ರಾಜಕೀಯ ಅತಂತ್ರತೆ: ರಾಜ್ಯಪಾಲರಿಗಿರುವ ಮತ್ತೊಂದು ಆಯ್ಕೆ, 'ವಿಧಾನಸಭೆ ಅಮಾನತು'
ಹಲವು ಪ್ರಯತ್ನದ ನಂತರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾದ ಬಿಜೆಪಿಗೆ, ಮುಂದಿನ ಹಾದಿ ಅಷ್ಟು ಸುಲಭವಲ್ಲ. ಇದನ್ನರಿತೇ, ಅಮಿತ್ ಶಾ, ಕರ್ನಾಟಕ ಬಿಜೆಪಿ ಶಾಸಕಾಂಗ ಸಭೆಯನ್ನು ಕರೆಯಲು ಇನ್ನೂ ಯಡಿಯೂರಪ್ಪಗೆ ಅನುಮತಿ ನೀಡದೇ ಇರುವುದು.
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾಗೆ ಹಲವು ಆಯ್ಕೆಗಳಿವೆ. ಅದರಲ್ಲಿ, ಬಿಜೆಪಿಗೆ ಸರಳ ಬಹುಮತ ಸಿಗಬಹುದು ಎನ್ನುವ ನಂಬಿಕೆಯಿಲ್ಲದೇ ಇದ್ದರೆ, ಸದ್ಯದ ಮಟ್ಟಿಗೆ ಕರ್ನಾಟಕ ವಿಧಾನಸಭೆಯನ್ನು ಅಮಾನತಿನಲ್ಲಿ ಇಡುವ ಆಯ್ಕೆಯೂ ಒಂದು.
ಅತ್ಯಂತ ಪ್ರಮುಖವಾಗಿ ಇನ್ನೊಂದು ವಾರದಲ್ಲಿ (ಜುಲೈ 31ರೊಳಗೆ) ಹಣಕಾಸು ವಿಧೇಯಕಕ್ಕೆ ಅನುಮತಿ ಪಡೆಯಲೇಬೇಕಾದ ಅವಶ್ಯಕತೆ ಇರುವುದರಿಂದ, ರಾಜ್ಯಪಾಲರು ಅಮಾನತು ಆಯ್ಕೆಯನ್ನೂ ಪರಿಗಣಿಸಬಹುದು. ಇವೆಲ್ಲವೂ, ಸುಪ್ರೀಂಕೋರ್ಟ್ ಮತ್ತು ಸ್ಪೀಕರ್ ನಿರ್ಧಾರದ ಮೇಲೆ ನಿಂತಿದೆ.
ಇತ್ತ ಎಚ್ಡಿಕೆ ಸರಕಾರ ಪತನ, ಅತ್ತ ದೇವೇಗೌಡ್ರ ಕನಸೂ ನುಚ್ಚುನೂರು
ಸ್ಥಿರವಾದ ಸರಕಾರವನ್ನು ಬಿಜೆಪಿ ನೀಡಬಲ್ಲದು ಎಂದು ರಾಜ್ಯಪಾಲರಿಗೆ ಮನವರಿಕೆಯಾದರೆ ಮಾತ್ರ, ಬಿಜೆಪಿಯನ್ನು ಸರಕಾರ ರಚಿಸಲು ಆಹ್ವಾನಿಸಬಹುದು. ಆದರೆ, ಸ್ಪೀಕರ್ ತುರ್ತಾಗಿ ನಿರ್ಧಾರ ತೆಗೆದುಕೊಳ್ಲದಿದ್ದರೆ, ಬಿಕ್ಕಟ್ಟು ಪರಿಹಾರ ಆಗುವ ತನಕ, ಅಮಾನತಿನಲ್ಲಿಡಲು ಕೇಂದ್ರಕ್ಕೆ ಶಿಫಾರಸು ಮಾಡಬಹುದಾಗಿದೆ.
