JDSಗೆ ಮಧು ಸಿಂಚನ: ಛೀಪ್ ವಿಪ್ ಹೆಸರು ಪ್ರಕಟ
ಬೆಂಗಳೂರು, ಅಕ್ಟೋಬರ್ 11: ಜಾತ್ಯಾತೀತ ಜನತಾದಳದ ಪಕ್ಷದಲ್ಲಿ ಆಯಕಟ್ಟಿನ ಸ್ಥಾನಗಳು ಸದ್ಯಕ್ಕೆ ಭರ್ತಿಯಾಗಿವೆ. ಮೊದಲ ಬಾರಿಗೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯನ್ನು ಪಕ್ಷದ ಮೊದಲ ಕುಟುಂಬದಿಂದ ಹೊರಗಿನ ವ್ಯಕ್ತಿಗೆ ವಹಿಸುವ ಮೂಲಕ ಪಕ್ಷದಲ್ಲಿ ಸಾಕಷ್ಟು ಆಮೂಲಾಗ್ರ ಬದಲಾವಂಣೆಗಳು ಕಂಡುಬಂದಿವೆ.
ಇದೀಗ ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರ ಹಾಗೂ ಸೊರಬ ಶಾಸಕ, ಯುವನಾಯಕ ಮಧು ಬಂಗಾರಪ್ಪ ಅವರನ್ನು ನೇಮಿಸಲಾಗಿದೆ.
ಈ ಸಂಬಂಧ ಪ್ರತಿಪಕ್ಷ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಪತ್ರ ಬರೆದಿದ್ದು, ಪ್ರತಿಪಕ್ಷ ಮುಖ್ಯ ಸಚೇತಕರಾಗಿ ಮಧು ಬಂಗಾರಪ್ಪ ಅವರಿಗೆ ಮಾನ್ಯತೆ ನೀಡುವಂತೆ ಕೋರಿದ್ದಾರೆ. ವಾಡಿಕೆಯಂತೆ ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕರಿಗೆ ಸಂಪುಟ ದರ್ಜೆ ಸ್ಥಾನಮಾನ ದೊರೆಯಲಿದ್ದು, ವಿಧಾನಸೌಧದಲ್ಲಿ ಕಚೇರಿ-ಸಿಬ್ಬಂದಿ, ವಾಹನ ದೊರೆಯಲಿದೆ.
ವಿಧಾನಸಭೆಯಲ್ಲಿ ಪ್ರತಿಪಕ್ಷ ಸ್ಥಾನಮಾನ ಗಳಿಸಿರುವ ಜೆಡಿಎಸ್ಸಿಗೆ ಅದಕ್ಕೆ ತಕ್ಕಂತೆ ಒಂದಷ್ಟು ಆಯಕಟ್ಟಿನ ಸ್ಥಾನಗಳೂ ಸರಕಾರಿ ಮಟ್ಟದಲ್ಲಿ ಪ್ರಾಪ್ತಿಯಾಗಲಿದೆ. ಅವುಗಳ ಪೈಕಿ ವಿಧಾನಸಭೆಯಲ್ಲಿ ಪ್ರತಿಪಕ್ಷ ಉಪ ನಾಯಕನ ಆಯ್ಕೆ ನಡೆಬೇಕಿದೆ. ಈ ಸ್ಥಾನಕ್ಕೆ ಸತತ ನಾಲ್ಕನೇ ಬಾರಿ ಶಾಸಕರಾಗಿರುವ ಸಕಲೇಶಪುರದ ಎಚ್ ಕೆ ಕುಮಾರಸ್ವಾಮಿ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಮುಖ್ಯ ಸಚೇತಕ ಸ್ಥಾನಕ್ಕೆ ಜೆಡಿಎಸ್ ನಲ್ಲಿ ಸಾಕಷ್ಟು ಪೈಪೋಟಿ/ಮುನಿಸು/ಅಸಮಾಧಾನಕ್ಕೆ ಹೇತುವಾಗಿತ್ತು. ಕಳೆದ ನಾಲ್ಕು ತಿಂಗಳಿಂದ ಈ ಎರಡೂ ಸ್ಥಾನಗಳ ನೇಮಕ ಪ್ರಕ್ರಿಯೆ ಪಕ್ಷದಲ್ಲಿ ಕಗ್ಗಂಟು ಉಂಟು ಮಾಡಿತ್ತು. ಜಮೀರ್ ಅಹಮದ್ ಖಾನ್, ವೈಎಸ್ ವಿ ದತ್ತಾ, ಮಲ್ಲಿಕಾರ್ಜುನ ಖೂಬಾ, ಸುರೇಶ್ ಬಾಬು, ಸಾರಾ ಮಹೇಶ್ ಹೀಗೆ ಬಹಳಷ್ಟು ಹೆಸರುಗಳು ಕೇಳಿ ಬಂದಿದ್ದವು. ಕೂಬಾ ರಾಜೀನಾಮೆ ಬೆದರಿಕೆಯನ್ನೂ ಒಡ್ಡಿದ್ದರು.
ಇತ್ತೀಚೆಗೆ ಶಾಸಕಾಂಗ ಪಕ್ಷದ ಸಭೆ ನಡೆದು ಪ್ರತಿಪಕ್ಷ ನಾಯಕ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎ ಕೃಷ್ಣಪ್ಪ, ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ಬಸವರಾಜ ಹೊರಟ್ಟಿ, ಬಿಬಿ ನಿಂಗಯ್ಯ ಅವರಿಗೆ ಆಯ್ಕೆ ಅಧಿಕಾರ ನೀಡಲಾಗಿತ್ತು.
ಇದೀಗ ಮೊದಲ ಬಾರಿಗೆ ಶಾಸಕರಾಗಿರುವ ಹಿಂದುಳಿದ ಈಡಿಗ ಸಮುದಾಯದ ಮಧು ಬಂಗಾರಪ್ಪ ಅವರಿಗೆ ಮುಖ್ಯ ಸಚೇತಕ ಹುದ್ದೆ ನೀಡಲಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕುರುಬ ಸಮುದಾಯದ ನಂತರ ಹೆಚ್ಚು ಜನಸಂಖ್ಯೆ ಹೊಂದಿರುವ ಹಿಂದುಳಿದ ವರ್ಗಗಳ ಮೇಲೆ ಕಣ್ಣಿಟ್ಟು ಪ್ರಮುಖ ಹುದ್ದೆ ನೀಡಲಾಗುತ್ತಿದೆ. ಮಧು ಬಂಗಾರಪ್ಪ ಅವರಿಗೆ ಶಿವಮೊಗ್ಗ ಮತ್ತು ಉತ್ತರ ಕನ್ನಡ ಲೋಕಸಭೆ ಕ್ಷೇತ್ರಗಳ ಉಸ್ತುವಾರಿ ಸಹ ನೀಡಲು ನಿರ್ಧರಿಸಲಾಗಿದೆ.