ನಾಳೆಯೇ ನೂತನ ಸಿಎಂ ಪ್ರಮಾಣ ವಚನ, ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿ?
ಬೆಂಗಳೂರು, ಜು. 27: ಇಂದು ಸಂಜೆ ನಡೆಯುವ ಮಹತ್ವದ ರಾಜ್ಯ ಬಿಜೆಪಿ ಸಚಿವ ಸಂಪುಟ ಸಭೆಯಲ್ಲಿಯೇ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಲಿದ್ದು, ಶಾಸಕಾಂಗ ಪಕ್ಷದ ನೂತನ ನಾಯಕ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಖಚಿತ ಮಾಹಿತಿಯಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಾಗುವಂತೆ ರಾಜ್ಯ ಬಿಜೆಪಿ ಘಟಕ ಸೂಚಿಸಿದೆ. ಹೀಗಾಗಿ ಖಾಲಿಯಿರುವ ಮುಖ್ಯಮಂತ್ರಿ ಹುದ್ದೆಯನ್ನು ಹೆಚ್ಚುಕಾಲ ಹಾಗೆಯೇ ಇಡುವುದು ಅಪಾಯ ಎಂಬುದು ಬಿಜೆಪಿ ಹೈಕಮಾಂಡ್ಗೂ ಗೊತ್ತಿದೆ.
ಇಂದು ಸಂಜೆ ನಡೆಯುವ ಸಭೆಯಲ್ಲಿ ಶಾಸಕರ ಅಭಿಪ್ರಾಯ ಕೇಳಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆಗಳಿಲ್ಲ. ಬದಲಿಗೆ ಹೈಕಮಾಂಡ್ ಈಗಾಗಲೇ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿರುವ ಅಭ್ಯರ್ಥಿಯ ಹೆಸರನ್ನು ಶಾಸಕರಿಗೆ ತಿಳಿಸಲಾಗುತ್ತದೆ. ಹೈಕಮಾಂಡ್ ಸೂಚಿಸಿರುವ ಅಭ್ಯರ್ಥಿ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂಬುದು ಖಚಿತವಾಗಿದೆ.
ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿ?: ಇದೇ ಸಂದರ್ಭದಲ್ಲಿ ಮಾಜಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆಗಳು ತೀರಾ ಹೆಚ್ಚಾಗಿವೆ ಎಂಬ ಮಾತುಗಳು ಇದೀಗ ಬಿಜೆಪಿಯಲ್ಲಿ ಕೇಳಿ ಬಂದಿವೆ. ಹಂಗಾಮಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿನಿಧಿಸುವ ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಹುದ್ದೆಯನ್ನು ಕೊಡಲು ಹೈಕಾಂಡ್ ತೀರ್ಮಾನ ಮಾಡಿರುವುದು ಖಚಿತವಾಗಿದೆ. ಹೀಗಾಗಿ ಯಡಿಯೂರಪ್ಪ ಅವರನ್ನು ಬಿಟ್ಟುಕೊಡದೇ ಅವರಿಂದಲೇ ಹೊಸ ಮುಖ್ಯಮಂತ್ರಿ ಹೆಸರನ್ನು ಪ್ರಕಟಿಸುವ ಪ್ರಯತ್ನಗಳನ್ನು ಹೈಕಮಾಂಡ್ ಮಾಡುತ್ತಿದೆ. ಹೀಗಾಗಿ ಯಡಿಯೂರಪ್ಪ ಆಪ್ತರಲ್ಲದೇ ಬೇರೆ ಯಾರಿಗಾದರೂ ಸಿಎಂ ಪಟ್ಟ ಕಟ್ಟಿದಲ್ಲಿ ಯಡಿಯೂರಪ್ಪ ಹೆಸರು ಪ್ರಕಟಿಸುವುದು ಕಷ್ಟಸಾದ್ಯ. ಹೀಗಾಗಿ ಹೊಸ ತಂತ್ರವನ್ನು ಬಿಜೆಪಿ ಹೈಕಮಾಂಡ್ ಮಾಡಿದೆ ಎಂಬ ಮಾಹಿತಿ ಬಲವಾಗಿ ಕೇಳಿ ಬರುತ್ತಿದೆ.
ಶಾಸಕಾಂಗ ಪಕ್ಷದ ನೂತನ ನಾಯಕ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆ ಬಳಿಕ ಮುಂದಿನ ಎರಡು ದಿನಗಳಲ್ಲಿ ಪೂರ್ಣ ಪ್ರಮಾಣದ ಸಂಪುಟ ರಚನೆಯನ್ನು ಮಾಡಲಾಗುತ್ತದೆ ಎಂಬ ಮಾಹಿತಿಯೂ ಇದೆ. ಸದ್ಯ ಆರೋಗ್ಯ ತುರ್ತು ಪರಿಸ್ಥಿತಿ ಹಾಗೂ ರಾಜ್ಯದಲ್ಲಿ ಅತಿವೃಷ್ಟಿಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಂತಹ ಸಂಕಷ್ಟದ ಸಂದರ್ಭದಲ್ಲಿ ಹೆಚ್ಚುಕಾಲ ಪೂರ್ಣ ಪ್ರಮಾಣದ ಸಂಪುಟವಿಲ್ಲದೆ ಕೆಲಸ ಮಾಡುವುದು ಅಸಾಧ್ಯದ ಕೆಲಸ. ಹೀಗಾಗಿ ಮುಂದಿನ ಮೂರು ದಿನಗಳಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವುದು ಅಲ್ಲದೆ, ಪೂರ್ಣ ಪ್ರಮಾಣದ ಸಂಪುಟವೂ ರಚನೆ ಆಗಲಿದೆ. ಆ ಮೂಲಕ ಸ್ವಪಕ್ಷದಲ್ಲಿನ ವಿರೋಧಿಗಳು ಹಾಗೂ ವಿರೋಧ ಪಕ್ಷಗಳಿಗೆ ಆಹಾರವಾಗುವುದನ್ನು ಬಿಜೆಪಿ ಹೈಕಮಾಂಡ್ ತಪ್ಪಿಸಲಿದೆ ಎಂದು ತಿಳಿದು ಬಂದಿದೆ.
Recommended Video