ಹದಿನೈದು ಶಾಸಕರ ರಾಜೀನಾಮೆ
ಹದಿನೈದು ಶಾಸಕರ ರಾಜೀನಾಮೆ ವಿಚಾರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ, ಬಿಜೆಪಿ ಸರಕಾರ ರಚಿಸಲಿದೆಯೇ, ಇಲ್ಲವೇ ಎನ್ನುವುದು ಗೊತ್ತಾಗಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ಸಿನ ನಿಯೋಗ ಬುಧವಾರ (ಜುಲೈ 24) ಸ್ಪೀಕರ್ ಅವರನ್ನು ಭೇಟಿಯಾಗಿ ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಮನವಿ ಮಾಡಿವೆ. ಆದರೆ, ಸ್ಪೀಕರ್ ಅವರಿಂದ ಯಾವುದೇ ದಿನಾಂಕದ ಭರವಸೆ ಸಿಗಲಿಲ್ಲ.
ಜಮಖಂಡಿಯಲ್ಲಿ ಅಂದು ಬಿ ಎಲ್ ಸಂತೋಷ್ ಹೇಳಿದ್ದೇನು, ಇಂದು ಆಗಿದ್ದೇನು?
ಸರಕಾರ ರಚಿಸಲು ಆಹ್ವಾನ ನೀಡುವಂತೆ ಬಿಜೆಪಿ, ರಾಜ್ಯಪಾಲರನ್ನು ಕೋರಿದರೆ?
ಸರಕಾರ ರಚಿಸಲು ಆಹ್ವಾನ ನೀಡುವಂತೆ ಬಿಜೆಪಿ, ರಾಜ್ಯಪಾಲರನ್ನು ಕೋರಿದರೆ, ಈಗಿರುವ ಸಂಖ್ಯಾಬಲದ ಆಧಾರದ ಮೇಲೆ, ರಾಜ್ಯಪಾಲರು ಅನುಮತಿಯನ್ನು ನೀಡಿ, ನಂತರ ಬಹುಮತ ಸಾಬೀತು ಪಡಿಸುವಂತೆ ಸೂಚಿಸಬಹುದು. ಆದರೆ, ಸುಪ್ರೀಂಕೋರ್ಟಿನಲ್ಲಿ ಪ್ರಕರಣದ ಅರ್ಜಿ ವಿಲೇವಾರಿ ಆಗದೇ ಇರುವುದರಿಂದ, ಈ ಆಯ್ಕೆ ತುಸುಕಷ್ಟ ಎನ್ನುವುದು ಕಾನೂನು ಪಂಡಿತರ ಅಭಿಪ್ರಾಯ.
ಸ್ಪೀಕರ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಮುಖ್ಯ
ಸ್ಪೀಕರ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ಸದ್ಯದ ಬಿಜೆಪಿ ಭವಿಷ್ಯ ನಿಂತಿದೆ. ಸ್ಪೀಕರ್ ಎಷ್ಟು ಜನರನ್ನು ಅನರ್ಹಗೊಳಿಸುತ್ತಾರೆ, ಎಷ್ಟು ಜನರ ರಾಜೀನಾಮೆಯನ್ನು ಆಂಗೀಕರಿಸುತ್ತಾರೆ ಎನ್ನುವುದು ಬಿಜೆಪಿಗೆ ಬಹುಮುಖ್ಯ. ಹಾಗಾಗಿ, ಬಿಜೆಪಿ, ಸ್ಪೀಕರ್ ಅವರಿಗೆ ಸತತ ಒತ್ತಡವನ್ನು ಹೇರುತ್ತಿದೆ.
