅಡ್ವಾಣಿಗೆ ಖುಲಾಸೆ
ಈ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್. ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಮುಂತಾದವರು ಆರೋಪಿಗಳಾಗಿದ್ದರು. ಕಲ್ಯಾಣ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಾಬರಿ ಮಸೀದಿ ಧ್ವಂಸ ಪ್ರಕರಣ ನಡೆದಿತ್ತು.
Babri Masjid Demolition Verdict LIVE: ಬಾಬ್ರಿ ಮಸೀದಿ ಧ್ವಂಸ ಕೇಸ್ ತೀರ್ಪು ಸಂತಸ ಮೂಡಿಸಿದ: ಅಡ್ವಾಣಿ
ಮುಖ್ಯಮಂತ್ರಿಗಳ ಪ್ರತಿಕ್ರಿಯೆ
"ಇದೊಂದು ಪೂರ್ವ ನಿಯೋಜಿತ ಕೃತ್ಯವಲ್ಲ ಎಂದು ಕೋರ್ಟ್ ಹೇಳಿದೆ. ಸತ್ಯಕ್ಕೆ ಜಯ ಸಿಕ್ಕಿದೆ, ಈ ಹೋರಾಟದಲ್ಲಿ ನಾನು ಪ್ರತ್ಯಕ್ಷ ಸಾಕ್ಷಿ ಇದ್ದೆ. ಈ ತೀರ್ಪಿ ನನಗೆ ಸಂತಸ ತಂದಿದೆ. ಹೋರಾಟಗಾರರಿಗೆ ಯಾವತ್ತೂ ಅನ್ಯಾಯ ಆಗಲ್ಲ ಎಂದು ಸಾಬೀತಾಗಿದೆ" ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
"ಅಡ್ವಾಣಿ ಅವರ ಅಂದಿನ ಐತಿಹಾಸಿಕ ಭಾಷಣ ನಮಗೆಲ್ಲಾ ಪ್ರೇರಣೆ ಆಗಿತ್ತು. ಅಂತಹ ಮಹಾನ್ ವ್ಯಕ್ತಿಗೆ ಇಂದು ನ್ಯಾಯ ಸಿಕ್ಕಿದೆ. ಹೋರಾಟಗಾರರಿಗೆ ನ್ಯಾಯ ಶತಸಿದ್ಧ ಎನ್ನೋದು ಸಾಬೀತಾಗಿದೆ" ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಪಕ್ಷವು ಸ್ವಾಗತಿಸುತ್ತದೆ
ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಜನ ಆಪಾದಿತರನ್ನು ಕೋರ್ಟ್ ದೋಷಮುಕ್ತಗೊಳಿಸಿದೆ. ಪ್ರಕರಣ ಪೂರ್ವಯೋಜಿತವಲ್ಲ ಅನ್ನೋದನ್ನು ತೀರ್ಪು ಎತ್ತಿ ಹಿಡಿದಿದೆ. ತೀರ್ಪನ್ನು ಬಿಜೆಪಿ ಪಕ್ಷವು ಸ್ವಾಗತಿಸುತ್ತದೆ ಇದನ್ನು ನೆಪವಾಗಿಟ್ಕೊಂಡು 1992ರಲ್ಲಿ ಬಿಜೆಪಿಯ ನಾಲ್ಕು ಸರ್ಕಾರಗಳನ್ನು ವಜಾ ಮಾಡುವ ಕೆಲಸ ನಡೆಯಿತು. ಸತ್ಯವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಆವತ್ತು ನಾಲ್ಕು ಬಿಜೆಪಿ ಸರ್ಕಾರಗಳನ್ನು ವಜಾ ಮಾಡಿದ ಕಾಂಗ್ರೆಸ್ ದೇಶದ ಜನತೆಯ ಕ್ಷಮೆ ಕೇಳಲಿ ಇತಿಹಾಸ ಬಲ್ಲವರಿಗೆ ವಾಸ್ತವಿಕ ಸತ್ಯ ಗೊತ್ತಿದೆ ಬಿಜೆಪಿಯ ಅಜೆಂಡಾದಲ್ಲಿ ಮಸೀದಿ ಒಡೆಯುವುದು ಇರಲಿಲ್ಲ" ಎಂದು ಹೇಳಿದರು.
