ರಾಷ್ಟ್ರೀಯ ವೈದ್ಯರ ದಿನ: ವೈದ್ಯರಿಗೆ ಕರುನಾಡು ನಾಯಕರ ಕೃತಜ್ಞತೆ ವೈಖರಿ
ನವದೆಹಲಿ, ಜುಲೈ 01: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಗಳ ನಡುವೆ ಸಾರ್ವಜನಿಕರ ಜೀವ ಉಳಿಸುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ವೈದ್ಯರನ್ನು ಗೌರವಿಸುವ ಉದ್ದೇಶದಿಂದ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಭಾರತದಲ್ಲಿ 1991ರಿಂದ ಪ್ರತಿವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಕೊವಿಡ್-19 ಪಿಡುಗಿನ ನಡುವೆ ಎರಡು ವರ್ಷಗಳಲ್ಲಿ ವೈದ್ಯರು ತೋರಿದ ಬದ್ಧತೆ ಮತ್ತು ನಿಸ್ವಾರ್ಥ ಸೇವೆ ವೈದ್ಯರ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದೆ.
ಜುಲೈ 1 ರಾಷ್ಟ್ರೀಯ ವೈದ್ಯರ ದಿನ: ಈ ದಿನದ ವಿಶೇಷತೆ ಮತ್ತು ಮಹತ್ವ?
ದೇಶದ ಶ್ರೇಷ್ಠ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಬಿಧನ್ ಚಂದ್ರ ರಾಯ್ ಜನ್ಮದಿನ ಹಾಗೂ ಪುಣ್ಯಸ್ಮರಣೆ ಜ್ಞಾಪಕಾರ್ಥವಾಗಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ವೈದ್ಯಕೀಯ ರಂಗದಲ್ಲಿ ನಿಸ್ವಾರ್ಥ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ವೈದ್ಯರನ್ನು ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ರಾಷ್ಟ್ರೀಯ ವೈದ್ಯರ ದಿನ ಎಂದು ಆಚರಿಸಲಾಗುತ್ತದೆ. ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ವೈದ್ಯರ ಕರ್ತವ್ಯ ಮತ್ತು ಬದ್ಧತೆಗೆ ಸಿಎಂ ಕೃತಜ್ಞತೆ
"ರಾಷ್ಟ್ರೀಯ ವೈದ್ಯರ ದಿನದಂದು, ಆರೋಗ್ಯಕರ ಭಾರತ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ವೈದ್ಯಕೀಯ ಸಮುದಾಯಕ್ಕೆ ನಮಸ್ಕರಿಸುತ್ತೇನೆ. ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ವೈದ್ಯರ ಶ್ರಮ, ಬದ್ಧತೆ, ಪ್ರಾಮಾಣಿಕತೆ ಹಾಗೂ ಸಹಾನುಭೂತಿಗೆ ನಾವು ನಿಜವಾಗಿಯೂ ಋಣಿಯಾಗಿದ್ದೇವೆ," ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ವೈದ್ಯರ ನಿಸ್ವಾರ್ಥ ತ್ಯಾಗಕ್ಕೆ ಸಿದ್ದರಾಮಯ್ಯ ಶ್ಲಾಘನೆ
"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಎಲ್ಲಾ ವೈದ್ಯರು ಮಾಡಿದ ನಿಸ್ವಾರ್ಥ ತ್ಯಾಗ ಅತ್ಯಂತ ಶ್ಲಾಘನೀಯ. ಅವರು ತಮ್ಮನ್ನು ತಾವು ಅಪಾಯಕ್ಕೆ ತಳ್ಳುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಿದ್ದಾರೆ," ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ವೈದ್ಯರ ಸೇವೆ ಶ್ಲಾಘನೆಗೆ ಪದಗಳೇ ಸಾಲದು: ಹೆಚ್ ಡಿಕೆ
"ಆತ್ಮೀಯ ವೈದ್ಯರೇ, ನಿಮಗೆ ಧನ್ಯವಾದ ಅರ್ಪಿಸುವುದಕ್ಕೆ ಪದಗಳನ್ನು ಹುಡುಕುವುದೇ ಕಷ್ಟಸಾಧ್ಯವಾಗುತ್ತದೆ. ನಿಮ್ಮ ಮಾನವೀಯ ಹಾಗೂ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸಲು ಯಾವುದೇ ಪದಗಳಿಲ್ಲ. ಜೀವಗಳಿಗಾಗಿ ಜೀವನವನ್ನು ಮುಡಿಪಾಗಿಟ್ಟ ಎಲ್ಲಾ ವೈದ್ಯರಿಗೂ ವೈದ್ಯರ ದಿನದ ಶುಭಾಶಯಗಳು!," ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ವೈದ್ಯರಿಗೆ ಕೃತಜ್ಞತೆಯ ಟ್ವೀಟ್ ಮಾಡಿದ ಡಾ. ಸುಧಾಕರ್
