ಸದನದಲ್ಲಿ ಬಿಜೆಪಿ ಯಾಮಾರುತ್ತಿದೆಯಾ, ಕಾದು ನೋಡುವ ತಂತ್ರವಾ?
ಪ್ರಾಥಮಿಕ ಶಾಲೆಯಲ್ಲಿ ಓದಿತ್ತಿರಬೇಕಾದರೆ, ಗುರುರಾಜ್ ಭಟ್ ಎನ್ನುವ ಗಣಿತದ ಮೇಸ್ಟ್ರು ಇದ್ದರು. ಅವರ ಕ್ಲಾಸ್ ನಲ್ಲಿ ನಾವೆಲ್ಲಾ ಎಷ್ಟು ಗಂಭೀರವಾಗಿ ಇರುತ್ತಿದ್ದೆವು ಎಂದರೆ, ಶೀನಲೂ ಭಯಪಡುತ್ತಿದ್ದೆವು. ತಮ್ಮ ಕ್ಲಾಸ್ ನಲ್ಲಿ ಮಕ್ಕಳು ಶಿಸ್ತಿನಿಂದ ಇರುವಂತೆ ನೋಡಿಕೊಳ್ಳುತ್ತಿದ್ದರು.
ಈ ವಿಚಾರ ಇಲ್ಯಾಕೆ ಎಂದರೆ, ಹಾಲೀ ಮಾನ್ಸೂನ್ ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ನಡೆದುಕೊಳ್ಳುತ್ತಿರುವ ರೀತಿ. ಯಾವ ಆರೋಪಕ್ಕೂ ತಲೆಕೆಡಿಸಿಕೊಳ್ಳದೇ, ತಾವಾಯಿತು, ಸದನದ ಕಲಾಪವಾಯಿತು ಎನ್ನುವಷ್ಟರ ಮಟ್ಟಿಗೆ ಬಿಜೆಪಿಯವರು ಶಿಸ್ತಿನ ಸಿಪಾಯಿಗಳಂತೆ ಕಂಗೊಳಿಸುತ್ತಿದ್ದಾರೆ.
ಚರ್ಚೆ,ಸಿಟ್ಟು,ಇವತ್ತೇ ಕಡೆ, ಎಲ್ಲವೂ ಮುಗಿಯುತ್ತದೆ: ರಮೇಶ್ ಕುಮಾರ್
ಹಾಗಂತ, ಬಿಜೆಪಿಯಲ್ಲಿ ಮಾತಿನ ವೀರರು, ಶೂರರು ಇಲ್ಲವೆಂದಲ್ಲ. ಇರುವ 105 ಜನ ಶಾಸಕರಲ್ಲಿ ಬೇಕಾದಷ್ಟು ಜನ ಮಾತುಮಲ್ಲರು ಸಿಗುತ್ತಾರೆ. ಆದರೆ, ಅವರು ಶಿಸ್ತಿನಿಂದ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿರುವ ಹಿಂದೆ, ಯಾವ ಉದ್ದೇಶವಿದೆ ಎನ್ನುವುದನ್ನು ತಿಳಿದುಕೊಳ್ಳಲು ದೊಡ್ಡ ಸಾಹಸವನ್ನೇನು ಮಾಡಬೇಕಾಗಿಲ್ಲ.
ಅತೃಪ್ತ ಶಾಸಕರಿಗೆ ಡಿ ಕೆ ಶಿವಕುಮಾರ್ ಕೊಟ್ಟಿದ್ದು ಸಲಹೆನೋ, ವಾರ್ನಿಂಗೋ?
ಅದೇನೇ ಇರಲಿ, ಜುಲೈ ಹನ್ನೆರಡರಿಂದ ಆರಂಭವಾದ ಮಳೆಗಾಲದ ಅಧಿವೇಶನದಲ್ಲಿ ಇಂದು, ನಾಳೆ ಎಂದುಕೊಂಡು ವಿಶ್ವಾಸಮತಯಾಚನೆ ದಿನ ಗಣೇಶನ ಮದುವೆಯ ರೀತಿಯಲ್ಲಿ ಮುಂದೂಡಲ್ಪಡುತ್ತಲೇ ಇದೆ. ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು ಆಡಳಿತ ಪಕ್ಷದವರು ಬಿಜೆಪಿಯ ವಿರುದ್ದ ಮುಗಿಬೀಳುತ್ತಿದ್ದಾರೆ.