ಎನ್. ರವಿ ಕುಮಾರ್ ಹೇಳಿಕೆ
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದು, "ಬಿಜೆಪಿ, ವಿಶ್ವ ಹಿಂದೂ ಪರಿಷತ್ಗೆ ಇಂದು ಐತಿಹಾಸಿಕ ದಿನ. ಬಾಬರಿ ಮಸೀದಿ ಕುಸಿದು ಬೀಳಲು ಬಿಜೆಪಿ ನಾಯಕರ ಪಾತ್ರ ಇಲ್ಲ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಮಸೀದಿ ಕೆಡವಲು ಹೋದ ಕರ ಸೇವಕರನ್ನು ತಡೆಯುವ ಪ್ರಯತ್ನ ಮಾಡಿದರು. ಅಡ್ವಾಣಿ, ಉಮಾಭಾರತಿ, ಕಲ್ಯಾಣ ಸಿಂಗ್ ಕರ ಸೇವಕರನ್ನು ತಡೆದರು ಎಂದೂ ಉಲ್ಲೇಖಿಸಿದೆ. ದೋಷ ಮುಕ್ತ ನಾಯಕತ್ವ ರಾಷ್ಟ್ರದಲ್ಲಿ ಇತ್ತು ಎಂಬ ಸಂದೇಶ ನೀಡಿದೆ" ಎಂದು ಹೇಳಿದರು.
|
ಸಚಿವ ಶ್ರೀ ರಾಮುಲು ಪ್ರತಿಕ್ರಿಯೆ
ಆರೋಗ್ಯ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, "ಬಾಬರಿ ಮಸೀದಿ ಧ್ವಂಸ ಪ್ರಕರಣ ಪೂರ್ವ ನಿಯೋಜಿತವಲ್ಲ, ಈ ಆರೋಪದ ಬಗ್ಗೆ ಯಾವುದೇ ಪ್ರಬಲ ಸಾಕ್ಷ್ಯಾಧಾರ ಇಲ್ಲ. ಅದೊಂದು ಆಕಸ್ಮಿಕ ಘಟನೆ ಅಷ್ಟೇ ಎಂದು ಲಖನೌ ಸಿಬಿಐ ವಿಶೇಷ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಸತ್ಯ ಮೇವ ಜಯತೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಎಲ್ಲರೂ ಶಾಂತಿ ಕಾಪಾಡೋಣ
"ಬಾಬರಿ ಮಸೀದಿ ಪ್ರಕರಣದಲ್ಲಿ ನಮ್ಮ ಹಿರಿಯ ನಾಯಕರಾದ ಶ್ರೀ. ಎಲ್. ಕೆ. ಅಡ್ವಾಣಿ, ಶ್ರೀ ಮುರಳಿ ಮನೋಹರ ಜೋಶಿ, ಉಮಾಭಾರತಿ ಹಾಗೂ ಇತರರ ಮೇಲೆ ಇದ್ದ ಪ್ರಕರಣಕ್ಕೆ ಇಂದು ಲಕ್ನೋದ CBI ನ್ಯಾಯಾಲಯವು ತೀರ್ಪು ನೀಡಿರುವುದು ಸ್ವಾಗತಾರ್ಹ. 28 ವರ್ಷಗಳ ನಂತರ ಅಡ್ವಾಣಿಯವರು ಅರೋಪ ಮುಕ್ತರಾಗಿದ್ದು ಮತ್ತು ಸುಪ್ರೀಂಕೋರ್ಟ್ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಐತಿಹಾಸಿಕ ತೀರ್ಪಾಗಿರುತ್ತದೆ. ಇದು ಭಾರತದ ಜನರ ಭಾವನೆಗಳಿಗೆ ಸ್ಪಂದಿಸಿದಂತಾಗಿದ್ದು, ಭಾರತದ ಎಲ್ಲ ನಾಗರಿಕರು ಈ ತೀರ್ಪನ್ನು ಒಪ್ಪಿಕೊಂಡ ಶಾಂತಿ ಸೌರ್ಹಾದತೆಯನ್ನು ಕಾಪಾಡಿಕೊಳ್ಳುವಂತೆ ವಿನಂತಿಸುತ್ತೇನೆ" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
|
ಸುರೇಶ್ ಕುಮಾರ್ ಪ್ರತಿಕ್ರಿಯೆ
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ವಿಳಂಬವಾದರೂ ಸಂಪೂರ್ಣ ನ್ಯಾಯ ನೀಡಿದ ತೀರ್ಪಿಗೆ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.
Recommended Video
|
ನಳೀನ್ ಕುಮಾರ್ ಕಟೀಲ್ ಹೇಳಿಕೆ
"ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕುರಿತು ಸಿಬಿಐ ವಿಶೇಷ ನ್ಯಾಯಾಲಯ ಐತಿಹಾಸಿಕ ಅಂತಿಮ ತೀರ್ಪು ನೀಡಿದೆ. ಈ ಮಹತ್ವದ ತೀರ್ಪನ್ನು ಸ್ವಾಗತಿಸೋಣ" ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.