ಎನ್ಎಸ್ಯುಐ ರಾಜ್ಯಾಧ್ಯಕ್ಷ ಸಿದ್ದವೀರ್ ಆತ್ಮಹತ್ಯೆ
ಬೆಂಗಳೂರು, ಜ. 6 : ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ (ಎನ್ಎಸ್ಯುಐ)ಘಟಕದ ಕರ್ನಾಟಕ ರಾಜ್ಯಾಧ್ಯಕ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.
ಎನ್ಎಸ್ಯುಐ ರಾಜ್ಯಾಧ್ಯಕ್ಷ ಎಸ್.ವಿ.ಸಿದ್ದವೀರ್ (29) ಆತ್ಮಹತ್ಯೆ ಮಾಡಿಕೊಂಡವರು. ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಅವರು ಮೂರು ದಿನಗಳ ಹಿಂದೆ ಆಹಾರದಲ್ಲಿ ವಿಷ ಬೆರೆಸಿಕೊಂಡು ಅದನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು. ಬಸವೇಶ್ವರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಎಸ್.ವಿ.ಸಿದ್ದವೀರ್ ಕನಕಪುರ ತಾಲ್ಲೂಕಿನ ಶೆಟ್ಟಿಕೆರೆದೊಡ್ಡಿ ಗ್ರಾಮದ ಜಿಪಂ ಮಾಜಿ ಸದಸ್ಯೆ ಶಾಂತಮ್ಮ ಹಾಗೂ ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ದಂಪತಿಯ ಪುತ್ರ. ಮೈಸೂರಿನ ಯುವತಿ ಜೊತೆ ಕಳೆದ ತಿಂಗಳು ಅವರ ಮದುವೆ ನಿಶ್ಚಯವಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಮದುವೆ ನಡೆಯಬೇಕಿತ್ತು.
ಕಾಂಗ್ರೆಸ್ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಅವರು, ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಅವರ ಆಶಯದಂತೆ ಯುವ ಕಾಂಗ್ರೆಸ್ ಮತ್ತು ವಿದ್ಯಾರ್ಥಿ ಘಟಕಕ್ಕೆ ಚುನಾವಣೆ ಮೂಲಕವೇ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಯ್ಕೆಯಾಗಬೇಕೆಂಬ ನಿರ್ಣಯವಾದ ನಂತರ ಎನ್ಎಸ್ಯಯುಐ ರಾಜ್ಯಾಧ್ಯಕ್ಷರಾಗಿ ಆಯ್ಕೆ ಯಾಗಿದ್ದರು.[ಆತ್ಮಹತ್ಯೆಗೆ ಯತ್ನಿಸುವುದು ಇನ್ನು ಅಪರಾಧವಲ್ಲ!]
2012ರಿಂದ ಎನ್ಎಸ್ಯುಐ ರಾಜ್ಯಾಧ್ಯಕ್ಷರಾಗಿದ್ದ ಅವರ ಅಧಿಕಾರಾವಧಿ ಕೆಲವು ದಿನಗಳ ಹಿಂದೆ ಪೂರ್ಣಗೊಂಡಿತ್ತು. ಮುಂದಿನ 15 ದಿನಗಳಲ್ಲಿ ಎನ್ಎಸ್ಯುಐನ ಹೊಸ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಬೇಕಿತ್ತು. ಅದಕ್ಕಾಗಿ ಸಿದ್ದವೀರ್ ಪ್ರಚಾರದಲ್ಲಿಯೂ ತೊಡಗಿಸಿ ಕೊಂಡಿದ್ದರು.
ಜ.2ರಂದು ಡೆತ್ನೋಟ್ ಬರೆದಿಟ್ಟಿದ್ದ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು, ಅವರನ್ನು ಬಸವೇಶ್ವರ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 'ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನೇ ಕಾರಣ. ಸಂಬಂಧಗಳ ಬಗ್ಗೆ ನನಗೆ ಜಿಗುಪ್ಸೆಯಾಗಿದೆ. ಎಲ್ಲರನ್ನೂ ಬಿಟ್ಟು ಹೋಗುತ್ತಿರುವುದಕ್ಕೆ ಬೇಸರವಿದೆ' ಎಂದು ಅವರು ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾರೆ.
ಇಂಧನ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಮತ್ತು ಎನ್ಎಸ್ಯುಐ ಕಾರ್ಯಕರ್ತರು ಸಿದ್ಧವೀರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.