ಮಂಗಳವಾರ ಜುಲೈ 23, ಸಂಜೆ ಆರು ಗಂಟೆಗೆ ಮಹೂರ್ತ ಫಿಕ್ಸ್ ಆಗಿದೆ
ಮೊದಲು ಜುಲೈ ಹನ್ನೆರಡು ಶುಕ್ರವಾರ ವಿಶ್ವಾಸಮತಯಾಚನೆ ನಡೆಯಬಹುದು ಎಂದು ಹೇಳಲಾಗಿತ್ತು, ಇದಾದ ನಂತರ ಸೋಮವಾರ ಜುಲೈ 15, ಅದು ಸಾಧ್ಯವಾಗದಿದ್ದಾಗ ಗುರುವಾರ ಜುಲೈ 18, ಅಲ್ಲೂ ಆಡಳಿತ ಪಕ್ಷದವರು ಮೇಲುಗೈ ಸಾಧಿಸಿದಾಗ ಸೋಮವಾರ ಜುಲೈ 22ಕ್ಕೆ ಮುಂದೂಡಲ್ಪಟ್ಟಿತು. ಅದೂ ಆಗಲಿಲ್ಲ, ಈಗ ಮಂಗಳವಾರ ಜುಲೈ 23, ಸಂಜೆ ಆರು ಗಂಟೆಗೆ ಮಹೂರ್ತ ಫಿಕ್ಸ್ ಆಗಿದೆ.
ಬಿಜೆಪಿಯವರು ಏರು ಧನ್ವಿಯಲ್ಲೂ ಮಾತನಾಡುತ್ತಿಲ್ಲ
ಅಧಿವೇಶನ ಆರಂಭವಾಗಿ ಇಷ್ಟು ದಿನವಾದರೂ, ಬಿಜೆಪಿಯವರು ಸದನದ ಬಾವಿಗೆ ಬಂದು ಪ್ರತಿಭಟನೆ ಮಾಡುವುದು ಅತ್ಲಾಗಿರಲಿ, ಏರು ಧನ್ವಿಯಲ್ಲೂ ಮಾತನಾಡುತ್ತಿಲ್ಲ. ಕಾರಣ ಅತ್ಯಂತ ಸ್ಪಷ್ಟ. ಎಲ್ಲಿ ಮಾತನಾಡಿ ಎಡವಟ್ಟಾಗಿ, ಸ್ಪೀಕರ್ ಹೊರಹಾಕುತ್ತಾರೋ ಎನ್ನುವ ಭಯ. ಒಂದು ವೇಳೆ ಹಾಗೆ ಆದರೆ, ಸಂಖ್ಯಾಬಲದಲ್ಲಿ ಏರುಪೇರಾಗುವ ಭೀತಿ.
ಸ್ಪೀಕರ್ ಮೇಲೆ ವಿಶ್ವಾಸ, ಮಧ್ಯ ಪ್ರವೇಶಿಸಲು ಒಪ್ಪದ ಸುಪ್ರಿಂ
ಮುಂಗೋಪಕ್ಕೆ ಹೆಸರಾಗಿರುವ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ
ಮುಂಗೋಪಕ್ಕೆ ಹೆಸರಾಗಿರುವ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ತಾಳ್ಮೆ ಕಳೆದುಕೊಳ್ಳದೇ ಶಾಂತರೀತಿಯಿಂದ ಇದ್ದಾರೆ. ಗಂಟೆ ಗಂಟೆಗೂ ಪ್ರಚೋದನೆಗೆ ಒಳಗಾಗದಂತೆ ತಮ್ಮ ಶಾಸಕರಿಗೆ ಕಣ್ಸನ್ನೆ ಮಾಡುತ್ತಿದ್ದಾರೆ. ಇದರ ಲಾಭವನ್ನು ಭರ್ಜರಿಯಾಗಿ ಪಡೆದುಕೊಳ್ಳುತ್ತಿರುವ ಆಡಳಿತ ಪಕ್ಷದವರು ಬಿಜೆಪಿಯವರನ್ನು ಟೀಕಿಸುತ್ತಾ, ಕಾಲೆಳೆಯುತ್ತಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್, ಶಾಸಕರ ಕಾಲಿಗೆ ಬೀಳುವುದೊಂದೇ ಬಾಕಿ
