ಕೈ ಶಾಸಕರ ರಾಜೀನಾಮೆಯ ಹಿಂದೆ ಬಿಜೆಪಿಗೆ ಕಾಡುತ್ತಿರುವ ಭಯ?
Recommended Video
ಇಬ್ಬರು ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಕೂಡಲೇ ಪಡೆದುಕೊಂಡಿದ್ದ ರಾಜಕೀಯ ಕಾವು, ಅಮಾವಾಸ್ಯೆಯ ಕಾರಣಕ್ಕೆ ಅಷ್ಟೇ ವೇಗದಲ್ಲಿ ತಣ್ಣಗಾಗಿದೆ.
ರಾಜ್ಯ ರಾಜಕಾರಣದಲ್ಲಿ ಏನಾಗಬಹುದು, ಅತೃಪ್ತರ ಮುಂದಿನ ನಡೆ ಏನಿರಬಹುದು ಎನ್ನುವ ಖಚಿತ ಮಾಹಿತಿ ಯಾರಿಗೂ ಸಿಗುತ್ತಿಲ್ಲವಾದ್ದರಿಂದ, ಜೊತೆಗೆ ಅತೃಪ್ತರು ಕೂಡಾ ಏನು ಮಾಡಬೇಕು ಎನ್ನುವ ಗೊಂದಲದಲ್ಲಿ ಇರುವುದರಿಂದ ದಿನಕ್ಕೊಂದು ಸುದ್ದಿ ಹುಟ್ಟುತ್ತಿದ್ದೆ, ಹಾಗೇ ಸಾಯುತ್ತಿದೆ ಕೂಡಾ.
ಮತ್ತೆ ಮೋದಿಯನ್ನು ಹೊಗಳಿದ ಜಿಟಿ ದೇವೇಗೌಡ: ದಾಲ್ ಮೇ ಕಾಲಾ ಹೇ?
ರಿವರ್ಸ್ ಆಪರೇಷನ್ ಮಾಡಿ ನೋಡೋಣ ಎಂದು ಯಡಿಯೂರಪ್ಪ ಸವಾಲು ಎಸೆದಿದ್ದರೂ, ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆಯ ಬಗ್ಗೆ ಪ್ರತಿಕ್ರಿಯಿಸಲು ಬಿಜೆಪಿ ಮುಖಂಡರು ಹಿಂದೆ ಮುಂದೆ ನೋಡುತ್ತಿದ್ದಾರೆ.
ಬಿಜೆಪಿಯ ಐದು ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ: ಆರ್.ಬಿ.ತಿಮ್ಮಾಪುರ
ಇದಕ್ಕೆ ಬಿಜೆಪಿ ದೆಹಲಿ ಮುಖಂಡರ ಕಟ್ಟುನಿಟ್ಟಿನ ಫರ್ಮಾನು ಎನ್ನುವುದು ಒಂದು ಕಾರಣವಾದರೆ, ಟೆಲಿಫೋನ್ ಕದ್ದಾಲಿಕೆಯ ಭಯ ಬಿಜೆಪಿ ಮುಖಂಡರಿಗೆ ಕಾಡುತ್ತಿದೆಯೇ ಎನ್ನುವುದು ಇನ್ನೊಂದೆಡೆ.
ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಹೇಳಿಕೆ
ರಾಜೀನಾಮೆಯ ಹಿಂದೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಆರೋಪಿಸಿರುವುದರಿಂದ, ಬಿಜೆಪಿ ಮುಖಂಡರು ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ದಾರೆ. ಇದಲ್ಲದೇ, ಸಚಿವ ಡಿ ಕೆ ಶಿವಕುಮಾರ್ ಕೂಡಾ, ಬಿಜೆಪಿಯ ಚದುರಂಗದಾಟವನ್ನು ನಾನು ಬಲ್ಲೆ, ಬಿಜೆಪಿಯ ನನ್ನ ಸ್ನೇಹಿತರು ಏನು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದು ಹೇಳಿರುವುದರಿಂದ, ಬಿಜೆಪಿ ಮುಖಂಡರು ಅಳೆದುತೂಗಿ ಹೇಳಿಕೆಯನ್ನು ನೀಡುತ್ತಿದ್ದಾರೆ.