ವೈದ್ಯರ ದಿನದಂದು ಸಾಂಕ್ರಾಮಿಕ ಪಿಡುಗಿನ ನಡುವೆ ರೋಗಗಳನ್ನು ನೋಡಿಕೊಳ್ಳುವ ಮತ್ತು ಗುಣಪಡಿಸುವಲ್ಲಿ ಆದರ್ಶಪ್ರಾಯ ಸೇವೆ ಸಲ್ಲಿಸಲು ಶ್ರಮಿಸುತ್ತಿರುವ ಎಲ್ಲಾ ವೈದ್ಯರಿಗೆ ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ಅರ್ಪಿಸೋಣ. ಭಾರತೀಯ ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ ಪೌರಾಣಿಕ ವೈದ್ಯ ಭಾರತ್ ರತ್ನ ಡಾ.ಬಿ.ಸಿ ರಾಯ್ ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ," ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್
"ರಾಷ್ಟ್ರೀಯ ವೈದ್ಯರ ದಿನದ ಶುಭಾಷಯಗಳು. ಕೋವಿಡ್ ಸಂಕಷ್ಟದ ಸಮಯದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಾರ್ವಜನಿಕ ಸೇವೆ ಸಲ್ಲಿಸಿದ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಅನಂತ ಪ್ರಣಾಮಗಳು ಹಾಗೂ ಧನ್ಯವಾದಗಳು," ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಟ್ವೀಟ್ ಮಾಡಿದ್ದಾರೆ.
ವೈದ್ಯರಿಗೆ ಶಾಸಕ ಎಂ ಪಿ ರೇಣುಕಾಚಾರ್ಯ ಧನ್ಯವಾದ
"ವೈದ್ಯೋ ನಾರಾಯಣೋ ಹರಿಃ, ಕೊವಿಡ್-19 ವಿರುದ್ಧದ ಹೋರಾಟದ ಸಂದರ್ಭದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಧನ್ಯವಾದಗಳು," ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.
|
ವೈದ್ಯರನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳುವಂತೆ ಆಗ್ರಹ
ಧನ್ಯವಾದಗಳು ವೈದ್ಯರೇ, ಈ ಸಮಯದಲ್ಲಿ ದಣಿವರಿಯದ ರೀತಿಯಲ್ಲಿ ಪ್ರಾಣಗಳನ್ನು ಉಳಿಸುವುದಕ್ಕಾಗಿ ನೀವು ಶ್ರಮಿಸುತ್ತಿದ್ದೀರಿ. ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಅಂಥ ವೈದ್ಯರಿಗೆ ಆರೋಗ್ಯ ಭದ್ರತೆ, ಸುರಕ್ಷತೆ ಹಾಗೂ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರವು ಕ್ರಮ ತೆಗೆದುಕೊಳ್ಳಬೇಕು," ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.
Recommended Video
ರಾಷ್ಟ್ರೀಯ ವೈದ್ಯರ ದಿನದ ಮಹತ್ವ ಮತ್ತು ಇತಿಹಾಸ
ಭಾರತದಲ್ಲಿ 1991ರಿಂದ ರಾಷ್ಟ್ರೀಯ ವೈದ್ಯ ದಿನ ಆಚರಣೆ ಶುರು ಮಾಡಲಾಗಿದೆ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಹಾಗೂ ಶ್ರೇಷ್ಠ ವೈದ್ಯ ಬಿಧನ್ ಚಂದ್ರ ರಾಯ್ ನೀಡಿರುವ ಕೊಡುಗೆ ಜ್ಞಾಪಕಾರ್ಥವಾಗಿ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯ ದಿನವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸ್ಥಾಪನೆಯಲ್ಲಿ ಬಿಧನ್ ಚಂದ್ರ ರಾಯ್ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆ ಅವರ ಜನ್ಮ ದಿನ ಮತ್ತು ಪುಣ್ಯಸ್ಮರಣೆ ದಿನವನ್ನೇ ರಾಷ್ಟ್ರೀಯ ವೈದ್ಯಕೀಯ ದಿನ ಎಂದು ಘೋಷಿಸಲಾಯಿತು.