ವಿಶ್ವಾಸಮತಯಾಚನೆಯ ವೇಳೆ ಗೈರಾದ ಶಾಸಕರು
ಮಂಗಳವಾರ (ಜುಲೈ 23) ವಿಶ್ವಾಸಮತಯಾಚನೆಯ ವೇಳೆ ಗೈರಾದ ಶಾಸಕರು, ಬಹುಮತ ಸಾಬೀತು ಪಡಿಸುವ ವೇಳೆಯೂ ಗೈರಾಗುವಂತೆ ನೋಡಿಕೊಂಡರೆ, ಬಿಜೆಪಿಗೆ ಗದ್ದುಗೆ ಸುಲಭವಾಗಲಿದೆ. ಆದರೆ, ಒಂದು ವೇಳೆ, ಅತೃಪ್ತ ಶಾಸಕರು ತಮ್ಮ ನಿಯತ್ತನ್ನು ಬದಲಾಯಿಸಿದರೆ, ಬಿಜೆಪಿಗೆ ಮುಖಭಂಗ ನಿಶ್ಚಿತ.
ಅಮಿತ್ ಶಾ, ಅವರ ನಿರ್ಧಾರವೇ, ರಾಜ್ಯಪಾಲರ ನಿರ್ಧಾರವಾದರೂ ಆಗಬಹುದು
ಹಾಗಾಗಿಯೇ, ಇವೆಲ್ಲವನ್ನೂ ಅಳೆದು ತೂಗುತ್ತಿರುವ ಅಮಿತ್ ಶಾ, ಅವಸರ ಮಾಡದಂತೆ ರಾಜ್ಯ ಬಿಜೆಪಿ ಮುಖಂಡರಿಗೆ ಸೂಚಿಸಿದ್ದಾರೆ. ರಾಜ್ಯಪಾಲರು ತಮ್ಮ ವರದಿಯನ್ನು ಕೇಂದ್ರ ಗೃಹಸಚಿವಾಲಯಕ್ಕೆ ಕಳುಹಿಸಬೇಕಿದೆ. ಕೇಂದ್ರ ಗೃಹಸಚಿವರೂ ಆಗಿರುವ ಅಮಿತ್ ಶಾ, ಅವರ ನಿರ್ಧಾರವೇ, ರಾಜ್ಯಪಾಲರ ನಿರ್ಧಾರವಾದರೂ ಆಗಬಹುದು. ಒಟ್ಟಿನಲ್ಲಿ, ರಾಜ್ಯಪಾಲರಿಗೆ ಅಮಾನತಿನ ಆಯ್ಕೆಯಂತೂ ಇದ್ದೇ ಇದೆ.
ಸರಳಬಹುಮತದ ಸಂಖ್ಯೆಯೂ ಕುಸಿಯುತ್ತದೆ
ಕರ್ನಾಟಕ ಅಸೆಂಬ್ಲಿಯ ಒಟ್ಟು ಸ್ಥಾನಗಳು 224. ಸರಳ ಬಹುಮತ ಪಡೆಯಲು ಬೇಕಾಗಿರುವುದು 113. ಅತೃಪ್ತ ಶಾಸಕರು ರಾಜೀನಾಮೆಯನ್ನು ನೀಡಿದ್ದರೂ, ಅವರ ರಾಜೀನಾಮೆಯನ್ನು ಸ್ಪೀಕರ್ ಇನ್ನೂ ಆಂಗೀಕರಿಸಬೇಕಷ್ಟೇ. ಹಾಗಾಗಿ, ತಾಂತ್ರಿಕವಾಗಿ ಸರಳ ಬಹುಮತದ ಸಂಖ್ಯೆಯಲ್ಲಿ ಕಮ್ಮಿಯಾಗುವುದಿಲ್ಲ. ಬಿಜೆಪಿಗೆ ಇಬ್ಬರು ಪಕ್ಷೇತರರ ಬೆಂಬಲದಿಂದ ಇರುವ ಸಂಖ್ಯಾಬಲ 107. ಅತೃಪ್ತ ಶಾಸಕರ ರಾಜೀನಾಮೆ ಆಂಗೀಕಾರವಾದರೆ, ಉಪ ಚುನಾವಣೆಯ ಫಲಿತಾಂಶ ಬರುವ ತನಕ, ಸರಳಬಹುಮತದ ಸಂಖ್ಯೆಯೂ ಕಮ್ಮಿಯಾಗುತ್ತದೆ.