ಸರ್ಕಾರ ರಚನೆಗೆ ಸಿಗದ ಗ್ರೀನ್ ಸಿಗ್ನಲ್: ಅಮಿತ್ ಶಾ ಭೇಟಿಗಾಗಿ ದೆಹಲಿಗೆ ತೆರಳಿದ ಬಿಜೆಪಿ ನಿಯೋಗ
ಬೆಂಗಳೂರು, ಜುಲೈ 25: ರಾಜ್ಯದಲ್ಲಿ ಸರ್ಕಾರ ರಚನೆಗೆ ಹೈಕಮಾಂಡ್ನಿಂದ ಯಾವುದೇ ಸೂಚನೆ ಸಿಗದ ಹಿನ್ನೆಲೆಯಲ್ಲಿ ಕೇಂದ್ರದ ನಾಯಕರನ್ನು ಭೇಟಿ ಮಾಡಿ ಚರ್ಚಿಸಲು ಬಿಜೆಪಿ ನಿಯೋಗವು ದೆಹಲಿಗೆ ತೆರಳಿದೆ.
ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಮಾಧುಸ್ವಾಮಿ, ಅರವಿಂದ ಲಿಂಬಾವಳಿ, ಕೆ.ಜಿ. ಬೋಪಯ್ಯ ಮತ್ತು ಬಿವೈ ರಾಘವೇಂದ್ರ ಅವರ ನಿಯೋಗವು ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ದೆಹಲಿಗೆ ಪ್ರಯಾಣ ಬೆಳೆಸಿತು. ಈ ತಂಡ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭೇಟಿಗಾಗಿ ಸಮಯ ಕೋರಿದೆ.
ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲ ರಚನೆ ರಹಸ್ಯ ಬಯಲು
ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಪತನಗೊಂಡ ಕೂಡಲೇ ಬಿಜೆಪಿಯಲ್ಲಿ ಚಟುವಟಿಕೆಗಳು ಚುರುಕಾಗಿದ್ದವು. ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಉತ್ಸಾಹದಲ್ಲಿದ್ದರು. ಆದರೆ, ಅವರ ತರಾತುರಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಸರ್ಕಾರ ರಚನೆಗೆ ಆತುರ ತೋರದಂತೆ ಸೂಚನೆ ನೀಡಿದೆ. ಅಲ್ಲದೆ, ಸರ್ಕಾರ ರಚನೆ ಸಂಬಂಧ ರಾಜ್ಯ ನಾಯಕರಿಗೆ ಯಾವುದೇ ಸಲಹೆ ಸೂಚನೆ ನೀಡಿಲ್ಲ. ಹೀಗಾಗಿ ಯಡಿಯೂರಪ್ಪ ಅವರ ಸಲಹೆ ಮೇರೆಗೆ ಈ ನಿಯೋಗ ದೆಹಲಿಗೆ ತೆರಳಿದೆ.
ಕೇಂದ್ರದ ನಾಯಕರಿಗೆ ಸಮಯ ಸಿಕ್ಕಿಲ್ಲ
ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ನಡೆಯುತ್ತಿರುವುದರಿಂದ ರಾಜ್ಯ ರಾಜಕಾರಣದ ಕುರಿತು ಪರಿಸ್ಥಿತಿ ಅವಲೋಕಿಸಲು ಕೇಂದ್ರದ ನಾಯಕರಿಗೆ ಸಾಧ್ಯವಾಗಿಲ್ಲ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾವು ಕಾನೂನು ಪ್ರಕ್ರಿಯೆ ಮತ್ತು ಮುಂದಿನ ಹೆಜ್ಜೆಗಳ ಬಗ್ಗೆ ಚರ್ಚಿಸಿದ್ದೇವೆ. ಕೇಂದ್ರ ನಾಯಕರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಲಿದ್ದೇವೆ. ಪಕ್ಷದ ಸಂಸದೀಯ ಮಂಡಳಿ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅರವಿಂದ್ ಲಿಂಬಾವಳಿ ತಿಳಿಸಿದ್ದಾರೆ.
