ಆಪರೇಷನ್ ಮುಂಬೈನಲ್ಲಿ ಅಲ್ಲ: ಎಲ್ಲಾ ಬೆಂಗಳೂರಲ್ಲೇ: ಸಚಿವ ಜಿಟಿಡಿ
Recommended Video
ಬೆಂಗಳೂರು, ಜುಲೈ 13: ಸರಕಾರ ಉಳಿಸಿಕೊಳ್ಳುವ ಭರವಸೆಯಲ್ಲಿರುವ ಮೈತ್ರಿಪಕ್ಷದ ಮುಖಂಡರ ವಿಶ್ವಾಸದ ಮಾತು ಮುಂದುವರಿದಿದೆ. ಮುಖ್ಯಮಂತ್ರಿಗಳು, ಡಿ ಕೆ ಶಿವಕುಮಾರ್ ನಂತರ ಈಗ ಸಚಿವ ಜಿ ಟಿ ದೇವೇಗೌಡರ ಸರದಿ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವ ಜಿಟಿಡಿ, ಸದ್ಯದ ಪರಿಸ್ಥಿತಿಯಲ್ಲಿ ವಿಶ್ವಾಸಮತ ಗೆಲ್ಲುವ ಸಂಪೂರ್ಣ ವಿಶ್ವಾಸದಲ್ಲಿ ನಾವಿದ್ದೇವೆ. ಸ್ಪೀಕರ್ ದಿನ ನಿಗದಿ ಮಾಡಿದ ಮೇಲೆ ನೋಡೋಣ ಏನಾಗುತ್ತದೆ ಎಂದು ಹೇಳಿದರು.
ಗೆದ್ದೇ ಗೆಲ್ಲುತ್ತೇನೆ ಎನ್ನುವ ಅಚಲ ವಿಶ್ವಾಸದಲ್ಲಿ ಎಚ್ಡಿಕೆ: ಏನಿರಬಹುದು ಕಾರ್ಯತಂತ್ರ?
ಅತೃಪ್ತರನ್ನು ಮನವೊಲಿಸುವ ಕೆಲಸ ಇಂದಿಗೂ ನಿರಂತರವಾಗಿ ನಡೆಯುತ್ತಿದೆ. ಆಪರೇಷನ್ ಮಾಡಲು ಇನ್ನು ಮುಂದೆ ಮುಂಬೈಗೆ ಹೋಗಬೇಕಾಗಿಲ್ಲ, ಬೆಂಗಳೂರಲ್ಲೇ ನಡೆಯುತ್ತದೆ ಎಂದು ಸಚಿವ ಜಿ ಟಿ ದೇವೇಗೌಡ ಹೇಳಿದರು.
ಸಚಿವರ ಈ ಹೇಳಿಕೆ, ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಬಿಜೆಪಿಯವರು ತಮ್ಮ ಶಾಸಕರನ್ನು ರೆಸಾರ್ಟಿಗೆ ಕರೆದುಕೊಂಡು ಹೋದಾಗ, ರಿವರ್ಸ್ ಆಪರೇಷನ್ ಸುದ್ದಿ ಹರಿದಾಡಲಾರಂಭಿಸಿತ್ತು.
ಇದಕ್ಕೋ, ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಕುಮಾರಸ್ವಾಮಿ ಹೇಳಿದ್ದು?
ಬಿಜೆಪಿಯವರಿಗೆ ತಮ್ಮ ಶಾಸಕರ ಮೇಲೆ ನಂಬಿಕೆಯಿಲ್ಲ, ಅದಕ್ಕೆ ಅವರನ್ನು ರೆಸಾರ್ಟಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಮಗೆ ವಿಶ್ವಾಸ ಇರುವುದರಿಂದಲೇ, ಅವಿಶ್ವಾಸ ಮಂಡಣೆಗೆ ಮುಂದಾಗಿರುವುದು ಎಂದು ಸಿದ್ದರಾಮಯ್ಯ ಕೂಡಾ ಹೇಳಿಕೆ ನೀಡಿದ್ದರು.
ಸಚಿವ ಸಾ.ರಾ.ಮಹೇಶ್ ಬಿಜೆಪಿ ನಾಯಕರನ್ನು ಭೇಟಿ ಮಾಡಿರುವ ಬಗ್ಗೆ ಹೆಚ್ಚಿನ ಮಾಹಿತಿ ನನಗಿಲ್ಲ. ಬಿಜೆಪಿ ಜತೆ ಕೈಜೋಡಿಸಿ ಸರಕಾರ ರಚಿಸುವ ಪ್ರಶ್ನೆಯೇ ಇಲ್ಲ. ಆ ರೀತಿಯ ಯಾವ ಮಾತುಕತೆಗಳೂ ನಡೆದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ ಸ್ಪಷ್ಟಪಡಿಸಿದ್ದರು.