ಸ್ಪೀಕರ್ ರಮೇಶ್ ಕುಮಾರ್, ಶಾಸಕರ ಕಾಲಿಗೆ ಬೀಳುವುದೊಂದೇ ಬಾಕಿ, ಮಿಕ್ಕೆಲ್ಲಾ ಸಹನೆಯ ಅಸ್ತ್ರವನ್ನು ಈಗಾಗಲೇ ಪ್ರಯೋಗಿಸಿದ್ದಾಗಿದೆ. ಆದರೆ, ಅದ್ಯಾವುದೂ ಕೆಲಸಕ್ಕೆ ಬರುತ್ತಿಲ್ಲ. ಆಡಳಿತ ಪಕ್ಷದ ಸದಸ್ಯರೇ ಸದನದ ಬಾವಿಯ ಹತ್ತಿರ ಪ್ರತಿಭಟನೆ ಮಾಡುತ್ತಿದ್ದಾರೆಂದರೆ, ಎಲ್ಲವೂ ಪ್ರೀ ಪ್ಲಾನ್ಡ್ ಎನ್ನುವುದನ್ನು ಅರಿಯಲು ವಿಶೇಷ ಬುದ್ದಿವಂತಿಕೆ ಬೇಕಾಗಿಲ್ಲ.
ಕಲಾಪ 'ವ್ಯರ್ಥ ಪ್ರಲಾಪ'ದಲ್ಲಿ ಸಾಗುತ್ತಿರುವುದಂತೂ ಸ್ಪಷ್ಟ
ಕಲಾಪ 'ವ್ಯರ್ಥ ಪ್ರಲಾಪ'ದಲ್ಲಿ ಸಾಗುತ್ತಿರುವುದಂತೂ ಸ್ಪಷ್ಟ. ಸ್ಪೀಕರ್ ಅವರಿಗೆ ಎಷ್ಟೇ ಒತ್ತಡ ತಂದರೂ, ಆಡಳಿತ ಪಕ್ಷದವರು ವಿಶ್ವಾಸಮತಯಾಚನೆಯನ್ನು ಇನ್ನೊಂದು ದಿನಕ್ಕೆ ಮುಂದೂಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಷ್ಟೆಲ್ಲಾ ಗ್ರೌಂಡ್ ವರ್ಕ್ ಮಾಡಿ, ಕೊನೇ ಕ್ಷಣದಲ್ಲಿ ತೊಂದರೆಯಾಗಬಾರದೆಂದು ಬಿಜೆಪಿಯವರು ಶಿಸ್ತು, ಸಂಯಮದಿಂದಿದ್ದಾರೆ.
ಇದುವರೆಗಿನ ಕಲಾಪದಲ್ಲಿ ಬಿಜೆಪಿಯವರು ಯಾಮಾರುತ್ತಲೇ ಬಂದಿದ್ದಾರೆ
ಆಡಳಿತ ಪಕ್ಷದವರು ಎಷ್ಟೇ ಪ್ರಚೋದಿಸಿದರೂ ಬಿಜೆಪಿಯವರು ಸುಮ್ಮನಿದ್ದಾರೆ, ಇದುವರೆಗಿನ ಕಲಾಪದಲ್ಲಿ ಬಿಜೆಪಿಯವರು ಯಾಮಾರುತ್ತಲೇ ಬಂದಿದ್ದಾರೆ. ಮಂಗಳವಾದರೂ ವಿಶ್ವಾಸ ನಿರ್ಣಯ ಮತಕ್ಕೆ ಹೋಗುತ್ತಾ, ಅಥವಾ ಇನ್ನೊಂದು ದಿನಾಂಕನಾ ಕಾದು ನೋಡಬೇಕಿದೆ. ಯಾಕೆಂದರೆ, ಸೋಮವಾರ ಇದನ್ನೆಲ್ಲಾ ಮುಗಿಸುತ್ತೇನೆ ಎಂದಿದ್ದ ರಮೇಶ್ ಕುಮಾರ್, ಈಗ ಮಂಗಳವಾರ ಗ್ಯಾರಂಟಿ ಎಂದಿದ್ದಾರೆ.