ಇತ್ತ ಎಚ್ಡಿಕೆ ಸರಕಾರ ಪತನ, ಅತ್ತ ದೇವೇಗೌಡ್ರ ಕನಸೂ ನುಚ್ಚುನೂರು
ಬಿಎಸ್ವೈ ಆಸೆಗೆ ತಣ್ಣೀರು
ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ. ಅವರ ಅನರ್ಹತೆ ಹಾಗೂ ರಾಜೀನಾಮೆ ವಿಚಾರವು ಸ್ಪೀಕರ್ ಮತ್ತು ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇವೆ. ಹೀಗಿರುವಾಗ ಅವುಗಳು ಬಗೆಹರಿಯದೆಯೇ ಸರ್ಕಾರ ರಚನೆಗೆ ಅವಸರ ಮಾಡುವುದು ಸರಿಯಲ್ಲ ಎಂದು ಖಡಕ್ಕಾಗಿ ಸೂಚನೆ ನೀಡಿರುವುದು ಬಿಎಸ್ವೈ ಅವರ ಆಸೆಗೆ ತಣ್ಣೀರೆರಚಿದಂತೆ ಆಗಿದೆ.
ಮುಖಭಂಗ ಅನುಭವಿಸಿದ್ದ ಬಿಜೆಪಿ
ವಿಧಾನಸಭೆ ಚುನಾವಣೆ ಮುಗಿದ ಬಳಿಕ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಆದರೆ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ತರಾತುರಿಯಲ್ಲಿ ಸರ್ಕಾರ ರಚನೆಗೆ ಹಕ್ಕುಮಂಡಿಸಿದ್ದರು. ಅತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾದವು. ಬಹುಮತ ಇಲ್ಲದ ಕಾರಣ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ವಿದಾಯದ ಭಾಷಣ ಮಾಡಿ ಸದನದಿಂದ ಹೊರನಡೆದಿದ್ದರು. ಈ ಗಡಿಬಿಡಿಯ ನಡೆಯಿಂದಾಗಿ ಬಿಜೆಪಿಗೆ ಮುಖಭಂಗವಾಗಿತ್ತು. ಹಾಗಾಗಿ ಈ ಬಾರಿ ಎಚ್ಚರಿಕೆಯ ನಡೆ ಅನುಸರಿಸಲು ಕೇಂದ್ರದ ನಾಯಕರು ತೀರ್ಮಾನಿಸಿದ್ದಾರೆ.
ಇಂದು ಅತೃಪ್ತರ ಬಗ್ಗೆ ನಿರ್ಧಾರ?
ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಕುರಿತು ಇಂದು ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಅವರ ನಿರ್ಧಾರದ ಬಳಿಕ ಮುಂದಿನ ಹೆಜ್ಜೆ ಇರಿಸಲು ಬಿಜೆಪಿ ಉದ್ದೇಶಿಸಿದೆ. ಅತೃಪ್ತ ಶಾಸಕರ ಬದ್ಧತೆಯ ಬಗ್ಗೆ ಬಿಜೆಪಿ ನಾಯಕರಲ್ಲಿ ಇನ್ನೂ ವಿಶ್ವಾಸ ಮೂಡಿಲ್ಲ. ಅವರ ನಡೆ ಬದಲಾದರೂ ಆಗಬಹುದು. ಹೀಗಾಗಿ ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಬಿಜೆಪಿ ತೀರ್ಮಾನಿಸಿದೆ ಎನ್ನಲಾಗಿದೆ.
ಎಲ್ಲ ವಿವರಗಳ ಮಾಹಿತಿ ಅತೃಪ್ತ ಶಾಸಕರು ಮರಳುವ ಲಕ್ಷಣವಿಲ್ಲ
ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇವೆ. ಅತೃಪ್ತರ ರಾಜೀನಾಮೆ ಬಗ್ಗೆ ಗೊಂದಲಗಳಿವೆ. ಸ್ಪೀಕರ್ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸುತ್ತೇವೆ. ಅತೃಪ್ತ ಶಾಸಕರು ಸದ್ಯಕ್ಕೆ ಬರುವ ಲಕ್ಷಣಗಳಿಲ್ಲ. ಸಮ್ಮಿಶ್ರ ಸರ್ಕಾರದ ಮೇಲೆ ಅವರು ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಅವರು ಮರಳಿ ಬಂದು ಪಕ್ಷ ಸೇರುವುದು ಅಸಾಧ್ಯ. ಬಿಎಸ್ಪಿ ಶಾಸಕ ಎನ್. ಮಹೇಶ್ ಅವರನ್ನು ಉಚ್ಚಾಟನೆ ಮಾಡಿದ್ದಾರೆ. ಈ ಎಲ್ಲ ವಿವರಗಳ ಬಗ್ಗೆ ಹೈಕಮಾಂಡ್ಗೆ ವಿವರಿಸುತ್ತೇವೆ ಎಂದು ಶಾಸಕ ಮಾಧುಸ್ವಾಮಿ ಹೇಳಿದರು.