ವಾರಂಟ್ ಇಲ್ಲದೆ ಬಂಧನ: ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಪೊಲೀಸರ ಖಡಕ್ ಎಚ್ಚರಿಕೆ
ಬೆಂಗಳೂರು, ನವೆಂಬರ್ 7: ಅಯೋಧ್ಯಾದಲ್ಲಿನ ರಾಮಮಂದಿರ-ಬಾಬ್ರಿ ಮಸೀದಿ ವಿವಾದವನ್ನು ಇತ್ಯರ್ಥಪಡಿಸುವ ಸಂಬಂಧ ಸುಪ್ರೀಂಕೋರ್ಟ್ ಶೀಘ್ರದಲ್ಲಿಯೇ ಅಂತಿಮ ತೀರ್ಪು ಪ್ರಕಟಿಸಲಿದೆ. ಸುದೀರ್ಘ ವಿಚಾರಣೆಯ ಬಳಿಕ ವಿವಾದಕ್ಕೆ ಕೊನೆ ಹಾಡುವ ತೀರ್ಪು ಪ್ರಕಟವಾಗುವ ನಿರೀಕ್ಷೆಯಿದೆ. ನ. 17ರಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನಿವೃತ್ತರಾಗಲಿದ್ದು, ಆ ದಿನಾಂಕದ ಒಳಗೆ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.
ತೀರ್ಪು ಯಾವ ಅರ್ಜಿದಾರರ ಪರವಾಗಿ ಪ್ರಕಟವಾದರೂ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುವ ಘಟನೆಗಳು ಉಂಟಾಗುವ ಅಪಾಯವಿದೆ. ಹೀಗಾಗಿ ಕೋಮು ಸೌಹಾರ್ದ ಕದಡುವ ಮೂಲಕ ಅಶಾಂತಿ ಮೂಡಿಸುವ ಗುಂಪುಗಳು, ವೇದಿಕೆಗಳ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ. ಅಯೋಧ್ಯಾ, ಉತ್ತರ ಪ್ರದೇಶ ಮಾತ್ರವಲ್ಲದೆ, ದೇಶದಾದ್ಯಂತ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಸಹ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಶೀಘ್ರದಲ್ಲೇ ಅಯೋಧ್ಯಾ ತೀರ್ಪು: ಸಾಮಾಜಿಕ ಮಾಧ್ಯಮದ ಮೇಲೂ ನಿರ್ಬಂಧ
ಮುಖ್ಯವಾಗಿ ಸುಳ್ಳು ಸಂದೇಶಗಳನ್ನು ಪ್ರಸಾರ ಮಾಡುವ, ಪ್ರಚೋದನಾತ್ಮಕ ಬರಹ, ಚಿತ್ರ ಅಥವಾ ವಿಡಿಯೋಗಳನ್ನು ಹರಿಬಿಡುವ ಮಾಧ್ಯಮಗಳ ಮೇಲೆ ನಿಗಾ ಇರಿಸಿದ್ದಾರೆ. ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಾಕಾರಿ ಸಂಗತಿಗಳು ಹರಿದಾಡುವ ಸಾಧ್ಯತೆ ಇದೆ. ಈ ರೀತಿಯ ಮಾಧ್ಯಮಗಳಲ್ಲಿ ಸಾಮರಸ್ಯ ಕದಡುವ ಪೋಸ್ಟ್ಗಳನ್ನು ಹಂಚಿಕೊಳ್ಳುವವರಿಗೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಆಕ್ಷೇಪಾರ್ಹ ಕಾಮೆಂಟ್ ಹಾಕಬೇಡಿ
ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದ ಕುರಿತು ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಲಿದ್ದು, ಈ ಹಿನ್ನೆಲೆಯಲ್ಲಿ ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರ್ ಹಾಗೂ ಇನ್ನಿತರೆ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್, ಕಾಮೆಂಟ್ ಹಾಕಬಾರದು ಎಂದು ಸೂಚಿಸಿದ್ದಾರೆ.
ಜಾಲತಾಣದ ಮೇಲೆ ಸೂಕ್ತ ನಿಗಾ
ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಇಂದಿನಿಂದ ಹೊಸ ನಿಯಮಗಳು ಅನ್ವಯಿಸಲಿದ್ದು, ವಾಟ್ಸಾಪ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೇಲೆ ಸೂಕ್ತ ನಿಗಾವಹಿಸಲಾಗುವುದು. ತಪ್ಪು ಸಂದೇಶಗಳನ್ನು ಯಾರಿಗೂ ಕಳುಹಿಸಬೇಡಿ. ನಿಮ್ಮ ಮಕ್ಕಳು, ಸಹೋದರ, ಸಹೋದರಿಯರು, ಅಕ್ಕಪಕ್ಕದವರು, ಸಂಬಂಧಿಗಳಿಗೆ ಈ ಮಾಹಿತಿ ತಿಳಿಸಿ.
ಅಯೋಧ್ಯೆ ತೀರ್ಪು ಕೇಳುವ ಮುನ್ನವೇ ಅಸುನೀಗಿದ ರಾಮಮಂದಿರ ಶಿಲ್ಪಿ
ವಾರಂಟ್ ಇಲ್ಲದೆ ಬಂಧನ
ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಆಕ್ಷೇಪಾರ್ಹ ಪೋಸ್ಟ್ ಹಾಗೂ ವಿಡಿಯೋಗಳನ್ನು ಕಳುಹಿಸಬೇಡಿ. ಯಾವುದೇ ರಾಜಕೀಯ ಮತ್ತು ಧಾರ್ಮಿಕ ವಿಷಯದ ಬಗ್ಗೆ ನಿಂದನೀಯ ಸಂದೇಶಗಳನ್ನು ಕಳುಹಿಸುವುದು ಅಪರಾಧವಾಗಿದ್ದು, ಹೀಗೆ ಸಂದೇಶ ಕಳುಹಿಸಿದ್ದರೆ ವಾರಂಟ್ ಇಲ್ಲದೆ ಬಂಧನಕ್ಕೆ ಒಳಗಾಗುವಿರಿ.
ತಪ್ಪು ಸಂದೇಶ ಕಳುಹಿಸಬೇಡಿ
ಈ ಸಂಗತಿ ದೇಶದ ಅತ್ಯಂತ ಗಂಭೀರ ವಿಚಾರವಾಗಿದೆ. ಸಾಮಾಜಿಕ ಜಾಲತಾಣದ ಸದಸ್ಯರು ಈ ಬಗ್ಗೆ ಆಳವಾಗಿ ಆಲೋಚಿಸಿ. ತಪ್ಪು ಸಂದೇಶಗಳನ್ನು ಕಳುಹಿಸಬೇಡಿ. ನಿಯಮಗಳು ಹಾಗೂ ಗುಂಪುಗಳ ಬಗ್ಗೆ ಜಾಗರೂಕತೆಯಿಂದ ಇರಿ ಎಂದು ರಾಜ್ಯ ಪೊಲೀಸರು ಸಾರ್ವಜನಿಕರಿಗೆ ನಿರ್ದೇಶನ ನೀಡಿದ್ದಾರೆ.
ಬಾಬ್ರಿ ಮಸೀದಿ ವಿವಾದಕ್ಕೆ ಪರಿಹಾರ ರಾಜೀವ್ ಗಾಂಧಿ ಕೈಯಲ್ಲಿತ್ತು: ಒವೈಸಿ