ಸದ್ಯದ ವಿದ್ಯಮಾನದಲ್ಲಿ ನಮ್ಮದು ಏನೂ ಇಲ್ಲ ಎನ್ನುತ್ತಿರುವ ಬಿಜೆಪಿ
ಇಬ್ಬರು, ಮೂವರು ರಾಜೀನಾಮೆ ನೀಡಿದರೆ, ಕುಮಾರಸ್ವಾಮಿ ಸರಕಾರಕ್ಕೆ ಏನೂ ಭಯವಿಲ್ಲದೇ ಇರುವುದರಿಂದ, ಬಿಜೆಪಿ ಮುಖಂಡರು ಸಮ್ಮಿಶ್ರ ಸರಕಾರದ ಪಾಲುದಾರ ಶಾಸಕರ ರಾಜೀನಾಮೆ ಪ್ರಹಸನದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಂತಿದೆ. ಸದ್ಯದ ವಿದ್ಯಮಾನದಲ್ಲಿ ನಮ್ಮದು ಏನೂ ಇಲ್ಲ ಎಂದು ಬಿಜೆಪಿಯವರು ಒತ್ತಿ ಒತ್ತಿ ಹೇಳುತ್ತಿದ್ದಾರೆ.
ಗುಪ್ತಚರ ಇಲಾಖೆ ಪ್ರತೀ ಬಿಜೆಪಿ ಶಾಸಕರ ಮೇಲೆ ನಿಗಾ ಇಡುವ ಸಾಧ್ಯತೆ
ಗುಪ್ತಚರ ಇಲಾಖೆ ಪ್ರತೀ ಬಿಜೆಪಿ ಶಾಸಕರ ಮೇಲೆ ನಿಗಾ ಇಡುವ ಸಾಧ್ಯತೆ ಇರುವುದರಿಂದ, ಆಪರೇಷನ್ ಕಮಲದ ಬಗ್ಗೆ ಚಕಾರವೆತ್ತಲು ಬಿಜೆಪಿ ಮುಖಂಡರು ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಿವಾಸದಲ್ಲಿ ಅಂತಹ ರಾಜಕೀಯ ಚಟುವಟಿಕೆಗಳೂ ನಡೆದಿಲ್ಲ.
ಬಿಜೆಪಿ ಮುಖಂಡರ ಫೋನ್ ಕದ್ದಾಲಿಕೆಯಾಗಬಹುದು ಎನ್ನುವ ಕಾರಣ
ಸದ್ಯದ ರಾಜಕೀಯ ವಿದ್ಯಮಾನಗಳಿಂದಾಗಿ, ಪ್ರಮುಖ ಬಿಜೆಪಿ ಮುಖಂಡರ ಫೋನ್ ಕದ್ದಾಲಿಕೆಯಾಗಬಹುದು ಎನ್ನುವ ಕಾರಣಕ್ಕಾಗಿ, ಬಿಜೆಪಿ ಅತ್ಯಂತ ಜಾಗರೂಕತೆಯಿಂದ ಹೆಜ್ಜೆಯಿಡುತ್ತಿದೆ ಎನ್ನುವ ಸುದ್ದಿಯಿದೆ. ಇದಕ್ಕೆ ಪೂರಕ ಎನ್ನುವಂತೆ, ಬಿಜೆಪಿಯ ನಡೆಯೂ ನಿಗೂಢವಾಗಿದೆ. ಸರಳ ಬಹುಮತಕ್ಕೆ ಸಂಖ್ಯಾಬಲ ಕಮ್ಮಿಯಾದ ನಂತರವಷ್ಟೇ ಬಿಜೆಪಿ ಅಧಿಕೃತವಾಗಿ ಆಖಾಡಕ್ಕೆ ಇಳಿಯಲಿದೆ ಎನ್ನುವ ಮಾಹಿತಿಯಿದೆ.
ಸಿಎಂ ಕುಮಾರಸ್ವಾಮಿ, ಬಿಎಸ್ವೈಗೆ ಸವಾಲು ಹಾಕಿದ್ದರು
ಈ ಹಿಂದೆ ಕೂಡಾ, ಬಿಜೆಪಿ ಮುಖಂಡರು ಕುಮಾರಸ್ವಾಮಿ ಸರಕಾರ ನಮ್ಮ ಮುಖಂಡರು ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಆಡಳಿತ ನಡೆಸುತ್ತಿದೆ. ಮೋದಿಯವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಯಾರ ಯಾರ ಫೋನ್ ಕದ್ದಾಲಿಕೆ ಆಗುತ್ತಿದೆ ಎಂಬುವುದನ್ನು ತನಿಖೆ ನಡೆಸಲು ಅವಕಾಶವಿದೆ. ರಾಜ್ಯ ಸರ್ಕಾರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎನ್ನುವುದಕ್ಕೆ ಯಡಿಯೂರಪ್ಪನವರು ಯಾವುದೇ ಸಣ್ಣ ಸಾಕ್ಷ್ಯ ನೀಡಿದರೂ ಕೂಡ ನಾನೇ ನೇರ ಕ್ರಮಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ, ಬಿಎಸ್ವೈಗೆ ಸವಾಲು ಹಾಕಿದ್ದರು.